ಮಂಡ್ಯ ನಗರದ ಹೊರವಲಯದ ಎಸ್.ಬಿ ಎಜುಕೇಶನ್ ಟ್ರಸ್ಟ್ ನ ಜ್ಞಾನಸಾಗರ ಕ್ಯಾಂಪಸ್ ನಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಮಂಡ್ಯ; ಮೇಧಾ ಎಜುಕೇಶನ್ ಫರ್ಮ್, ಮೈಸೂರು; ಮಾಂಡವ್ಯ ನಗರ ಲಯನ್ಸ್ ಸಂಸ್ಥೆ; ಕೃಷಿಕ ಲಯನ್ಸ್ ಸಂಸ್ಥೆ; ಮಂಡ್ಯ ಸೆಂಟ್ರಲ್ ಲಯನ್ಸ್ ಸಂಸ್ಥೆ, ಮಂಡ್ಯ; ರಕ್ತನಿಧಿ ಕೇಂದ್ರ ಮಿಮ್ಸ್, ಮಂಡ್ಯ; ಮಾಂಡವ್ಯ ಪ್ರಥಮ ದರ್ಜೆ ಕಾಲೇಜು ಮತ್ತು ಮಾಂಡವ್ಯ ಬಿಎಡ್ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಹೃದಯಯ ದಿನ, ವಿಶ್ವ ಪ್ರಥಮ ಚಿಕಿತ್ಸಾ ದಿನ, ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನದ ದಿನದ ಕಾರ್ಯಕ್ರಮವು ಜರುಗಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಂಡ್ಯದ ಕೃಷಿಕ ಲಯನ್ಸ್ ಸಂಸ್ಥೆ ಆಡಳಿತಾಧಿಕಾರಿ ಕೆ.ಟಿ. ಹನುಮಂತು ಮಾತನಾಡಿ, ಜೀವ ರಕ್ಷಿಸುವ ನಿಟ್ಟಿನಲ್ಲಿರುವ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ವಿಶ್ವದ ಯಾವುದೇ ಸ್ಥಳದಲ್ಲಿ ಯುದ್ಧ, ಪ್ರಕೃತಿ ವಿಕೋಪ ಸೇರಿದಂತೆ ಯಾವುದೇ ಅನಾಹುತ ಸಂಭವಿಸಿದ್ದಲ್ಲಿ ಮುಂಚೂಣಿಯಲ್ಲಿ ಮುನ್ನುಗ್ಗಿ ರೆಡ್ ಕ್ರಾಸ್ ಸಂಸ್ಥೆಯು ಅದರ ಕಾರ್ಯವನ್ನು ನಿರ್ವಹಿಸುವುದು ಸಂಸ್ಥೆಯ ವಿಶೇಷತೆಯಾಗಿದೆ ಎಂದರು.
ಪ್ರಸ್ತುತ ಸಂಭವಿಸುತ್ತಿರುವ ಇಸ್ರೇಲ್ ಯುದ್ಧದಲ್ಲೂ ಕೂಡ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ಅಲ್ಲಿಯ ಜನರಿಗೆ ಅವಶ್ಯಕತೆ ಇರುವ ಆಹಾರ ಪದಾರ್ಥಗಳು ಮತ್ತು ಔಷಧಿಗಳನ್ನು ಒದಗಿಸುತ್ತಿದೆ. ಈ ತರಹದ ಸೇವೆಗೆ ಇಡೀ ವಿಶ್ವದಲ್ಲೇ ಮೂರು ಬಾರಿ ನೊಬೆಲ್ ಪ್ರಶಸ್ತಿಯನ್ನು ಗಳಿಸಿರುವ ಏಕೈಕ ಸಂಸ್ಥೆ ರೆಡ್ ಕ್ರಾಸ್ ಸಂಸ್ಥೆಯಾಗಿದೆ ಎಂದು ರೆಡ್ ಕ್ರಾಸ್ ಸಂಸ್ಥೆಯ ಸಂಸ್ಥಾಪಕರಾದ ಹೆನ್ರಿ ಡೂನಾಂಟ್ ರನ್ನು ಸ್ಮರಿಸಿದರು.
ಹೃದಯಘಾತವಾದ ಸಂದರ್ಭದಲ್ಲಿ ಮೊಟ್ಟಮೊದಲಿಗೆ ಮಾಡಬೇಕಾದ ಸಿಪಿಆರ್ ಎಂಬ ಹೃದಯದ ಪ್ರಥಮ ಚಿಕಿತ್ಸೆಯನ್ನು ಪ್ರತಿಯೊಬ್ಬ ನಾಗರಿಕರು ತಿಳಿದುಕೊಳ್ಳಬೇಕು ಎಂಬುದು ರೆಡ್ ಕ್ರಾಸ್ ಸಂಸ್ಥೆಯ ಆಶಯವಾಗಿದೆ ಎಂದರು. ಇದರೊಟ್ಟಿಗೆ ಪ್ರಥಮ ಚಿಕಿತ್ಸೆ ಮತ್ತು ರಕ್ತದಾನದ ಮಹತ್ವವನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಮಂಡ್ಯದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಧ್ಯಕ್ಷರಾದ ಮೀರ ಶಿವಲಿಂಗಯ್ಯ, ಮಂಡ್ಯದ ಮಿಮ್ಸ್ ನ ಪ್ರಾಂಶುಪಾಲರಾದ ಡಾ. ತಮ್ಮಣ್ಣ ಪಿ.ಎಸ್, ಎಸ್.ಬಿ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಡಾ. ಬಿ. ಶಿವಲಿಂಗಯ್ಯ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿಗಳಾದ ಹಾಗೂ ಮಿಮ್ಸ್ ನ ನಿವೃತ್ತ ಪ್ರಾಂಶುಪಾಲರಾದ ಡಾ. ಕೆ.ಎಂ. ಶಿವಕುಮಾರ್, ಮಾಂಡವ್ಯ ನಗರ ಲಯನ್ ಸಂಸ್ಥೆಯ ಅಧ್ಯಕ್ಷರಾದ ಡಾ. ಬಿ.ಎಸ್. ಶಿವಕುಮಾರ್, ಮಂಡ್ಯ ಸೆಂಟ್ರಲ್ ಲೈನ್ಸ್ ಸಂಸ್ಥೆಯ ಅಧ್ಯಕ್ಷರಾದ ಚೇತನ್ ಕೃಷ್ಣ, ಎಸ್. ಜೆ.ಐ.ಸಿ ಅಂಡ್ ಆರ್ ಮೈಸೂರು ಮತ್ತು ಆಸ್ಟರ್ ಜಿ. ಮಾದೇಗೌಡ ಆಸ್ಪತ್ರೆ, ಭಾರತೀ ನಗರದ ಸಹಾಯಕ ಪ್ರಾಧ್ಯಾಪಕರಾದ ಡಾ. ಹೇಮಾ ಎಸ್, ಮೈಸೂರಿನ ಅಪೊಲೊ ಆಸ್ಪತ್ರೆಯ ಕನ್ಸಲ್ಟೆಂಟ್ ಕಾಡಿಯಾಲಜಿಸ್ಟ್ ಡಾ. ವೀನು ಜೆ., ಮೈಸೂರಿನ ಮಣಿಪಾಲ್ ಆಸ್ಪತ್ರೆಯ ಕನ್ಸಲ್ಟೆಂಟ್ ಕಾಡಿಯಲಜಿಸ್ಟ್ ಡಾ. ಶಶಿರೇಖಾ ಡಿ. ಸೇರಿದಂತೆ ಡಾ. ಸುಮಾರಾಣಿ ಶಂಭು ಮತ್ತುಭವಾನಿ ಶಂಕರ್ ಇನ್ನಿತರರು ಹಾಜರಿದ್ದರು.