ರೇಷ್ಮೆ ಸಾಕಣೆ ಮನೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು ಲಕ್ಷಾಂತರ ರೂಪಾಯಿ ಮೌಲ್ಯದ ರೇಷ್ಮೆ ಗೂಡು, ಚಂದ್ರಿಕೆ, ಕೃಷಿ ಉಪಕರಣ ಹಾಗೂ ರಸಗೊಬ್ಬರ ಸುಟ್ಟು ಹೋಗಿರುವ ಘಟನೆ ಮಳವಳ್ಳಿ ತಾಲೂಕು ಹೊಂಬೇಗೌಡನದೊಡ್ಡಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ನಾಗರಾಜು ಎಂಬ ರೈತನಿಗೆ ಸೇರಿದರೆ ರೇಷ್ಮೆ ಮನೆ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ. ಗ್ರಾಮದ ಹೊರವಲಯದ ತಮ್ಮ ಜಮೀನಿನಲ್ಲಿ ರೇಷ್ಮೆ ಮನೆಗೆ ನಿರ್ಮಿಸಿಕೊಂಡು, ರೇಷ್ಮೆ ಮತ್ತು ಹೈನುಗಾರಿಕೆಯೊಂದಿಗೆ ನಾಗರಾಜು ಜೀವನ ನಡೆಸುತ್ತಿದ್ದರು.
ಕಳೆದ ಮೂರು ದಿನಗಳಿಂದ ರೇಷ್ಮೆ ಹುಳು ಹಣ್ಣಾಗಿ ಗೂಡು ಬಿಟ್ಟಿದ್ದವು. ಸೋಮವಾರ ರಾತ್ರಿ 9 ಗಂಟೆಯವರೆಗೂ ನಾಗರಾಜು ರೇಷ್ಮ ಮನೆಯಲ್ಲಿ ಇದ್ದು ಕೆಲಸ ಮಾಡುತ್ತಿದ್ದರು. ಮನೆಗೆ ಊಟಕ್ಕೆ ತೆರಳಿದ್ದ ಅವರು, ಮಳೆಯಿಂದ ವಾಪಸ್ಸಾಗಿರಲಿಲ್ಲ.
ತಡ ರಾತ್ರಿ ಯಾರು ಇಲ್ಲದ ವೇಳೆ ದುಷ್ಕರ್ಮಿಗಳು ರೇಷ್ಮೆ ಮನೆಗೆ ಬೆಂಕಿ ಹಚ್ಚಿದ್ದಾರೆ. ಬೆಂಕಿ ಹತ್ತಿ ಉರಿಯುತ್ತಿರುವುದನ್ನು ನೋಡಿದ ಸ್ಥಳೀಯರು ನಸುಕಿನ ಮೂರುಗಂಟೆ ಸುಮಾರಿಗೆ, ನಾಗರಾಜಗೆ ಕರೆ ಮಾಡಿ ತಿಳಿಸಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯಲ್ಲಿ 150 ಚಂದ್ರಿಕೆ ರೇಷ್ಮೆ ಗೂಡು, ರೇಷ್ಮೆ ಮನೆಯ ಗೋಡೆ, ಶೀಟ್ಗಳು, 20ಮೂಟೆ ರಸಗೊಬ್ಬರ ಬೆಂಕಿಗೆ ಸುಟ್ಟುಹೋಗಿವೆ. ನಸುಕಿನಲ್ಲಿ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಈ ಮಂಗಳವಾರ ರೇಷ್ಮೆ ಗೂಡು ಬಿಚ್ಚಬೇಕಾಗಿತ್ತು, ಅಷ್ಟರಲ್ಲಿ ಯಾರೂ ಕಿಡಿಗೇಡಿಗಳು ಬೆಂಕಿ ಹೆಚ್ಚಿದ್ದಾರೆ. ಸಾಲ ಮಾಡಿ ರೇಷ್ಮೆ ಮನೆ ನಿರ್ಮಿಸಿದ್ದೆ. ಬೆಂಕಿ ಇಟ್ಟು ನಮ್ಮ ಬದುಕನ್ನೇ ನಾಶ ಮಾಡಿದ್ದಾರೆ. ಬೆಂಕಿ ಹಚ್ಚಿರುವ ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ವಿಧಿಸಿ ಎಂದು ನಾಗರಾಜು ಕಣ್ಣೀರಾಗುತ್ತಾರೆ.