ನಮ್ಮ ದಿನನಿತ್ಯದ ಕಾರ್ಯದಲ್ಲಿ ಆಹಾರ ಸೇವನೆಗೂ ಮುನ್ನ ಕೈಯನ್ನು ಸ್ವಚ್ಛಗೊಳಿಸಿ ಮುಂದಿನ ಕೆಲಸಗಳನ್ನು ಮಾಡಿದರೆ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಶೇಖ್ ತನ್ವೀರ್ ಆಸಿಫ್ ತಿಳಿಸಿದರು.
ಮಂಡ್ಯ ಜಿಲ್ಲಾ ಆರೋಗ್ಯ ಇಲಾಖೆ ವತಿಯಿಂದ ಡವರಿ ಕಾಲೋನಿಯಲ್ಲಿ ಆಯೋಜಿಸಿದ್ದ ತೀವ್ರತರ ಅತಿಸಾರ ಭೇದಿ ನಿಯಂತ್ರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಅನೇಕ ಕಾಯಿಲೆಗಳು ಉತ್ಪತ್ತಿಯಾಗುತ್ತಿವೆ ಅದನ್ನು ತಡೆಗಟ್ಟಲು ಅರೋಗ್ಯ ಇಲಾಖೆ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಅತೀಸಾರ ಭೇದಿ ಹೆಚ್ಚಾಗಿ ಮಕ್ಕಳಲ್ಲಿ ಸ್ವಚ್ಛತೆಯ ಕೊರತೆಯಿಂದ ಉಂಟಾಗುತ್ತದೆ. ಅದನ್ನು ತಡೆಗಟ್ಟಲು ಕೈ ತೊಳೆಯುವ ಬಗ್ಗೆ ಅರಿವು ಮೂಡಿಸುವುದು ಅಗತ್ಯ. ಅತಿಸಾರ ಭೇದಿ ಉಂಟಾದ ಸಂದರ್ಭದಲ್ಲಿ ದೇಹ ಮತ್ತು ರಕ್ತದಲ್ಲಿನ ತೇವಾಂಶದ ಕೊರತೆ ಉಂಟಾಗಿ ಆಯಾಸ ಹಾಗೂ ಮುಂತಾದ ಸಮಸ್ಯೆ ಉಂಟಾಗುತ್ತದೆ. ಇದಕ್ಕೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡದಿದ್ದಲ್ಲಿ ದುಷ್ಪರಿಣಾಮವಾಗಿ ಸಾವು ಸಹ ಉಂಟಾಗುವ ಸಾಧ್ಯತೆ ಇರುತ್ತದೆ ಎಂದರು.
ಅತೀಸಾರ ಭೇದಿ ತಡೆಗಟ್ಟಲು ಓ.ಆರ್.ಎಸ್ ಪ್ಯಾಕೆಟ್ ಬಹಳ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಇದನ್ನು ತೆಗೆದುಕೊಳ್ಳುವ ಮುಂಚೆ ನಮ್ಮ ದೇಹದಲ್ಲಿ ಹೊರ ಹೋಗುತ್ತಿರುವ ತೇವಾಂಶದ ನೀರಿನ ಎರಡು ಪಟ್ಟು ಹೆಚ್ಚಿನ ನೀರಿನ ಜೊತೆ ಇದನ್ನು ಸೇವನೆ ಮಾಡಬೇಕು ಹಾಗೂ ಜಿಂಕ್ ಮಾತ್ರೆ ಸೇವನೆ ಮುಖ್ಯ ಎಂದರು .
ದೇಶದಲ್ಲಿ ಪ್ರತಿಶತ 6ರಷ್ಟು ಮಕ್ಕಳು ಅತಿಸಾರ ಬೇಧಿಯಿಂದ ಸಾವನ್ನು ಕಾಣುತ್ತಿದ್ದಾರೆ ಇದನ್ನು ತಡೆಗಟ್ಟಲು ದಿನನಿತ್ಯ ಸ್ವಚ್ಛವಾಗಿ ಸೋಪಿನಿಂದ ಕೈ ತೊಳೆಯುವುದು ಉತ್ತಮ ಪರಿಸರ ಕಲ್ಪಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.
ಇದೇ ಸಂದರ್ಭದಲ್ಲಿ ಡಿಎಚ್ಓ ಡಾ.ಕೆ ಮೋಹನ್, ಟಿಹೆಚ್ಓ ಡಾ.ಜವರೇಗೌಡ, ಆರ್.ಸಿ.ಎಚ್ ಡಾ. ಅನಿಲ್ ಕುಮಾರ್, ಕುಷ್ಟ ರೋಗ ನಿರ್ಮೂಲನಾಧಿಕಾರಿ ಡಾ. ಸೋಮಶೇಖರ್, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಮಂಗಳ, ಕಾರ್ಪೊರೇಟರ್ ನಾಗೇಶ್ ಸೇರಿದಂತೆ ಇನ್ನಿತರರಿದ್ದರು.