ಮಂಡ್ಯ ಜಿಲ್ಲೆಯಲ್ಲಿ ನವೆಂಬರ್ 4 ಮತ್ತು 5ರಂದು ಮಂಡ್ಯ ನಗರದ 3 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿರುವ ಕರ್ನಾಟಕ ಲೋಕಸೇವಾ ಆಯೋಗದ ಸ್ಪರ್ಧಾತ್ಮಕ ಪರೀಕ್ಷೆಯನ್ನು ಶಿಸ್ತುಬದ್ಧವಾಗಿ ನಡೆಸಿ ಎಂದು ಅಪರ ಜಿಲ್ಲಾಧಿಕಾರಿ ಡಾ. ಎಚ್.ಎಲ್ ನಾಗರಾಜ್ ತಿಳಿಸಿದರು.
ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಕರ್ನಾಟಕ ಲೋಕಸೇವಾ ಆಯೋಗದ ವತಿಯಿಂದ ವಿವಿಧ ಇಲಾಖೆಗಳಲ್ಲಿನ ಗ್ರೂಪ್ ಸಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ವೀಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪರೀಕ್ಷೆ ಕೇಂದ್ರಗಳಲ್ಲಿ ಯಾವುದೇ ಲೋಪದೋಷಗಳಿಲ್ಲದೆ ಪ್ರಾಮಾಣಿಕ ಹಾಗೂ ನಿಷ್ಪಕ್ಷಪಾತ ವ್ಯಕ್ತಿಯನ್ನು ಗುರುತಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಅದಕ್ಕಾಗಿ ಕಟ್ಟುನಿಟ್ಟಿನಲ್ಲಿ ಎಲ್ಲಾ ಅಭ್ಯರ್ಥಿಗಳ ಮೇಲೆ ಗಮನಹರಿಸಿ, ಅಭ್ಯರ್ಥಿಗಳು ಪರೀಕ್ಷೆ ಕೇಂದ್ರಕ್ಕೆ ಒಂದು ಗಂಟೆ ಮುಂಚಿತವಾಗಿ ಹಾಜರಾಗಬೇಕು ಹಾಗೂ ಅಭ್ಯರ್ಥಿಗಳ ಮೇಲೆ ಸೂಕ್ಷ್ಮವಾಗಿ ಸಂಬಂಧಪಟ್ಟ ಅಧಿಕಾರಿಗಳು ತಪಾಸಣೆ ನಡೆಸಬೇಕು ಎಂದರು.
ಪ್ರತಿಯೊಂದು ರೂಂ ನಲ್ಲಿ ಜಾಮರ್ ಗಳ ಅಳವಡಿಕೆ ಕಡ್ಡಾಯ ಮತ್ತು ಪರೀಕ್ಷೆ ಮೇಲ್ವಿಚಾರಕರಿಗೆ ಕ್ಯಾಮೆರಾ ಅಳವಡಿಕೆ ಕಡ್ಡಾಯ. ಏಕೆಂದರೆ ಮೇಲ್ವಿಚಾರಕರು ಹಾಗೂ ಅಭ್ಯರ್ಥಿಗಳ ಚಲನ-ವಲನವನ್ನು ಗಮನಿಸಲು ಹಾಗೂ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಅನೇಕಾ ಸ್ಕ್ಯಾಂ ಗಳನ್ನು ತಡೆಗಟ್ಟಲು ಕೆ.ಪಿ.ಎಸ್.ಸಿ.ಯು ಹೊಸದಾಗಿ ಈ ಕಾರ್ಯತಂತ್ರವನ್ನು ಜಾರಿಗೆ ತಂದಿದೆ ಎಂದರು.
ಅಭ್ಯರ್ಥಿಗಳ ಗುರುತಿನ ಚೀಟಿ, ಪ್ರವೇಶಪತ್ರವನ್ನು ಕಡ್ಡಾಯವಾಗಿ ಪರಿಶೀಲಿಸಬೇಕು ಹಾಗೂ ಬಯೋಮೆಟ್ರಿಕ್ ನಿಂದ ಅವರೇ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕು. ಅಂಧ ಅಭ್ಯರ್ಥಿಗಳು ಕಡ್ಡಾಯವಾಗಿ ನಮೂನೆ -5ನ್ನು ತಂದಿರಬೇಕು ಹಾಗೂ ಅವರಿಗೆ ಹೆಚ್ಚುವರಿಯಾಗಿ 20 ನಿಮಿಷಗಳ ಕಾಲಾವಕಾಶ ನೀಡಬೇಕು ಎಂದರು.
ನವೆೆಂಬರ್ 4 ರಂದು ಮಧ್ಯಾಹ್ನ 2 ಗಂಟೆಯಿಂದ 4 ಗಂಟೆಯವರೆಗೆ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ.
ನವೆಂಬರ್ 5 ರಂದು ಬೆಳಿಗ್ಗೆ 10 ರಿಂದ 11.30ರವರಿಗೆ ಪತ್ರಿಕೆ -1, ಮಧ್ಯಾಹ್ನ 2 ಗಂಟೆಯಿಂದ 4ಗಂಟೆಯವರೆಗೆ ಪತ್ರಿಕೆ -2 ಇರುತ್ತದೆ ಎಂದರು.
ಈ ಸಂದರ್ಭದಲ್ಲಿ ಅಪರ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಕೃಷಿ ಇಲಾಖೆಯ ಉಪನಿರ್ದೇಶಕರಾದ ಮಾಲತಿ, ಡಿಡಿಪಿಯು ಶಿವರಾಮೇಗೌಡ, ಡಯಟ್ ಪ್ರಿನ್ಸಿಪಾಲ ಪುರುಷೋತ್ತಮ್, ಬಿ.ಇ.ಓ ಮಹದೇವು, ಜಿಲ್ಲಾ ಖಜಾನಾಧಿಕಾರಿ ಸಿದ್ದಲಿಂಗಸ್ವಾಮಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.