ಕರ್ನಾಟಕ ರಾಜ್ಯ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಆಯ್ಕೆ ಪ್ರಕ್ರಿಯೆಯಲ್ಲಿ ಸಿಂಧುತ್ವ ಪ್ರಮಾಣ ಪತ್ರ ಕಡ್ಡಾಯ ಮಾಡಿರುವುದನ್ನು ಕೂಡಲೇ ಹಿಂಪಡೆಯುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತಸಂಘವು ಮಂಡ್ಯನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿತು.
ಮಂಡ್ಯ ನಗರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಎದುರು ಜಮಾಯಿಸಿದ ಪ್ರಾಂತ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಇಲಾಖೆಯ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿದರು.
ಸಾಮಾನ್ಯ ಜೇಷ್ಠತ ವರ್ಗದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಸಿಂಧುತ್ವ ಪ್ರಮಾಣ ಪತ್ರ ಕಡ್ಡಾಯ ಮಾಡಿರುವ ಕ್ರಮ ಸರಿಯಲ್ಲ, ಸಾಮಾನ್ಯ ವರ್ಗದಲ್ಲಿ ಆಯ್ಕೆಯಾದ ಇತರೆ ಒಬಿಸಿ ಅಭ್ಯರ್ಥಿಗಳಗೆ ಸಿಂಧುತ್ವ ಪ್ರಮಾಣ ಪತ್ರ ಅಗತ್ಯವಿಲ್ಲದಿದ್ದರೂ ನಿಯಮ ರೂಪಿಸಿರುವುದರಿಂದ ಅಭ್ಯರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ದೂರಿದರು.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಿಂಧುತ್ವ ಪ್ರಮಾಣ ಪತ್ರ ಪಡೆಯದೇ ನೇಮಕಾತಿ ಆದೇಶ ಪ್ರತಿ ನೀಡಿರುವುದು ಕಂಡು ಬಂದಿದೆ. ಸರ್ಕಾರಿ ನೌಕರಿ ಪಡೆಯಲು ಹಲವಾರು ವರ್ಷಗಳ ಕಾಲ ಉನ್ನತ ವಿದ್ಯಾಭ್ಯಾಸ ನಡೆಸಿ ಉತ್ತಮ ಫಲಿತಾಂಶ ಪಡೆದರೂ ಸಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸುಗಳಿಸಲು ವರ್ಷಗಟ್ಟಲೆ ಅಭ್ಯಾಸ ಹಾಗೂ ಪೂರ್ವ ತಯಾರಿ ನಡೆಸಿ, ಸಾಲ ಮಾಡಿ ಬಡ ರೈತರ ಮಕ್ಕಳು ಶ್ರಮಿಸಿ ಅಂತಿಮವಾಗಿ ಆಯ್ಕೆಯಾದರೂ ಸಹ ಅಭ್ಯರ್ಥಿಗಳಿಗೆ ಸಿಂದುತ್ವಪ್ರಮಾಣ ಪತ್ರ ಕೇಳುತ್ತಿರುವುದು. ಸಂವಿಧಾನ ವಿರೋಧಿ ಮತ್ತು ಕಾನೂನು ಬಾಹಿರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಾಂತ ರೈತಸಂಘದ ಅಧ್ಯಕ್ಷ ಎಲ್.ಎನ್.ಭರತ್ ರಾಜ್ ಸೇರಿದಂತೆ ಮತ್ತತರರು ಭಾಗವಹಿಸಿದ್ದರು.