ಮದ್ದೂರು ತಾಲ್ಲೂಕಿನ ಭಾರತೀನಗರ ಸಮೀಪದ ದೊಡ್ಡರಸಿನಕೆರೆ ಗ್ರಾಮದ ರೌಡಿ ಅರುಣ್ ಅಲಿಯಾಸ್ ಕಪ್ಪೆ
ಕೊಲೆ ಹಿಂದಿನ ಅಸಲಿ ಕಾರಣ ಬೇರೆಯೇ ಇದೆ.
ದೊಡ್ಡರಸಿನಕೆರೆ ಗ್ರಾಮದ ರೌಡಿ ಶೀಟರ್ ಗಳಾದ ಅರುಣ್ ಅಲಿಯಾಸ್ ಕಪ್ಪೆ ಹಾಗೂ ದೇವರಾಜು ಇಬ್ಬರು ಸ್ನೇಹಿತರು. ಇವರಿಬ್ಬರೂ ಸೇರಿ 2019ರಲ್ಲಿ ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಪ್ರಕರಣದಲ್ಲಿ 307 ಕೊಲೆ ಯತ್ನದ ಕೇಸು ಕೆ.ಎಂ.ದೊಡ್ಡಿ ಠಾಣೆಯಲ್ಲಿ ದಾಖಲಾಗಿದೆ.
ಈ ಪ್ರಕರಣದಲ್ಲಿ ಆರೋಪಿಯಾಗಿರುವ ಎ1 ದೇವರಾಜು ಹಾಗೂ ದೊಡ್ಡಯ್ಯ ಇಬ್ಬರೂ ಸೇರಿ 307 ಕೇಸಿನ ದೂರುದಾರ ವ್ಯಕ್ತಿಯ ಜೊತೆ ರಾಜಿ ಮಾಡಿಕೊಳ್ಳಲು ಮುಂದಾಗಿದ್ದಾರೆ. ಈ ಕೇಸು ನ್ಯಾಯಾಲಯದಲ್ಲಿ ಚಾರ್ಜ್ ಆಗಿದ್ದು, ವಿಚಾರಣೆ ಸಂದರ್ಭದಲ್ಲಿ ಪ್ರಕರಣ ದುರ್ಬಲವಾಗುವಂತೆ ಮಾಡುವ ಹಿನ್ನಲೆಯಲ್ಲಿ ರಾಜಿ ಪಂಚಾಯಿತಿ ನಡೆದು 2 ಲಕ್ಷ ಹಣ ಕೊಡುವುದಾಗಿ ಮಾತಾಗಿತ್ತು.
ಈ ಪ್ರಕರಣದಲ್ಲಿ ರೌಡಿ ಅರುಣ್ ಅಲಿಯಾಸ್ ಕಪ್ಪೆ ಕೂಡ ಆರೋಪಿ.ಈ ವಿಚಾರಕ್ಕೆ ಸಂಬಂಧಿಸಿದಂತೆ
ಅರುಣ್ ಹಾಗೂ ದೇವರಾಜು, ದೊಡ್ಡಯ್ಯ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ನವೆಂಬರ್ 20 ರಂದು ಕೆ.ಎಂ. ದೊಡ್ಡಿಯ ಬಾರೊಂದರಲ್ಲಿ ಮದ್ಯ ಸೇವಿಸುತ್ತಿದ್ದ ಅರುಣ್ ನನಗೆ ಹೇಳದೆ ಕೇಳದೆ ಯಾಕೆ ನೀವು ರಾಜಿ ಮಾಡಿಕೊಂಡಿದ್ದೀರಿ. ನನಗೆ ಎರಡು ಲಕ್ಷ ರೂಪಾಯಿ ಕೊಡಿ, ನಾನು ಕೇಸು ಮುಂದುವರಿಸುತ್ತೇನೆ ಎಂದು ಮೊಬೈಲ್ ನಲ್ಲಿ ಕೆಟ್ಟದಾಗಿ ಬೈದಿದ್ದ.
ಇದನ್ನೂ ಓದಿ:ರೌಡಿ ಅರುಣ್ ಅಲಿಯಾಸ್ ಕಪ್ಪೆ ಮೇಲಿದ್ದ ಕೇಸುಗಳೆಷ್ಟು ಗೊತ್ತಾ…!
ಎಲ್ಲಿದ್ದೀರೋ ಎಂದಾಗ ಊರಲ್ಲಿ ಸೊಸೈಟಿ ಬಳಿ ಇದ್ದೇವೆ ಅಂದಾಗ ಅಲ್ಲಿಗೆ ಬರ್ತೇನೆ ಇರಿ ಎಂದು ಬಂದ ಅರುಣ್ ಬೋಳಿ ಮಕ್ಳ ರಾಜಿ ಮಾಡ್ಕೊಂಡಿದಿರಾ,ನಾನು ಕೇಸು ಆಡುತ್ತೇನೆ 2 ಲಕ್ಷ ಕೊಡಿ ಎಂದು ದೇವರಾಜುಗೆ ಬೈದಿದ್ದಾನೆ.ನಮ್ಮ ಹತ್ತಿರ ಅಷ್ಟು ಹಣ ಇಲ್ಲ ಅಂದಾಗ ಮತ್ತೆ ಕೆಟ್ಟದಾಗಿ ಯಾರ್ಯಾರೋ ರಾಜಕಾರಣಿಗಳ ಕರೆಸಿ ಆರ್ಕೆಸ್ಟ್ರಾ ಮಾಡಿಸುವಾಗ ದುಡ್ಡಿರುತ್ತೆ,ನನಗೆ ಕೊಡೊಕೆ ಆಗಲ್ವಾ ಅಂತ ಮತ್ತೆ ಕೆಟ್ಟದಾಗಿ ಬೈದಿದ್ದಾನೆ.
ದೇವರಾಜು,ದೊಡ್ಡಯ್ಯ ಜೊತೆಗಿದ್ದ ಸಂಗಡಿಗರಾದ ಅಭಿ, ಪುಟ್ಟಸ್ವಾಮಿ, ರಾಘವೇಂದ್ರ, ಚಂದು, ಅರವಿಂದ್ ಕುಡಿದು ಚಿತ್ತಾಗಿದ್ದ ಅರುಣ್ ಮೇಲೆ ಹಲ್ಲೆ ನಡೆಸಿದ್ದಾರೆ. ಆಗ ಅರುಣ್ ಬಾಯಿ ಮತ್ತು ಮೂಗಿನಲ್ಲಿ ರಕ್ತಸ್ರಾವವಾಗಿದೆ. ಇದನ್ನು ಕಂಡ ಗ್ರಾಮಸ್ಥರು ಒಂದೇ ಊರಿನವರಾಗಿ ಈ ರೀತಿ ಗಲಾಟೆ ಯಾಕೆ ಮಾಡಿಕೊಳ್ಳುತ್ತೀರಿ ಎಂದು ಬೈದು ಕೂಡಲೇ ಅರುಣನನ್ನು ಕೆ.ಎಂ. ದೊಡ್ಡಿಯ ಜಿ.ಮಾದೇಗೌಡ ಆಸ್ಪತ್ರೆಗೆ ಕಳುಹಿಸಿದ್ದಾರೆ.
ಈ ಸಂದರ್ಭದಲ್ಲಿ ಅರುಣ್ ಪೊಲೀಸರಿಗೆ ಫೋನ್ ಮಾಡಿದ್ದನ್ನು, ಯಾರೋ ಹುಡುಗರಿಗೆ ಪೋನ್ ಮಾಡಿ ನಮಗೆ ಹೊಡೆಸಲು ಕರೆಸುತ್ತಿದ್ದಾನೆ ಎಂದು ತಪ್ಪಾಗಿ ಅರ್ಥೈಸಿಕೊಂಡ ದೇವರಾಜು ಮತ್ತು ದೊಡ್ಡಯ್ಯ ಕಾಲುವೆ ಮಾರ್ಗದಲ್ಲಿ ಕೆ.ಎಂ.ದೊಡ್ಡಿ ಕಡೆಗೆ ಹೋಗುತ್ತಿದ್ದ ಅರುಣ್ ಮತ್ತು ಆತನ ಜೊತೆಗಿದ್ದ ರವೀಶ್ ಅಲಿಯಾಸ್ ಕಟ್ಟಪ್ಪನನ್ನು ಅಡ್ಡ ಹಾಕಿ ತಡೆದಿದ್ದಾರೆ. ದೇವರಾಜು, ದೊಡ್ಡಯ್ಯ, ಸಂಗಡಿಗರಾದ ಪುಟ್ಟಸ್ವಾಮಿ, ಅಭಿ, ರಾಘವೇಂದ್ರ, ಚಂದು, ಅರವಿಂದ್ ರಸ್ತೆಯಲ್ಲಿ ಕಬ್ಬು ತುಂಬುತ್ತಿದ್ದ ಗಾಡಿಯ ಕಡೆಗೂಟವನ್ನು ತೆಗೆದು ಕೊಂಡು ಮಾರಣಾಂತಿಕವಾಗಿ ಮತ್ತೆ ಹಲ್ಲೆ ಮಾಡಿದ್ದಾರೆ.
ಅರುಣ್ ಮಕಾಡೆ ಬಿದ್ದ ಸಂದರ್ಭದಲ್ಲಿ ಆತನ ತಲೆಗೆ ಬಲವಾಗಿ ಹೊಡೆದು ಪರಾರಿಯಾಗಿದ್ದಾರೆ. ಕೂಡಲೇ ಆತನನ್ನು ಕೆ.ಎಂ ದೊಡ್ಡಿಯ ಜಿ.ಮಾದೇಗೌಡ ಆಸ್ಪತ್ರೆಗೆ ಕರೆತಂದು ಅಲ್ಲಿಂದ ಮೈಸೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ.ಆದರೆ ಚಿಕಿತ್ಸೆ ಫಲಕಾರಿಯಾಗದೆ ಅರುಣ್ ಅಲಿಯಾಸ್ ಕಪ್ಪೆ ಸಾವನ್ನಪ್ಪಿದ್ದಾನೆ.
ಒಂದೇ ಊರಿನವರಾಗಿ, ಜೊತೆಯಲ್ಲೇ ಆಡಿ ಬೆಳೆದ ಸ್ನೇಹಿತರೇ ಅರುಣ್ ಕೊಲೆ ಮಾಡಿ ಆರೋಪಿಗಳಾಗಿ ಜೈಲು ಸೇರಿದ್ದಾರೆ.