ವರದಿ:ಪ್ರಭು ವಿ.ಎಸ್.
ಜೀವನದಲ್ಲಿ ಜಿಗುಪ್ಸೆಗೊಂಡ ವ್ಯಕ್ತಿಯೊಬ್ಬ ತನ್ನ ಕೈ,ಕಾಲುಗಳನ್ನು ಕಟ್ಟಿಕೊಂಡು ಶಿಂಷಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದಾಗ, ಪ್ರಾಣದ ಹಂಗು ತೊರೆದು ಯುವಕರು ಆತನನ್ನು ಕಾಪಾಡಿದ ಘಟನೆ ಇಂದು ಮಧ್ಯಾಹ್ನ ನಡೆದಿದೆ.
ಚನ್ನಪಟ್ಟಣ ತಾಲ್ಲೂಕಿನ ಬೊಮ್ಮನಾಯಕನಹಳ್ಳಿ ಗ್ರಾಮದ ನಂಜೇಗೌಡ ಬಿನ್ ಚಿಕ್ಕೋನು (70 ) ಎಂಬ ವ್ಯಕ್ತಿಯೇ ರಕ್ಷಿಸಲ್ಪಟ್ಟವರು.
ಮದ್ದೂರು ತಾಲ್ಲೂಕಿನ ವೈದ್ಯನಾಥಪುರ ಗ್ರಾಮಕ್ಕೆ ಆಗಮಿಸಿದ ನಂಜೇಗೌಡರು ದೇವರಿಗೆ ನಮಸ್ಕರಿಸಿ ಹೊಸ ಸೇತುವೆ ಬಳಿ (ಅಲೂರು ಕಡೆಯಿಂದ) ಶಿಂಷಾ ನದಿ ಬಳಿ ತನ್ನ ಕೈ ಕಾಲುಗಳನ್ನು ಕಟ್ಟಿಕೊಂಡು ನದಿಗೆ ಹಾರಿದ್ದಾರೆ.ಇದನ್ನು ನೋಡಿದ ಆಲೂರು-ವೈದ್ಯನಾಥಪುರ ಗ್ರಾಮದ ಕೆಲ ಯುವಕರು ಶಿಂಷಾ ನದಿ ತುಂಬಿ ಹರಿಯುತ್ತಿದ್ದರೂ ಸಹ ತಮ್ಮ ಜೀವವನ್ನು ಲೆಕ್ಕಿಸದೆ ನದಿಗೆ ಹಾರಿ ವ್ಯಕ್ತಿಯನ್ನು ಕಾಪಾಡಿದ್ದಾರೆ.
ಶಿಂಷಾ ನದಿಯಿಂದ ಹೊರ ತೆಗೆದ ತಕ್ಷಣವೇ ನಂಜೇಗೌಡರನ್ನು ಮದ್ದೂರು ಸರ್ಕಾರಿ ಸಾರ್ವಜನಿಕ ಕೆ. ಗುರುಶಾಂತಪ್ಪ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ.