ಮಂಡ್ಯ ಜಿಲ್ಲಾ ಹಿಂದೂ ಮುಸ್ಲಿಂ ಭಾವೈಕ್ಯತೆ ಸಮಿತಿ ವತಿಯಿಂದ ನ.10 ರಂದು ಮಂಡ್ಯನಗರದ ಗುತ್ತಲು ರಸ್ತೆಯ ಬೆನಕ ಸಮುದಾಯ ಭವನದಲ್ಲಿ “ಟಿಪ್ಪು ನೆನಪು-ಟಿಪ್ಪು ಅಮರ” ಕಾರ್ಯಕ್ರಮದ ಜೊತೆಗೆ ಬೃಹತ್ ರಕ್ತದಾನ ಶಿಬಿರ ಸೇರಿದಂತೆ ಹಲವು ಸಮಾಜಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ನಗರಸಭೆ ಸದಸ್ಯ ಶ್ರೀಧರ್ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯ ಜಿಲ್ಲಾ ರಕ್ತನಿಧಿ, ಮಿಮ್ಸ್, ವೀನಸ್ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಮೈಸೂರು ಇವರ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರ, ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ, ಈಗಾಗಲೇ ರಕ್ತದಾನಕ್ಕೆ 200 ಜನ ನೋಂದಣಿ ಮಾಡಿಕೊಂಡಿದ್ದು, ಸುಮಾರು 500 ಯೂನಿಟ್ ರಕ್ತ ಸಂಗ್ರಹಿಸುವ ಗುರಿ ಇದೆ. ಈ ಸ್ವಯಂ ಪ್ರೇರಿತ ಬೃಹತ್ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಆಸ್ತಕ್ತರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಬೇಕೆಂದು ಮನವಿ ಮಾಡಿದರು.
ಕಾಂಗ್ರೆಸ್ ಮುಖಂಡ ಜಬೀವುಲ್ಲಾ ಮಾತನಾಡಿ, ಅಂದು ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಬಿ.ಪಿ., ಷುಗರ್, ಥೈರಾಯ್ಡ್, ಜನರಲ್ ಮೆಡಿಸನ್ ತಪಾಸಣೆ, ಮಂಡ್ಯ ಜಿಲ್ಲಾಸ್ಪತ್ರೆ ಗರ್ಭಿಣಿ ಮತ್ತು ಬಾಣಂತಿಯರಿಗೆ ಹಣ್ಣು ವಿತರಣೆ, ಪ್ರೇರಣಾ ಟ್ರಸ್ಟ್ ಆಂಧ ಮಕ್ಕಳ ವಸತಿ ನಿಲಯದ ಮಕ್ಕಳಿಗೆ ಊಟದ ವ್ಯವಸ್ಥೆ ಹಾಗೂ ಸಾರ್ವಜನಿಕರಿಗೆ ಜ್ಯೂಸ್ ವಿತರಣೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸಮಾರೋಪ ಸಮಾರಂಭ
ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಆದಿಚುಂಚನಗಿರಿ ಕೊಮ್ಮೇರಹಳ್ಳಿ ಶಾಖಾ ಮಠದ ಪುರುಷೊತ್ತಮಾನಂದನಾಥಸ್ವಾಮಿ, ಫಾದರ್ ಆಂಡ್ರೋ ಜಾನ್ ಸೇರಿದಂತೆ ಮುಸ್ಲಿಂ ಧರ್ಮ ಗುರುಗಳು ಭಾಗವಹಿಸಲಿದ್ದಾರೆ.
ಮುಖ್ಯ ಭಾಷಣಕಾರರಾಗಿ ಪ್ರಸಿದ್ಧ ಇತಿಹಾಸಕಾರರಾದ ಧರ್ಮೇಂದ್ರಕುಮಾರ್ ಅರೇನಹಳ್ಳಿ ಹಾಗೂ ಮಹಮದ್ ಕಲೀವುಲ್ಲಾ ನಾಗಮಂಗಲ ಅವರು ಭಾಗವಹಿಸುವರು. ಶಾಸಕ ಪಿ.ರವಿಕುಮಾರ್ ಸಮಾರಂಭ ಅಧ್ಯಕ್ಷತೆ ವಹಿಸುವರು ಎಂದು ವಿವರಿಸಿದರು.
ಗೋಷ್ಠಿಯಲ್ಲಿ ನಗರಸಭಾ ಸದಸ್ಯರಾದ ನಯೀಂ, ಜಾಕೀರ್ ಪಾಷ, ಕಾಂಗ್ರೆಸ್ ಮುಖಂಡ ಸಿ.ಎಂ.ದ್ಯಾವಪ್ಪ ಹಾಗೂ ಮಂಡ್ಯ ಜಿಲ್ಲಾ ವಕ್ಫ್ ಸಮಿತಿ ಅಧ್ಯಕ್ಷ ಜಬೀವುಲ್ಲಾ ಖಾನ್ ಉಪಸ್ಥಿತರಿದ್ದರು.