ಮಂಡ್ಯ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಸರ್ವೋದಯ ಕರ್ನಾಟಕ ಪಕ್ಷದಿಂದ ಘೋಷಣೆಯಾಗಿರುವ ರೈತ ಮುಖಂಡ ಎಸ್.ಸಿ.ಮಧುಚಂದನ್ ಅವರಿಗೆ ಬೆಂಬಲ ನೀಡುವುದಾಗಿ ಕೀರೆಮಡಿ ಮಹಿಳಾ ಒಕ್ಕೂಟದ ಮುಖ್ಯಸ್ಥೆ ಪಣಕನಹಳ್ಳಿ ಪೂರ್ಣಿಮಾ ಎಸ್.ಎಸ್ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು, ಸರ್ವೋದಯ ಕರ್ನಾಟಕ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಯುವಕ ನಾಯಕ ಮಧುಚಂದನ್ ಅವರನ್ನು ಮಂಡ್ಯ ವಿಧಾನಸಭಾ ಕ್ಷೇತ್ರಕ್ಕೆ ಘೋಷಣೆ ಮಾಡಿರುವುದು ಸಂತಸ ತಂದಿದೆ. ಕಳೆದ ಏಳೆಂಟು ವರ್ಷಗಳಿಂದ ನಮ್ಮ ನಡುವೆ ಇದು, ನಮ್ಮ ಆರೋಗ್ಯದ ಉಳಿವಿಗಾಗಿ ಕೀರೆಮಡಿ ಮಹಿಳಾ ಕೂಟಗಳನ್ನು ರಚಿಸಿ, ಪ್ರತಿ ಮಹಿಳೆಯರಿಗೆ ತಮ್ಮ ಮನೆಯಲ್ಲಿಯೇ ಸ್ವಾವಲಂಬಿಯಾಗಿ ತರಕಾರಿ ಬೆಳೆದುಕೊಳ್ಳಲು ಬಿತ್ತನೆ ಬೀಜ ವಿತರಿಸುವ, ಕೃಷಿ ಕೂಲಿಕಾರ್ಮಿಕ ಮಹಿಳೆಯರಿಗೆ ಅವರ ಕೆಲಸಗಳಿಗೆ ಅನುಕೂಲವಾಗುವಂತೆ ಸಲಕರಣೆಗಳನ್ನು ಆರ್ಗಾನಿಕ್ ಮಂಡ್ಯ ಫೌಂಡೇಶನ್ ವತಿಯಿಂದ ಮಧುಚಂದನ್ ಅವರು ಉಚಿತವಾಗಿ ನೀಡುತ್ತಿದ್ದಾರೆ ವಿವರಿಸಿದರು.
ಅಲ್ಲದೇ ಮಂಡ್ಯ ಜಿಲ್ಲೆಯ ಲಕ್ಷಾಂತರ ಹಾಲು ಉತ್ಪಾದಕ ಮಹಿಳೆಯರ ಪಾಲಿಗೆ ಕಲ್ಪವೃಕ್ಷವಾಗಿರುವ ಮನ್ಮುಲ್ ಭ್ರಷ್ಟಾಚಾರದ ವಿರುದ್ಧ ದನಿಯೆತ್ತಿ ಹೋರಾಡಿ ಭ್ರಷ್ಟಾಚಾರವನ್ನು ಬಯಲಿಗೆಳೆದ ಮಧುಚಂದನ್ ಅವರು, ಯುವಕರು ಹಾಗೂ ಮಹಿಳೆಯರ ಸಂಘಟನೆಯಲ್ಲಿ ತೊಡಗಿದ್ದಾರೆ. ಪ್ರಸ್ತುತ ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡುವಂತೆ ಆಗ್ರಹಿಸಿ ಹೋರಾಟ ನಡೆಸುತ್ತಿದ್ದಾರೆ. ಆದ್ದರಿಂದ ಅವರನ್ನು ಬೆಂಬಲಿಸುತ್ತೇವೆಂದು ತಿಳಿಸಿದರು.
ಗೋಷ್ಠಿಯಲ್ಲಿ ಕೀರೆಮಡಿ ಮಹಿಳಾ ಒಕ್ಕೂಟದ ಮುಖಂಡರಾದ ಮಮತ, ತಾಯಮ್ಮ, ಸುಧಾ, ಶಶಿಕಲಾ, ಸರೋಜಮ್ಮ, ರಾಧಮಣಿ ಉಪಸ್ಥಿತರಿದ್ದರು.