ಮಂಡ್ಯದಲ್ಲಿ ಮುಂಬರುವ ಡಿಸೆಂಬರ್ ನಲ್ಲಿ ನಡೆಯಲಿರುವ 87ನೇ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಬಿಡುಗಡೆ ಮಾಡಿದರು.
ವಿಧಾನ ಸೌಧದ ಕೊಠಡಿ ಸಂಖ್ಯೆ 334ರ ಸಮ್ಮೇಳನ ಸಭಾಂಗಣದಲ್ಲಿ ಲಾಂಛನ ಬಿಡುಗಡೆ ಮಾಡಿದ ಅವರು ಸಮ್ಮೇಳನಕ್ಕೆ ಶುಭ ಹಾರೈಸಿದರು.
ಲಾಂಭನದ ವಿಶೇಷವೇನು ?
ಲಾಂಛನದಲ್ಲಿ ಕನ್ನಡದ ಬಾವುಟ, ಭುವನೇಶ್ವರಿಯ ಭಾವಚಿತ್ರ, ತಾಯಿ ಕಾವೇರಿ ಪ್ರತಿಮೆ, ಕಸಾಪ ಲಾಂಛನ, ನಾಲ್ವಡಿ ಕೃಷ್ಣರಾಜ ಒಡೆಯರ್ ಭಾವಚಿತ್ರ, ಕೆ.ಆರ್.ಎಸ್ ಅಣೆಕಟ್ಟು, ಕಬ್ಬು, ಭತ್ತದ ಬೆಳೆ, ಬೆಲ್ಲ, ಶಿವನ ಸಮುದ್ರದ ವಿದ್ಯುತ್ ಉತ್ಪಾದನಾ ಕೇಂದ್ರ, ಗಮನಚುಕ್ಕಿ ಜಲಪಾತ, ಉಳುಮೆ ಮಾಡುವ ರೈತ, ಶಿವಪುರ ಧ್ವಜ ಸತ್ಯಾಗ್ರಹ ಹಾಗೂ ಮಂಡ್ಯ ಸಕ್ಕರೆ ಕಾರ್ಖಾನೆಯನ್ನು ಚಿತ್ರಿಸಲಾಗಿದೆ. ಒಟ್ಟಾರೆ ಮಂಡ್ಯ ಜಿಲ್ಲೆಯ ಸಂಸ್ಕೃತಿಯನ್ನು ಬಿಂಬಿಸುವಂತೆ ಲಾಂಛನ ಮೂಡಿ ಬಂದಿದೆ.
ಈ ಸಂದರ್ಭದಲ್ಲಿ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ನಾಡು, ಹಾಗೂ ನೆಲೆದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಜೊತೆಗೆ ಹೆಚ್ಚು ಅರ್ಥಪೂರ್ಣ, ವೈವಿಧ್ಯಮಯವಾಗಿರುವಂತೆ ಮಂಡ್ಯ ಜಿಲ್ಲೆಯ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಬೇಕಿದೆ ಎಂದರು.
ಶಾಸಕರಿಗೆ ನೇತೃತ್ವ ನೀಡಿ
ಮಂಡ್ಯ ಜಿಲ್ಲೆಯ ಎಲ್ಲಾ ಜನ ಪ್ರತಿನಿಧಿಗಳನ್ನು ತೊಡಗಿಸಿಕೊಂಡು ಅರ್ಥಪೂರ್ಣವಾಗಿ ಸಮ್ಮೇಳನ ಆಯೋಜಿಸುವಂತೆ, ಎಲ್ಲಾ ಸಮಿತಿಗಳಲ್ಲಿ ಸ್ಥಳೀಯ ಶಾಸಕರಿಗೆ ನೇತೃತ್ವ ನೀಡಿ,ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಸೇರ್ಪಡೆ ಮಾಡಿಕೊಳ್ಳುವಂತೆ ಸಚಿವರಾದ ಎನ್ ಚಲುವರಾಯಸ್ವಾಮಿ ತಿಳಿಸಿದರು
ಜಿಲ್ಲೆಯ ಎಲ್ಲಾ ಸಂಘಟನೆಗಳನ್ನು ಸಹ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುವಂತೆ ಸಚಿವರು ನಿರ್ದೇಶನ ನೀಡಿದರು. ರಾಜ್ಯದ ಕಲಾವಿದರ ಜೊತೆಗೆ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಿ, ಎಲ್ಲಾ ಸಮಿತಿಗಳ ನಡುವೆ ಯಾವುದೇ ಗೊಂದಲವಿಲ್ಲದಂತೆ ಸಮನ್ವಯ ಸಾಧಿಸಿ ಕೆಲಸ ಮಾಡಬೇಕು. ಇದು ಇಡೀ ರಾಜ್ಯದ ನುಡಿ ಹಬ್ಬ ಜಿಲ್ಲೆಯಾದ್ಯಂತ ಸಂಭ್ರಮ ಸಡಗರ ಇರುವಂತೆ ಎಲ್ಲಾ ವರ್ಗದವರನ್ನು ಸೇರಿಸಿ ಸಮ್ಮೇಳನ ಸಂಘಟಿಸಿ ಎಂದ ಅವರು, ಸಮ್ಮೇಳನದ ಯಶಸ್ವಿ ಸಂಘಟನೆಗೆ ವಿವಿಧ ಸಮಿತಿಗಳ ರಚನೆ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ವೇದಿಕೆ ನಿರ್ಮಾಣ, ನಿರ್ವಹಣೆ, ಶಿಷ್ಠಾಚಾರ ಪಾಲನೆ, ಮೆರವಣಿಗೆ ಸಾಂಸ್ಕೃತಿಕ, ಸಾಹಿತ್ಯಿಕ ಕಾರ್ಯಕ್ರಮಗಳು ,ಗೋಷ್ಠಿ ಆಯೋಜನೆ ,ವಸತಿ, ಕುಡಿಯುವ ನೀರು,ಸ್ವಚ್ಚತೆ, ಊಟೋಪಚಾರ, ಹಣಕಾಸು, ಪ್ರಚಾರ,
ಪುಸ್ತಕ ಮಳಿಗೆ ಸ್ಮರಣ ಸಂಚಿಕೆ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು.
ಮಂಡ್ಯ ಜಿಲ್ಲಾಧಿಕಾರಿ ಡಾ: ಕುಮಾರ ಅವರು ಸಮ್ಮೇಳನದ ಸಂಘಟನೆ ಕುರಿತು ಮಾಹಿತಿ ಹಾಗೂ ಅಭಿಪ್ರಾಯ,
ಸಲಹೆಗಳನ್ನು ನೀಡಿದರು.
ಶಾಸಕರಾದ ರಮೇಶ್ ಬಾಬು ಬಂಡಿ ಸಿದ್ದೇಗೌಡ, ಪಿ.ಎಂ ನರೇಂದ್ರ ಸ್ವಾಮಿ, ಕೆ.ಎಂ.ಉದಯ್,
ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾದ್ಯಕ್ಷರಾದ ನಾಡೋಜ ಮಹೇಶ್ ಜೋಷಿ, ಲಾಂಛನ ರಚಿಸಿದ ಕಲಾವಿದರ ಶಂಕರ್, ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ಡಾ ಪಟೇಲ್ ಪಾಂಡು, ನೇ.ಭ ರಾಮಲಿಂಗ ಶೆಟ್ಟಿ,
ಮೀರಾ ಶಿವಲಿಂಗಯ್ಯ, ಡಾ ಪದ್ಮಿನಿ ನಾಗರಾಜ್,ಎಂ.ಎಸ್. ಶ್ರೀನಿವಾಸಮೂರ್ತಿ ಹಾಜರಿದ್ದರು.