Thursday, September 19, 2024

ಪ್ರಾಯೋಗಿಕ ಆವೃತ್ತಿ

ರಂಗ್ ರಸಿಯಾ : ರಾಜಾ ರವಿವರ್ಮನೆಂಬ ಕುಂಚ ಕ್ರಾಂತಿಯೂ.. ಸುಗಂಧಿಯೆಂಬ ಸ್ತ್ರೀ ಬಲಿಪಶುವಿನ ರೂಪಕವೂ…

✍️ ಗಿರೀಶ್ ತಾಳಿಕಟ್ಟೆ 
(ಹಳೆಯ ಬರಹ, ಮರು ಓದಿಗಾಗಿ)

ನಿನ್ನೆ ಕೆಲಸಕ್ಕೆ ರಜೆ ಹಾಕಿದ್ದೆ. ಮೈನಡುಗಿಸುವ ಚಳಿ, ಮೆತ್ತಗೆ ಕಾವೇರಿಸಿದ್ದ ಜ್ವರ, ಅವುಗಳ ಶಮನಕ್ಕೆಂದು ಸೇವಿಸಿದ್ದ ಮಾತ್ರೆಗಳ ಮಂಪರು ನನ್ನನ್ನು ಅನಾಮತ್ತು ಹಾಸಿಗೆಯ ಮೇಲೆ ಕೆಡವಿ ರಗ್ಗುಗಳಡಿ ಬಂಧಿಯಾಗಿಸಿದ್ದವು. ದೇಹವನ್ನೇನೊ ಸುಲಭವಾಗಿ ವಂಚಿಸಿಬಿಡಬಹುದು, ಆದರೆ ಎಲ್ಲದಕ್ಕು ಪ್ರಶ್ನೆ ಕೇಳುವ ಈ ಹಾಳು ಮನಸ್ಸನ್ನು ವಂಚಿಸುವುದು ಕಷ್ಟಕಷ್ಟ. ದೇಹ ಬೆಚ್ಚಗೆ ಮುದುಡಿಕೊಂಡಿರಲು ಬಯಸಿದರೂ, ಮನಸ್ಸು ಹೆಚ್ಚು ಹೊತ್ತು ಅದಕ್ಕೆ ಸ್ಪಂದಿಸುತ್ತಿರಲಿಲ್ಲ. ಅತ್ತಿಂದಿತ್ತ, ಇತ್ತಿಂದತ್ತ ಮಗ್ಗಲು ಬದಲಿಸಿ ದೇಹಕ್ಕು ಸಾಕಾಗಿ ಹೋಯ್ತು. ಓದೋಣವೆಂದು ಪುಸ್ತಕ ಕೈಗೆತ್ತಿಕೊಂಡೆ, ಜ್ವರದಿಂದ ಹೈರಾಣಾಗಿದ್ದ ಮನಸ್ಸಿಗೆ ಓದು ರುಚಿಸಲಿಲ್ಲ. ಆಗ ಥಟ್ಟನೆ ನೆನಪಾದದ್ದು ರಂಗ್ ರಸಿಯಾ ಹಿಂದಿ ಸಿನಿಮಾ. ಬಹಳ ದಿನಗಳ ಹಿಂದೆಯೆ ಗೆಳೆಯರೊಬ್ಬರಿಂದ ಕಡ ತಂದು ನನ್ನ ಲ್ಯಾಪ್‌ಟಾಪ್‌ನೊಳಗೆ ಕೂಡಿಹಾಕಿದ್ದ ಆ ಸಿನೆಮಾವನ್ನು ನೋಡುವುದಕ್ಕೆ ಕಾಲ ಒದಗಿಬಂದಿರಲಿಲ್ಲ.

ಅದು ಭಾರತೀಯ ಆಧುನಿಕ ಕಲಾಜಗತ್ತಿನ ಪಿತಾಮಹಾ ರಾಜಾ ರವಿವರ್ಮನ ಬದುಕನ್ನಾಧರಿಸಿದ ಬಯೋಪಿಕ್. ನಮ್ಮ ಇತಿಹಾಸಕ್ಕೊಂದು ಕೆಟ್ಟ ಚಾಳಿ ಇದೆ. ಘಟನಾ ಸರಣಿಗಳನ್ನು ವಸ್ತುನಿಷ್ಠವಾಗಿ ಕಟ್ಟಿಕೊಡದೆ, ತನಗೆ ಬೇಕಾದ್ದನ್ನು ಮಾತ್ರ, ಬೇಕಾದ ಬಗೆಯಲ್ಲಿ ದಾಖಲಿಸಿಕೊಂಡು ಮುಂದಿನ ತಲೆಮಾರುಗಳಿಗೆ ಆ ಅರ್ಧಸತ್ಯವನ್ನಷ್ಟೆ ದಾಟಿಸಿಬಿಡುವ ಚಾಳಿ. ರವಿವರ್ಮನನ್ನು ನಾನು ಇಂತಹುದೇ ಇತಿಹಾಸದ ಮೂಲಕ ಗ್ರಹಿಸಿದ್ದು ಸಹಾ ಅರ್ಧಂಬರ್ಧವಾಗಿಯೇ. ಆತನೊಬ್ಬ ಅದ್ಭುತ ಚಿತ್ರಕಲಾವಿದ, ಭಾರತದ ಕಲಾವಂತಿಕೆಯನ್ನು ವಿದೇಶಿಗರ ಮುಂದೆ ಎತ್ತಿಹಿಡಿದವ, ಬಣ್ಣಗಳನ್ನು ಪಳಗಿಸಿ ಅವುಗಳಿಗೆ ಜೀವ ತುಂಬುವ ಈ ಕುಂಚಬ್ರಹ್ಮನಿಗೆ ಭಾರತೀಯರು ತಮ್ಮ ಅಭಿಮಾನವನ್ನು ಧಾರೆ ಎರೆದಿದ್ದರು, ಅವನಿಗೆ ಎಲ್ಲಿಲ್ಲದ ಪ್ರೋತ್ಸಾಹ ಸಿಕ್ಕಿತ್ತು ಇತ್ಯಾದಿಯಾಗಿ ಗ್ರಹಿಸಿದ್ದೆನೆ ಹೊರತು ತನ್ನ ಕಲಾಕೃತಿಗಳ ಮೂಲಕ ಆತ ಹುಟ್ಟುಹಾಕಿದ ಸಾಮಾಜಿಕ ಕ್ರಾಂತಿ, ಸ್ತ್ರೀವಾದದ ಹೊಸ ಮನ್ವಂತರ, ಅದಕ್ಕೆ ಪ್ರತಿಯಾಗಿ ಕಂದಾಚಾರಿಗಳಿಂದ ಆತ ಅನುಭವಿಸಿದ ಯಾತನೆ, ಆಗಿನ ಕಾಲಕ್ಕೆ ಬ್ರಿಟಿಷ್ ಚಮಚಾಗಿರಿಯಲ್ಲೆ ನೆಲೆ ಭದ್ರ ಮಾಡಿಕೊಂಡಿದ್ದ ದೇಸಿ ಬಂಡವಾಳಿಗರು ಆತ ಮತ್ತು ಆತನ ಕಲಾಕೃತಿಗಳಿಗೆ ಮಾಡಿದ ದ್ರೋಹಗಳ ಬಗ್ಗೆ ನನಗೆ ಅಂದಾಜು ಇರಲಿಲ್ಲ. ರಂಗ್ ರಸಿಯಾ ಸಿನಿಮಾ ರವಿವರ್ಮನ ಅಂತಹ ಮತ್ತೊಂದು ಮಗ್ಗುಲನ್ನು ಮನೋಜ್ಙವಾಗಿ ಪರಿಚಯಿಸಿದ್ದಲ್ಲದೆ ಇವತ್ತು ಇಂಡಿಯಾದಲ್ಲಿ ನಡೆಯುತ್ತಿರೊ ಯಥಾಸ್ಥಿತಿವಾದಿಗಳ ಅತಿರೇಕಗಳನ್ನು ಮತ್ತಷ್ಟಯ ಅರ್ಥ ಮಾಡಿಕೊಳ್ಳಲು ಐತಿಹ್ಯಪೂರ್ಣ ಹಿನ್ನೋಟವನ್ನೂ ಕಟ್ಟಿಕೊಟ್ಟಿತು.

ರವಿವರ್ಮ, ಇಲ್ಲಿಗೆ ಅಜಮಾಸು ನೂರೈವತ್ತು ವರ್ಷಗಳ ಹಿಂದೆ ಬಾಳಿದ್ದ ಮನುಷ್ಯ. ಆಗ ಭಾರತ ಬ್ರಿಟಿಷ್ ವಸಾಹತುಷಾಹಿ ಹಿಡಿತದಲ್ಲಿತ್ತು ಎನ್ನುವುದು ಎಷ್ಟು ಸತ್ಯವೋ, ಮೂಢ ಕಂದಾಚಾರಿಗಳ ಕಪಿಮುಷ್ಟಿಯಲ್ಲಿತ್ತು ಎನ್ನುವುದೂ ಅಷ್ಟೇ ಸತ್ಯ. ಆತ ಕೇರಳದ ಪ್ರಾಂತೀಯ ರಾಜ ಮನೆತನವೊಂದರ ಅಳಿಯ. ಆದರೂ ಅಸ್ಪೃಶ್ಯ ಜಾತಿಯ ಕಾಮಿನಿ ಎಂಬ ಸುಂದರಿಯನ್ನು ತನ್ನ ಕಲಾಕೃತಿಗೆ ರೂಪದರ್ಶಿಯಾಗಿಸಿಕೊಳ್ಳುವ ಮೂಲಕ ಕಂದಾಚಾರವನ್ನು ಧಿಕ್ಕರಿಸಿದ. ಅದಕ್ಕಾಗಿ ತನ್ನ ಮೇಲ್ವರ್ಗದ ಸಮುದಾಯದಿಂದ ಮತ್ತು ಸ್ವತಃ ತನ್ನ ಮಡದಿಯಿಂದ ತಿರಸ್ಕೃತನಾದರೂ ಕಲೆ ಮತ್ತು ಕಲಾಸ್ಫೂರ್ತಿಯ ವಿಚಾರದಲ್ಲಿ ತಾನಿಟ್ಟ ಆ ಕ್ರಾಂತಿಕಾರಿ ಹೆಜ್ಜೆಯ ಬಗ್ಗೆ ಯಾವತ್ತೂ ಅಳುಕು ಪಡಲಿಲ್ಲ. ನಂತರ ಕಲೆಯ ಕತ್ತು ಹಿಸುಕುವ ಅಂಥಾ ವಾತಾವರಣದಲ್ಲಿ ಇರಲಾಗದೆ ಮುಂಬೈ ನಗರಿಯತ್ತ ಮುಖ ಮಾಡುತ್ತಾನೆ.

ಅಲ್ಲೂ ಆತ ತನ್ನ ಕಲಾಕೃತಿಗಳಿಗೆ ಸ್ಫೂರ್ತಿಯಾಗಿ ಅಯ್ಕೆ ಮಾಡಿಕೊಳ್ಳುವುದು, ಈ ಸಮಾಜದ ಬಲಿಪಶುವಾಗಿ ಈ ಸಮಾಜದಿಂದಲೇ ನಿಕೃಷ್ಟವಾಗಿ ಕಾಣಲ್ಪಡುವ ಒಬ್ಬ ವೇಶ್ಯೆಯನ್ನು! ಹೆಸರು ಸುಗಂಧಿ. ಅವಳನ್ನೇ ತನ್ನ ಕಲಾಕೃತಿಗಳ ಪ್ರೇರಣೆಯಾಗಿಸಿಕೊಂಡು ಸರಸ್ವತಿ, ಲಕ್ಷ್ಮಿಯರಂತಹ ಹಿಂದೂ ಧಾರ್ಮಿಕ ಪುರಾಣದ ದೇವತೆಗಳನ್ನೂ ಮತ್ತು ಮಹಾಭಾರತ, ರಾಮಾಯಣದ ಸನ್ನಿವೇಶಗಳನ್ನು ಬಣ್ಣಗಳಲ್ಲಿ ಬಂಧಿಯಾಗಿಸುತ್ತಾನೆ.

ತನ್ನ ಕೃತಿಗಳು ಅರಮನೆಯಲ್ಲೊ, ಐಷಾರಾಮಿ ಸಂಗ್ರಹಾಲಯಗಳಲ್ಲೊ ತೂಗುಹಾಕಿಸಿಕೊಂಡು ಕೆಲವೇ ಜನರ ಸ್ವತ್ತಾಗಿ ಶ್ರೇಷ್ಠ ಕಲಾಕೃತಿಗಳು ಅನ್ನಿಸಿಕೊಳ್ಳುವುದಕ್ಕಿಂತ ಸಾಮಾನ್ಯ ಜನರ ಕಣ್ಣುಗಳಿಗು ಎಟಕಿ, ಅವರ ಅಭಿವ್ಯಕ್ತಿಗಳಿಗೆ ತೆರೆದುಕೊಳ್ಳುವ ಸಾರ್ಥಕ ಕೃತಿಗಳಾಗಬೇಕೆನ್ನುವುದು ರವಿವರ್ಮನ ಹಂಬಲ. ಹಾಗಾಗಿ ಸಾಲ ಮಾಡಿ ಪ್ರಿಂಟಿಂಗ್ ಪ್ರೆಸ್ ಹಾಕಿ, ಜನಸಾಮಾನ್ಯರಿಗೆ ಅಗ್ಗದ ದರದಲ್ಲಿ ದೇವತೆಗಳ ಫೋಟೊ ಮಾರಾಟ ಮಾಡುತ್ತಾನೆ. ಇವತ್ತು ಮನೆಮನೆಗಳಲ್ಲಿ ದೇವಾನುದೇವತೆಗಳ ಮೂರ್ತ ಆಕಾರಗಳುಳ್ಳ ಫೋಟೊಗಳು ರಾರಾಜಿಸುತ್ತಿವೆ. ಆದರೆ ಹಿಂದೂ ಪುರಾಣಗಳಲ್ಲಿ ಕೇವಲ ವರ್ಣನೆಯಾಗಿದ್ದ, ದೇವಾಲಯಗಳ ಮೂರ್ತಿ ಕೆತ್ತನೆಯ ಹೊರತು ಸಾಮಾನ್ಯ ಜನರ ಕಲ್ಪನೆಯಿಂದ ದೇವರ ರೂಪವನ್ನೆ ಕಿತ್ತುಕೊಂಡಿದ್ದ ಆ ಕಾಲಘಟ್ಟದಲ್ಲಿ ಜನರ ಕಲ್ಪನಾ ವಲಯದೊಳಕ್ಕೆ ’ಮನುಷ್ಯರೂಪಿ’ ದೇವರನ್ನು ರವಿವರ್ಮ ತರಲು ಮುಂದಾದದ್ದು ದೊಡ್ಡ ಕ್ರಾಂತಿಯೇ ಆಗಿತ್ತು.

ತನ್ನ ಕಲಾಕೃತಿಗಳ ಮೂಲಕ ಸಾಮಾನ್ಯ ಜನ ಮತ್ತು ದೇವರ ನಡುವಿನ ಅಂತರವನ್ನು ಕಿರಿದುಗೊಳಿಸಿದ ಅವನ ಕ್ರಮ, ಅಷ್ಟೂದಿನ ಮಧ್ಯವರ್ತಿಗಳ ಸೋಗು ಹಾಕಿಕೊಂಡು ಸುಲಿಗೆ ಮಾಡುತ್ತಿದ್ದ ಕಂದಾಚಾರಿಗಳ ಕಣ್ಣು ಕೆಂಪಗಾಗುವಂತೆ ಮಾಡಿತ್ತು. ಹಾಗಾಗಿ ದೇವರನ್ನು ಮನುಷ್ಯ ರೂಪಿನಲ್ಲಿ ಚಿತ್ರಿಸಿದ್ದು ಧರ್ಮನಿಂದನೆ, ಅದರಲ್ಲೂ ಒಬ್ಬ ವೇಶ್ಯೆಯ ರೂಪನ್ನು ಹಿಂದೂ ದೇವತೆಗಳಿಗೆ ಲೇಪಿಸಿದ್ದು ಧರ್ಮದ್ರೋಹ, ಪುರಾಣ ಪಾತ್ರಗಳನ್ನು ಅಶ್ಲೀಲವಾಗಿ ಚಿತ್ರಿಸಿ ಜನರ ಭಾವನೆಗಳನ್ನು ಘಾಸಿಗೊಳಿಸಿದ್ದಾನೆ ಅಂತೆಲ್ಲ ರವಿವರ್ಮನ ಮೇಲೆ ಕೇಸು ದಾಖಲಿಸಿ ನ್ಯಾಯಾಲಯದ ಕಟಕಟೆಗೂ ತಂದು ನಿಲ್ಲಿಸುತ್ತಾರೆ.

ಕೋರ್ಟ್ ಆವರಣದಲ್ಲೆ ಅವನ ಮೇಲೆ ಹಲ್ಲೆ ಮಾಡುತ್ತಾರೆ, ಅವನ ಪ್ರಿಂಟಿಂಗ್ ಪ್ರೆಸ್‌ಗೆ ಬೆಂಕಿಯಿಟ್ಟು ಧ್ವಂಸ ಮಾಡುತ್ತಾರೆ, ಆತ ಮನೆಯಿಂದ ಹೊರಬರುವುದಕ್ಕು ಆಗದಂತೆ ಅವನ ವಿರುದ್ಧ ಪ್ರತಿಭಟನೆಗಳನ್ನು ಹೆಣೆಯುತ್ತಾರೆ. ನಗ್ನತೆ ಎಂದರೆ ಕೇವಲ ಅಶ್ಲೀಲತೆ ಮಾತ್ರವಲ್ಲ, ಅದರಲ್ಲಿ ಸೌಂದರ್ಯದ ರಸಿಕತೆಯೂ ಇರುತ್ತೆ. ಪ್ರಪಂಚಕ್ಕೆ ಕಾಮಶಾಸ್ತ್ರದ ಕೊಡುಗೆ ಕೊಟ್ಟ ನೆಲದ ದೇವಾಲಯಗಳು ತಮ್ಮ ಮೈಮೇಲೆ ’ಮೈಥುನ’ದ ಕಲಾವಂತಿಕೆಯನ್ನು ಹೊತ್ತುಕೊಂಡರೂ ಪವಿತ್ರ ಎನಿಸಿಕೊಂಡಿವೆಯೇ ಹೊರತು ಮೈಲಿಗೆಯೆನಿಸಿಲ್ಲ. ಇನ್ನು ಶತಶತಮಾನಗಳಿಂದ ಶೂದ್ರ ಸಮುದಾಯಗಳನ್ನು ದೇವಾಲಯಗಳಿಂದ ಹೊರಗಿಟ್ಟು ಅವರ ಮನಸ್ಸಿನಲ್ಲಿ ದೇವರ ಆಕಾರಕ್ಕೆ ಆಸ್ಪದವನ್ನೇ ಕೊಡದ ಸಮಾಜದ ಅಸಮಾನತೆಯನ್ನು ಧಿಕ್ಕರಿಸಿ ದೇವರನ್ನೆ ಅಂತವರ ಬಳಿಹೊಯ್ದ ರವಿವರ್ಮ ಧರ್ಮದ್ರೋಹಿ ಆಗುವುದಕ್ಕೆ ಸಾಧ್ಯವೇ ಇಲ್ಲ.

ಕೆಳ ಜಾತಿಯವರಿಗೆ ದೇವಾಲಯ ಪ್ರವೇಶವನ್ನು ಮೇಲ್ವರ್ಗಗಳು ನಿರಾಕರಿಸಿದ್ದನ್ನು ಪ್ರತಿಭಟಿಸಿ ಅಂತಹ ದೇವಾಲಯಗಳಿಗೆ ಪ್ರತಿಯಾಗಿ ಕೆಳಜಾತಿಯವರ ದೇವಾಲಯಗಳನ್ನು ನಿರ್ಮಿಸುವ ಮೂಲಕ ದೇವರನ್ನೆ ತಳಸಮುದಾಯದವರ ಬಳಿ ಕರೆತಂದ ನಾರಾಯಣ ಗುರುಗಳ ಧಾರ್ಮಿಕ ರೂಪದ ಸಾಮಾಜಿಕ ಚಳವಳಿಯು ರವಿವರ್ಮನ ಈ ಹೆಜ್ಜೆಯೊಂದಿಗೆ ಸಾಮ್ಯತೆ ಹೊಂದುತ್ತದೆ. ಇಂತಹ ತರ್ಕಗಳೆಲ್ಲ ವಾದ ಪ್ರತಿವಾದಿಸಲ್ಪಟ್ಟ ನಂತರ ನ್ಯಾಯಾಲಯ ಕೂಡ ಆತನನ್ನು ಆರೋಪಮುಕ್ತಗೊಳಿಸುತ್ತದೆ. ಅಷ್ಟರಲ್ಲಾಗಲೆ ರವಿವರ್ಮನೊಳಗಿನ ಕಲಾವಿದ ಈ ಜಂಜಡಗಳಿಂದ ಜರ್ಝರಿತನಾಗಿರುತ್ತಾನೆ. ಇವತ್ತು ಅವನನ್ನು ಕೊಂಡಾಡುವ ಇದೇ ಸಮಾಜ ಅವತ್ತು ಅವನ ಕಲಾಪ್ರೌಢಿಮೆಯನ್ನು ಅರ್ಥ ಮಾಡಿಕೊಂಡಿದ್ದರೆ ಅವನ ಕುಂಚ ಇನ್ನೂ ಎಂತೆಂಥ ಕಲಾಕುಸುಮಗಳನ್ನು ಅರಳಿಸುತ್ತಿತ್ತೊ. ಈ ಸಮಾಜ ಅದೇ ತಪ್ಪನ್ನು ಇವತ್ತಿಗೂ ಪುನರಾವರ್ತಿಸುತ್ತಿದೆ. ಆದರೆ ರವಿವರ್ಮನ ಜಾಗದಲ್ಲಿ ಎಂ.ಎಫ್. ಹುಸೇನೊ, ಅಮೀರ್ ಖಾನೊ, ಶಿಲುಬೆಗೇರುತ್ತಿದ್ದಾರಷ್ಟೆ!

ರಂಜಿತ್ ದೇಸಾಯಿಯವರ ರಾಜಾ ರವಿವರ್ಮ ಕೃತಿಯನ್ನಾಧರಿಸಿದ ಈ ಸಿನಿಮಾವನ್ನು ನಿರ್ದೇಶಕ ಕೇತನ್ ಮೆಹ್ತಾ ರವಿವರ್ಮನ ಕಲಾಕೃತಿಗಳಷ್ಟೆ ನವಿರಾಗಿ ಕಟ್ಟಿಕೊಡಲು ಯತ್ನಿಸಿದ್ದಾರೆ. ರವಿವರ್ಮನ ಪಾತ್ರದಲ್ಲಿ ರಣದೀಪ್ ಹೂಡಾ ಗಮನ ಸೆಳೆಯುವುದು ನಿಜವಾದರೂ ಇಡೀ ಸಿನಿಮಾವನ್ನು ಆವರಿಸುವುದು ಸುಗಂಧಿ ಪಾತ್ರದ ಒಳಹೊಕ್ಕ ನಂದನಾ ಸೇನ್. ವೇಶ್ಯೆಯ ಪಾತ್ರದಲ್ಲಿ ರವಿವರ್ಮನ ಕಲಾರಸಿಕತೆಗೆ ತನ್ನನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡು, ಆತನ ಊರ್ವಶಿ-ಪುರೂರವ ಪ್ರೇಮಕಾವ್ಯದ ಕಲ್ಪನೆಗೆ ರೂಪವಾಗಲು ತನ್ನ ಸ್ತ್ರೀ ಸೌಂದರ್ಯವನ್ನು ಕ್ಯಾಮೆರಾ ಮುಂದೆ ತೆರೆದಿಟ್ಟು ನಗ್ನಳಾಗುವ ಆಕೆಯ ವೃತ್ತಿಪರತೆ ಸಿನಿಮಾದ ಅದ್ಭುತ ಕ್ಷಣಗಳಲ್ಲಿ ಒಂದು. ಮೂಲ ರವಿವರ್ಮನ ಕಲಾಕೃತಿಗಳಲ್ಲಿ ಕಾಣಸಿಗುವಂತೆ ಈ ದೃಶ್ಯದಲ್ಲು ಅಶ್ಲೀಲತೆಯನ್ನು ಹಿಮ್ಮೆಟ್ಟಿಸಿ, ಸೌಂದರ್ಯದ ರಸಿಕತೆಯೆ ನೋಡುಗರ ಮನಸ್ಸನ್ನು ಆವರಿಸುವಂತೆ ಮಾಡುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ.

ವಿಚಾರಣೆಯ ವೇಳೆ ವಕೀಲರು ಪ್ರಶ್ನೆಗಳ ಮೂಲಕ ಸುಗಂಧಿಗೆ ಮುಜುಗರ ತಂದಿತ್ತಾಗ ಆಕೆ ನೊಂದು ನುಡಿಯುವ “ನನ್ನಂತ ನತದೃಷ್ಟೆಯನ್ನು ಆ ವ್ಯಕ್ತಿ ದೇವತೆಯಾಗಿಸಿದ. ಆದರೆ ನಿಮ್ಮ ಸಮಾಜ ಏನು ಮಾಡಿತು? ನನ್ನನ್ನು ವೇಶ್ಯೆಯಾಗಿಸಿ ಖುಷಿಪಟ್ಟಿತು!” ಮಾತು ಸಿನಿಮಾದ ವೈಚಾರಿಕ ಸೌಂದರ್ಯವನ್ನು ಕಟ್ಟಿಕೊಡುತ್ತದೆ. ಕೊನೆಗೆ ಆತ್ಮಹತ್ಯೆ ಮಾಡಿಕೊಳ್ಳುವ ಸುಗಂಧಿ ಈ ಸಮಾಜದ ಸ್ತ್ರೀ ಬಲಿಪಶು ಪರಂಪರೆಯ ರೂಪಕವಾಗಿ ಕಾಡುತ್ತಾಳೆ. ಆಕೆಯ ಸಾವಿನ ನಂತರವೂ ಸಿನಿಮಾ ಕೊಂಚಹೊತ್ತು ಸರಿದಾಡುತ್ತದಾದರು ನಂಗ್ಯಾಕೊ ಸುಗಂಧಿಯ ಪಾತ್ರದ ನಿರ್ಗಮನವೇ ಸಿನಿಮಾದ ದಿ ಎಂಡ್‌ನಂತೆ ಕಾಡುತ್ತಿದೆ. ಸುಗಂಧಿ ಯಾವ ಪರಿ ಪ್ರೇಕ್ಷಕನನ್ನು ಆವರಿಸುತ್ತಾಳೆಂದರೆ ಒಂದು ಹಂತದಲ್ಲಿ ಸಿನಿಮಾದ ಹೀರೊ ರವಿವರ್ಮನೆ ಆಕೆಯ ಪಾಲಿನ ಖಳನಾಯಕನಂತೆ ಭಾಸವಾಗಿಬಿಡುತ್ತಾನೆ. ನನಗಂತೂ ಹಾಗನ್ನಿಸಿತು.

ಬಹುಶ ಸಿನಿಮಾ ನೋಡಿದರೆ ಅಥವಾ ಈಗಾಗಲೇ ನೋಡಿದ್ದರೆ ನಿಮಗೂ ಹಾಗೇ ಅನ್ನಿಸಬಹುದು. ಸಮಯ ಸಿಕ್ಕಾಗ ಒಮ್ಮೆ ಆ ಸಿನಿಮಾ ನೋಡಿ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!