ಅಯೋಧ್ಯೆಯ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮವನ್ನು ರಾಜಕೀಯಗೊಳಿಸಿರುವ ಬಗ್ಗೆ ಶಿವಸೇನೆಯ (ಉದ್ಧವ್ ಬಣದ) ನಾಯಕ ಸಂಜಯ್ ರಾವತ್ ಅವರು ಬಿಜೆಪಿ ವಿರುದ್ಧ ವಾಗ್ಧಾಳಿಯನ್ನು ನಡೆಸಿದ್ದು, 2024ರ ಲೋಕಸಭೆ ಚುನಾವಣೆಗೆ ಭಗವಾನ್ ರಾಮನನ್ನು ತಮ್ಮ ಅಭ್ಯರ್ಥಿಯನ್ನಾಗಿ ಘೋಷಿಸುವುದು ಮಾತ್ರ ಬಿಜೆಪಿಗೆ ಬಾಕಿ ಉಳಿದಿದೆ ಎಂದು ಟೀಕಿಸಿದ್ದಾರೆ.
ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಅಯೋಧ್ಯೆಯ ರಾಮಮಂದಿರದಲ್ಲಿ ವಿಗ್ರಹ ಪ್ರತಿಷ್ಠಾಪನೆ ಸಮಾರಂಭದಲ್ಲಿ ಭಾಗವಹಿಸುತ್ತಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಠಾಕ್ರೆ ಖಂಡಿತವಾಗಿಯೂ ಹೋಗುತ್ತಾರೆ ಆದರೆ ಬಿಜೆಪಿಯ ಕಾರ್ಯಕ್ರಮ ಮುಗಿದ ನಂತರ ಹೋಗುತ್ತಾರೆ. ಬಿಜೆಪಿ ಕಾರ್ಯಕ್ರಮಕ್ಕೆ ಯಾಕೆ ಹೋಗಬೇಕು? ಇದು ರಾಷ್ಟ್ರೀಯ ಕಾರ್ಯಕ್ರಮವಲ್ಲ. ಬಿಜೆಪಿಯವರು ಈ ಕಾರ್ಯಕ್ರಮಕ್ಕಾಗಿ ರ್ಯಾಲಿಗಳನ್ನು ನಡೆಸುತ್ತಿದ್ದಾರೆ ಮತ್ತು ಸಾಕಷ್ಟು ಪ್ರಚಾರ ಮಾಡುತ್ತಿದ್ದಾರೆ ಆದರೆ ಅದರಲ್ಲಿ ಶುದ್ಧತೆ ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿಗೆ ಈಗ ಉಳಿದಿರುವ ಒಂದೇ ವಿಷಯವೆಂದರೆ ಭಗವಾನ್ ರಾಮನನ್ನು ಚುನಾವಣೆಗೆ ತಮ್ಮ ಅಭ್ಯರ್ಥಿ ಎಂದು ಘೋಷಿಸುವುದು ಮಾತ್ರವಾಗಿದೆ. ಭಗವಾನ್ ರಾಮನ ಹೆಸರಿನಲ್ಲಿ ಬಹಳ ರಾಜಕೀಯ ಮಾಡಲಾಗುತ್ತಿದೆ. ಜ.22ರಂದು ಅಯೋಧ್ಯೆಯಲ್ಲಿ ನಡೆಯುತ್ತಿರುವ ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮ ಬಿಜೆಪಿ ಕಾರ್ಯಕ್ರಮ ಇದು ರಾಷ್ಟ್ರೀಯ ಕಾರ್ಯಕ್ರಮವಲ್ಲ ಎಂದು ಸಂಜಯ್ ರಾವತ್ ಹೇಳಿದ್ದಾರೆ.
ದೇವಾಲಯದ ಶಂಕುಸ್ಥಾಪನೆ ಸಮಾರಂಭಕ್ಕೆ ಮುನ್ನ ಪ್ರಧಾನಿ ಮೋದಿ ಅಯೋಧ್ಯೆಯಲ್ಲಿ ಹೊಸ ವಿಮಾನ ನಿಲ್ದಾಣ ಮತ್ತು ನವೀಕರಿಸಿದ ರೈಲು ನಿಲ್ದಾಣ ಸೇರಿದಂತೆ ಒಟ್ಟು 11,000 ಕೋಟಿ ಯೋಜನೆಗಳ ಚಾಲನೆಗೆ ಇಂದು ಅಯೋಧ್ಯೆಯಲ್ಲಿದ್ದಾರೆ. ವಿಮಾನ ನಿಲ್ದಾಣವು ದೇವಾಲಯದ ವಾಸ್ತುಶಿಲ್ಪವನ್ನು ಪ್ರತಿಬಿಂಬಿಸುವ ಮುಂಭಾಗವನ್ನು ಹೊಂದಿದ್ದು, ನಗರಕ್ಕೆ ಪ್ರವಾಸೋದ್ಯಮವನ್ನು ಹೆಚ್ಚಿಸುವ ನಿರೀಕ್ಷೆಯಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ.
ಜ.22ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟಣೆ ಕಾರ್ಯಕ್ರಮ ನಡೆಯಲಿದೆ. ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ದೇವೇಗೌಡ, ದಲೈ ಲಾಮಾ, ನಟರಾದ ರಜನಿಕಾಂತ್, ಅಮಿತಾಬ್ ಬಚ್ಚನ್, ಮಾಧುರಿ ದೀಕ್ಷಿತ್ ಮತ್ತು ಕೈಗಾರಿಕೋದ್ಯಮಿಗಳಾದ ಮುಖೇಶ್ ಅಂಬಾನಿ ಮತ್ತು ಅನಿಲ್ ಅಂಬಾನಿ ಸೇರಿದಂತೆ ಹಲವು ಪ್ರಮುಖ ನಾಯಕರು, ಉದ್ಯಮಿಗಳಿಗೆ ಆಹ್ವಾನವನ್ನು ನೀಡಲಾಗಿದೆ. 4,000 ಸಂತರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. 2,200ಕ್ಕೂ ಅಧಿಕ ಅತಿಥಿಗಳು ಭಾಗವಹಿಸಲಿದ್ದಾರೆ. ಅವರಿಗೆ ಬೇಕಿದ್ದ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ.
ರಾಮಮಂದಿರ ಉದ್ಘಾಟಣೆ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಈಗಾಗಲೇ ಸಿಪಿಎಂ ಮತ್ತು ಟಿಎಂಸಿ ಹೇಳಿಕೊಂಡಿದೆ. ರಾಮಂದಿರ ಉದ್ಘಾಟನೆ ಕಾರ್ಯಕ್ರಮವನ್ನು ರಾಜಕೀಯ ಗೊಳಿಸಲಾಗುತ್ತಿದೆ ಎಂದು ಸಿಪಿಎಂ ಆರೋಪಿಸಿದೆ. ಧರ್ಮವು ವೈಯಕ್ತಿಕ ಆಯ್ಕೆಯಾಗಿದೆ ಮತ್ತು ಅದನ್ನು ರಾಜಕೀಯ ಲಾಭದ ಸಾಧನವಾಗಿ ಪರಿವರ್ತಿಸಬಾರದು ಎಂದು ಪಕ್ಷವು ನಂಬುತ್ತದೆ. ಆದ್ದರಿಂದ ನಾವು ಈ ಸಮಾರಂಭದಲ್ಲಿ ಭಾಗವಹಿಸುವುದಿಲ್ಲ. ಬಿಜೆಪಿ ಮತ್ತು ಆರೆಸ್ಸೆಸ್ ಧಾರ್ಮಿಕ ಸಮಾರಂಭವನ್ನು ಪ್ರಧಾನಮಂತ್ರಿ, ಯುಪಿ ಮುಖ್ಯಮಂತ್ರಿ ಮತ್ತು ಇತರ ಸರ್ಕಾರಿ ಅಧಿಕಾರಿಗಳನ್ನು ನೇರವಾಗಿ ಒಳಗೊಂಡ ಸರಕಾರದ ಕಾರ್ಯಕ್ರಮವನ್ನಾಗಿ ಪರಿವರ್ತಿಸಿರುವುದು ಅತ್ಯಂತ ದುರದೃಷ್ಟಕರ. ಸರಕಾರಕ್ಕೆ ಯಾವುದೇ ಧಾರ್ಮಿಕ ಒಲವುಗಳು ಇರಬಾರದು. ಇದು ಸಂವಿಧಾನ ಬಾಹಿರವಾಗಿದೆ. ಕಾರ್ಯಕ್ರಮದ ಆಯೋಜನೆ ವೇಳೆ ಈ ನಿಯಮವನ್ನು ಉಲ್ಲಂಘಿಸಲಾಗಿದೆ ಎಂದು ಸಿಪಿಐಎಂ ಹೇಳಿತ್ತು.
ಇದಕ್ಕೂ ಮೊದಲು ಮಾತನಾಡಿದ್ದ ಬೃಂದಾ ಕಾರಟ್, ರಾಮ ಮಂದಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಮ್ಯೂನಿಷ್ಟ್ ಪಾರ್ಟಿ ಆಫ್ ಇಂಡಿಯಾ ಸಿಪಿಐ(ಎಂ) ಭಾಗವಹಿಸುವುದಿಲ್ಲ ಎಂದು ಹೇಳಿದ್ದರು. ನಮ್ಮ ಪಕ್ಷವು ಧಾರ್ಮಿಕ ನಂಬಿಕೆಗಳನ್ನು ಗೌರವಿಸಲಿದೆ. ಧರ್ಮದೊಂದಿಗೆ ರಾಜಕೀಯ ಬೆರೆಸುವುದು ಸರಿಯಲ್ಲ. ಬಿಜೆಪಿ ರಾಮ ಮಂದಿರ ಉದ್ಘಾಟನೆಯನ್ನು ಸಂಪೂರ್ಣವಾಗಿ ರಾಜಕೀಯಗೊಳಿಸುತ್ತಿದೆ ಎಂದು ಹೇಳಿದ್ದರು.
ಟಿಎಂಸಿ ನಾಯಕರೋರ್ವರು ಈ ಬಗ್ಗೆ ಹೇಳಿಕೆಯನ್ನು ನೀಡಿದ್ದು, ಮುಂದಿನ ತಿಂಗಳು ಅಯೋಧ್ಯೆಯಲ್ಲಿ ನಡೆಯುವ ರಾಮಮಂದಿರ ಉದ್ಘಾಟನೆಗೆ ಮಮತಾ ಬ್ಯಾನರ್ಜಿ ಅಥವಾ ಟಿಎಂಸಿಯ ಯಾವುದೇ ಪ್ರತಿನಿಧಿಗಳು ಭಾಗವಹಿಸುತ್ತಾರಾ ಎಂಬ ಪ್ರಶ್ನೆ ಇದೆ. ನಾವು ಯಾರೂ ಭಾಗವಹಿಸುವುದಿಲ್ಲ. ಧರ್ಮದೊಂದಿಗೆ ರಾಜಕೀಯ ಬೆರೆಸುವುದರಲ್ಲಿ ನಮಗೆ ನಂಬಿಕೆ ಇಲ್ಲ ಎಂದು ಹೇಳಿದ್ದರು.