ತಮಿಳುನಾಡಿಗೆ ನೀರು ಹರಿಸಲು ಆದೇಶ ಮಾಡಿರುವ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ದ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯು ನಡೆಸುತ್ತಿರುವ ಸರದಿ ಉಪವಾಸ ಧರಣಿಯು 6ನೇ ದಿನಕ್ಕೆ ಕಾಲಿಟ್ಟಿದೆ.
ಮಂಡ್ಯನಗರದ ಸರ್ ಎಂ ವಿ ಪ್ರತಿಮೆ ಎದುರು ಗುರುವಾರ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಮುಖಂಡರಾದ ಸುಜಾತ ಕೃಷ್ಣ, ಪುಟ್ಟಮ್ಮ ಸ್ವರ್ಣಸಂದ್ರ, ಸತ್ಯಭಾಮ ಅರುವನಹಳ್ಳಿ, ಆರ್ ಶೋಭಾ ವೆಂಕಟೇಶ್ ಕಲ್ಲಹಳ್ಳಿ, ಶಶಿಮಣಿ ಲೋಲಾಪತಿ, ಸರಳ ಕುಮಾರ್, ವೈ.ಜಿ ರತ್ನಮ್ಮ ಪಾಲಹಳ್ಳಿ ಗಾಯತ್ರಿ ಪಾಲ್ಗೊಂಡು ಹೋರಾಟ ಬೆಂಬಲಿಸಿದರು.
ತಮಿಳುನಾಡಿಗೆ ನಿರಂತರ ನೀರು ಹರಿಸುವುದನ್ನು ಕಾಯಕ ಮಾಡಿಕೊಂಡಿರುವ ರಾಜ್ಯ ಸರ್ಕಾರ ರೈತರಿಗೆ ದ್ರೋಹ ಮಾಡುತ್ತಿದೆ, ಚಳಿಗಾಲದ ಅಧಿವೇಶನದಲ್ಲಿ ಕಾವೇರಿ ಬಗ್ಗೆ ಚರ್ಚಿಸಿ ದೃಢ ನಿಲುವು ಮಾಡಬೇಕು, ಇದೇ ರೀತಿ ನಿರ್ಲಕ್ಷ, ಬೇಜವಾಬ್ದಾರಿತನ ಪ್ರದರ್ಶಿಸಿದರೆ ಹೋರಾಟ ಮತ್ತಷ್ಟು ತೀವ್ರ ಗೊಳಿಸಲಾಗುವುದು ಎಂದು ಹೇಳಿದರು.
ಕೇಂದ್ರ ಸರ್ಕಾರ ಸಹ ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ಮುಂದುವರೆಸಿದೆ, ಸೌಹಾರ್ದಯುತ ಪರಿಹಾರ ರೂಪಿಸಲು ಮುಂದಾಗಿಲ್ಲ, ಒಕ್ಕೂಟ ವ್ಯವಸ್ಥೆಯಲ್ಲಿ ಪ್ರಧಾನ ಮಂತ್ರಿಗಳು ಮಧ್ಯಪ್ರವೇಶಿಸಿ ತಾತ್ಕಾಲಿಕ ಪರಿಹಾರ ರೂಪಿಸಬಹುದಿತ್ತು. ಇದುವರೆಗೂ ಮೌನ ಮುರಿಯದಿರುವುದು ಸರಿಯಲ್ಲ ಎಂದು ಹೇಳಿದರು.
ಇಂದಿನ ಹೋರಾಟದಲ್ಲಿ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ ಬೋರಯ್ಯ, ಸಂಘಟನಾ ಕಾರ್ಯದರ್ಶಿ ಸುನಂದ ಜಯರಾಂ, ಬೋರೇಗೌಡ, ರೈತಸಂಘದ ಇಂಡುವಾಳು ಚಂದ್ರಶೇಖರ್ ಸೇರಿದಂತೆ ಮತ್ತಿತರರಿದ್ದರು.