ತಮ್ಮ ಆರೋಗ್ಯ ರಕ್ಷಣೆಗೆ, ಭವಿಷ್ಯಕ್ಕೆ ಹೇಗೆ ವಿಮೆ ಬಹು ಮುಖ್ಯವೋ, ಹಾಗೇ ರೈತರ ಬೆಳೆಗೂ ವಿಮೆ ಮುಖ್ಯ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.
ಬೆಂಗಳೂರಿನ ಜಯನಗರದಲ್ಲಿ ಸ್ಕೈಲೈಟ್ ಮ್ಯಾನೇಜ್ಮೆಂಟ್ ಸರ್ವಿಸಸ್ ನ ನೂತನ ಪ್ರಾದೇಶಿಕ ಕಚೇರಿ ಉದ್ಘಾಟಿಸಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ಶೇ.98% ರಷ್ಟು ಬೆಳೆವಿಮೆಯನ್ನು ಸರ್ಕಾರವೇ ಭರಿಸಲಿದ್ದು, ಉಳಿದ ಕೇವಲ ಶೇ 2% ವಿಮೆ ಭರಿಸಲು ರೈತರು ಯೋಚಿಸುತ್ತಾರೆ. ಕಡಿಮೆ ಪ್ರಮಾಣದಲ್ಲಿ ರೈತರು ಮಾತ್ರ ಬೆಳೆ ವಿಮೆ ನೋಂದಾಯಿಸುತ್ತಾರೆ. ಎಲ್ಲಾ ರೈತರು ಬೆಳೆ ವಿಮೆ ನೊಂದಾಯಿಸುವಂತಾಗಬೇಕು. ತಮ್ಮ ಆರೋಗ್ಯ ರಕ್ಷಣೆಗೆ ಹೇಗೆ ವಿಮೆ ಮಾಡಿಸುತ್ತಾರೋ, ಹಾಗೇ ಬೆಳೆಗೂ ವಿಮೆ ಮಾಡಿಸಬೇಕೆಂದು ತಿಳಿಸಿದರು.
ಕಳೆದ ಸಾಲಿನಲ್ಲಿ ಬೆಳೆ ವಿಮೆ ನೋಂದಾಯಿಸಿದ 19 ಲಕ್ಷ ರೈತರಿಗೆ ಸುಮಾರು 1,700 ಕೋಟಿ ಯಷ್ಟು ಬೆಳೆ ವಿಮೆ ಪ್ರಸ್ತಾವನೆಗಳನ್ನು ಇತ್ಯರ್ಥಪಡಿಸಲಾಗುತ್ತಿದೆ ಎಂದು ತಿಳಿಸಿದರು.
ಸ್ಕೈಲೈಟ್ ಮ್ಯಾನೇಜ್ಮೆಂಟ್ ಸರ್ವಿಸಸ್ ಸಂಸ್ಥೆ ಕೂಡ ರೈತರ ವಿಮಾ ವಲಯಗಳಲ್ಲಿ ಗುರುತಿಸಿಕೊಂಡು, ಬೆಂಗಳೂರಿನಲ್ಲಿ ಪ್ರಾದೇಶಿಕ ಕಚೇರಿ ಪ್ರಾರಂಭವಾಗುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀರಂಗಪಟ್ಟಣ ಶಾಸಕ ಹಾಗೂ ಚಾಮುಂಡೇಶ್ವರಿ ವಿದ್ಯುತ್ ಕಂಪನಿ ನಿಗಮ ಮಂಡಳಿ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ, ಸಮಾಜ ಸೇವಕಿ ರೇವತಿ ಕಾಮತ್ ಹಾಗೂ ಸ್ಕೈಲೈಟ್ ಮ್ಯಾನೇಜ್ಮೆಂಟ್ ಸಂಸ್ಥೆಯ ನಿರ್ದೇಶಕ ಕನಕ ಸರ್ಕಾರ್ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.