ಉತ್ತರ ಪ್ರದೇಶದ ಜ್ಞಾನವಾಪಿ ಮಸೀದಿಯ ನೆಲ ಅಂತಸ್ತಿನಲ್ಲಿ ಪೂಜೆಗೆ ಅವಕಾಶ ಮಾಡಿಕೊಟ್ಟಿರುವ ಕ್ರಮ ಅಘಾತಕಾರಿಯಾಗಿದದ್ದು ಎಂದಿರುವ ಎಸ್’ಡಿಪಿಐ, 1991ರ ಪ್ರಾರ್ಥನಾ ಸ್ಥಳದ ಕಾಯಿದೆಯನ್ನು ಸಮರ್ಪಕವಾಗಿ ಜಾರಿಗೊಳಿಸುವಂತೆ ಒತ್ತಾಯಿಸಿ ಮಂಡ್ಯದ ಸರ್ ಎಂ.ವಿ ಪ್ರತಿಮೆ ಎದುರು ಶನಿವಾರ ಪ್ರತಿಭಟನೆ ನಡೆಸಿತು.
ಎಸ್’ಡಿಪಿಐ ಜ್ಞಾನವಾಪಿ ನಮ್ಮದು, ಮುಸ್ಲಿಂ ವಿರೋಧಿ ಆದೇಶ ಸಹಿಸೋಲ್ಲ ಎಂದು ಕೇಂದ್ರ ಬಿಜೆಪಿ ಸರ್ಕಾರ ಹಾಗೂ ಸಂಘ ಪರಿವಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಜ್ಞಾನ ವಾಪಿ ಮಸೀದಿಯಲ್ಲಿ ಪೂಜೆಗೆ ಅವಕಾಶ ಮಾಡಿಕೊಟ್ಟಿರುವುದು ಸರಿಯಲ್ಲ, 1991ರ ಪ್ರಾರ್ಥನಾ ಸ್ಥಳದ ಕಾಯ್ದೆ ಪ್ರಕಾರ ಬಾಬರಿ ಮಸೀದಿ ಹೊರತುಪಡಿಸಿ 1947 ಆಗಸ್ಟ್ 15 ರಲ್ಲಿ ಅಸ್ತಿತ್ವದಲ್ಲಿರುವ ಯಾವುದೇ ಧಾರ್ಮಿಕ ಸ್ಥಳವನ್ನು ಯಥಾಸ್ಥಿತಿಯಲ್ಲಿ ಮುಂದುವರೆಸಬೇಕೆಂದು ಹಾಗೂ ಯಾವುದೇ ವಿವಾದಕ್ಕೆ ಅವಕಾಶ ಇಲ್ಲ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ, ಆದರೂ ಸಹ ಜ್ಞಾನವಾಪಿ ಮಸೀದಿ ಮೇಲೆ ದುರುದ್ದೇಶ ಪ್ರೇರಿತ ವಿವಾದ ಸೃಷ್ಟಿಸಿ ಸಮುದಾಯಗಳ ನಡುವೆ ದ್ವೇಷ ಮತ್ತು ಸಂಘರ್ಷ ಉಂಟುಮಾಡುವ ಹುನ್ನಾರ ಮಾಡಲಾಗಿದೆ ಎಂದು ಆರೋಪಿಸಿದರು.
ವಾರಣಾಸಿ ಜಿಲ್ಲಾ ನ್ಯಾಯಾಧೀಶರು ನಿವೃತ್ತಿಯ ಒಂದು ದಿನ ಮುಂಚೆ ತರಾತುರಿಯಲ್ಲಿ ಪೂಜೆಗೆ ಅವಕಾಶ ಮಾಡಿಕೊಡುವ ತೀರ್ಪು ನೀಡಿರುವುದು ಕಳವಳಕಾರಿಯಾಗಿದೆ, 400 ವರ್ಷಗಳ ಹಿಂದೆ ನಿರ್ಮಾಣ ಮಾಡಿರುವ ಮಸೀದಿಯಲ್ಲಿ ಪ್ರಾರ್ಥನೆ ನಡೆಯುತ್ತಾ ಬಂದಿತ್ತು, ರಾಜಕೀಯ ಲಾಭಕ್ಕಾಗಿ ಮಸೀದಿ ಮಂದಿರ ವಿವಾದ ಹುಟ್ಟು ಹಾಕಲಾಗಿದೆ, ಬಾಬರಿ – ಮಂದಿರ ವಿವಾದ ಹುಟ್ಟುಹಾಕಿ ಹತ್ಯಾಕಾಂಡ, ರಕ್ತಪಾತ ನಡೆಸಿ ದ್ವೇಷ ರಾಜಕೀಯ ಮಾಡಿದ್ದನ್ನು ಜಗತ್ತು ನೋಡಿದೆ, ಜ್ಞಾನವಾಪಿ ವಿವಾದದ ಹುನ್ನಾರವನ್ನು ನಾಗರಿಕ ಸಮಾಜ ಖಂಡಿಸಬೇಕು ಎಂದು ಹೇಳಿದರು.
ವಿವಾದ ಹುಟ್ಟು ಹಾಕುವವರು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರ ವಿರುದ್ಧ ನ್ಯಾಯಾಲಯ ಕ್ರಮವಹಿಸಬೇಕು, ಜ್ಞಾನ ವಾಪಿ ಮಸೀದಿಯನ್ನು ಮಸೀದಿ ಮಂಡಳಿಯ ಒಡೆತನಕ್ಕೆ ಬಿಟ್ಟುಕೊಡಬೇಕು, ದೇಶದ ಎಲ್ಲಾ ಪ್ರಾರ್ಥನಾ ಮಂದಿರಗಳಿಗೆ ಸೂಕ್ತ ರಕ್ಷಣೆ ನೀಡಿ ಯಥಾ ಸ್ಥಿತಿ ಕಾಪಾಡಬೇಕು ಎಂದು ಆಗ್ರಹಿಸಿದರು.
ಎಸ್ ಡಿ ಪಿ ಐ ಜಿಲ್ಲಾಧ್ಯಕ್ಷ ಸಾದತ್ ಪಾಷಾ, ಕಾರ್ಯದರ್ಶಿ ಮುಕ್ತಾರ್ ಅಹಮದ್, ತಾಹಿರ್,ನೂರುಲ್ಲಾ, ಅತೀಖ್ ಅಹಮದ್, ಫಜಲ್, ಅಜ್ಮತ್ ಉಲ್ಲ, ಅಪ್ರೋಜ್ ಅಹಮದ್ ನೇತೃತ್ವ ವಹಿಸಿದ್ದರು.