‘ನೀರು ಬಿಡಿ’ ಎನ್ನುವ ಕಾವೇರಿ ನದಿ ನೀರು ಪ್ರಾಧಿಕಾರದ ಅದೇಶದ ವಿರುದ್ದ ರಾಜ್ಯ ಸರ್ಕಾರವು ಕಾನೂನು ಹೋರಾಟವನ್ನು ಮುಂದುವರಿಸುವುದರ ಜೊತೆಗೆ ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ಇರುವ ನೀರನ್ನು ಜನ ಜಾನುವಾರುಗಳಿಗೆ ಅನುಕೂಲವಾಗುವಂತೆ ಉಳಿಸಿಕೊಡಲು ಮುಂದಾಗಬೇಕೆಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯೂ ನಿರ್ಣಯ ಕೈಗೊಂಡಿದೆ.
ಮಂಡ್ಯ ನಗರದಲ್ಲಿ ನಡೆಯುತ್ತಿರುವ ನಿರಂತರ ಧರಣಿ ಸ್ಥಳದಲ್ಲಿ ಸಭೆ ನಡೆಸಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು, ಮುಖಂಡರಾದ ಸುನಂದಾ ಜಯರಾಂ ನಿರ್ಣಯಗಳನ್ನು ಮಾಧ್ಯಮಗಳಿಗೆ ತಿಳಿಸಿದರು.
ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಕಾವೇರಿ ಹೋರಾಟವನ್ನು ಜಿಲ್ಲೆಯ ಪ್ರತಿ ತಾಲೂಕು ಕೇಂದ್ರಗಳಿಗೂ ವಿಸ್ತರಿಸಲು ತೀರ್ಮಾನಿಸಿದೆ. ಸಮಿತಿಯ ತಾಲೂಕು ಘಟಕಗಳು ಸಕ್ರಿಯವಾಗಿ ನಿರಂತರ ಪ್ರತಿಭಟನೆ ಮುಂದುವರೆಸುವಂತೆ ಸಮಿತಿ ಮನವಿ ಮಾಡಲಾಗಿದೆ ಎಂದರು.
ಜಿಲ್ಲಾ ಕೇಂದ್ರದಲ್ಲಿ ನಡೆಯುತ್ತಿರುವ ನಿರಂತರ ಧರಣೆಗೆ ಒಂದೊಂದು ದಿನ ಒಂದು ತಾಲೂಕಿನ ಚುನಾಯಿತ ಜನಪ್ರತಿನಿಧಿ, ಮಾಜಿ ಜನಪ್ರತಿನಿಧಿ ಸಂಘಟನೆಗಳು ಮತ್ತು ಹೋರಾಟಗಾರರು ಭಾಗಿಯಾಗುವಂತೆ ನಿರ್ಣಯ ಕೈಗೊಳ್ಳಲಾಗಿದೆ. ಜಿಲ್ಲಾ ಕೇಂದ್ರದಲ್ಲಿ ನಡೆಯುತ್ತಿರುವ ನಿರಂತರ ಧರಣಿಯನ್ನು ನ್ಯಾಯ ಸಿಗುವವರೆಗೂ ಮುಂದುವರಿಸಲು ತೀರ್ಮಾನಿಸಲಾಗಿದೆ ಎಂದರು.
ಸಮಿತಿಯ ಸಭೆಯಲ್ಲಿ ಜಿ.ಬಿ. ಶಿವಕುಮಾರ್, ಮಾಜಿ ಸಚಿವ ಸಿ ಎಸ್ ಪುಟ್ಟರಾಜು, ಕೆ ಬೋರಯ್ಯ, ಅಂಬುಜಮ್ಮ, ರೈತಸಂಘದ ಇಂಡುವಾಳು ಚಂದ್ರಶೇಖರ್, ಸಿದ್ದರಾಮೇ ಗೌಡ,ಕನ್ನಡ ಸೇನೆ ಮಂಜುನಾಥ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.