ಮಹತ್ತರ ಕೆಲಸವನ್ನು ವಿದೇಶದಲ್ಲೂ ಮಾಡುವ ಮೂಲಕ ಸರ್ ಎಂ.ವಿಶ್ವೇಶ್ವರಯ್ಯ ಅವರು ಭಾರತದ ಕೀರ್ತಿ ಎತ್ತಿಹಿಡಿದಿದ್ದಾರೆಂದು ಖ್ಯಾತ ವಾಗ್ಮಿ ಹಿರೇಮಗಳೂರು ಕಣ್ಣನ್ ಹೇಳಿದರು.
ಮಂಡ್ಯ ನಗರದ ಗಾಯಿತ್ರಿ ಸಮುದಾಯ ಭವನದಲ್ಲಿ ಜಿಲ್ಲಾ ಬ್ರಾಹ್ಮಣ ಸಭಾದಲ್ಲಿ ನಡೆದ ಪ್ರತಿಭಾ ಪುರಸ್ಕಾರ, ಡಾ. ಸರ್ ಎಂ.ವಿಶ್ವೇಶ್ವರಯ್ಯ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ವಿಶ್ವೇಶ್ವರಯ್ಯ ಅವರು ಒಮ್ಮೆ ವಿದೇಶ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ನ್ಯೂಜೆರ್ಸಿಯಲ್ಲಿ ಸ್ಥಾಪಿತವಾಗಿದ್ದ ವಿದ್ಯುತ್ ಉಪಕರಣಗಳ ಘಟಕದಲ್ಲಿನ ಪರಿಹಾರವಾಗದ ಸಮಸ್ಯೆಯನ್ನು ಪರಿಹರಿಸುವುದರೊಂದಿಗೆ ಅವರ ಕೀರ್ತಿ ಜಗತ್ತಿನಾದ್ಯಂತ ಬೆಳಗುವಂತೆ ಮಾಡಿದ್ದರು.
ಮೈಸೂರು ಅರಸ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಆಡಳಿತಾವಧಿಯಲ್ಲಿ ದಿವಾನರಾಗಿದ್ದ ವಿಶ್ವೇಶ್ವರಯ್ಯ ಅವರು ಹತ್ತು ಹಲವು ನೀರಾವರಿ ಯೋಜನೆಗಳನ್ನು ಸ್ಥಾಪಿಸಿ ರೈತಾಪಿ ವರ್ಗಕ್ಕೆ ನೆರವಾದರು. ಅದೇ ರೀತಿ ಕಾರ್ಖಾನೆಗಳನ್ನು ಸ್ಥಾಪಿಸುವ ಮೂಲಕ ರೈತ ಮಕ್ಕಳಿಗೆ ಉದ್ಯೋಗದಾತರಾದರು ಎಂದರು.
ಮಹಾರಾಜರ ಆದೇಶಾನುಸಾರ ಶೈಕ್ಷಣಿಕ ಸಂಸ್ಥೆಗಳನ್ನೂ ಸ್ಥಾಪಿಸಿ, ಶಿಕ್ಷಣಕ್ಕೂ ಒತ್ತು ನೀಡಿದರು ಎಂದು ಬಣ್ಣಿಸಿದರು ಅವರು, ಇಂತಹ ಮಹನೀಯರು ಎಂದೆಂದಿಗೂ ಪ್ರಾತಃಸ್ಮರಣೀಯರು. ನಾಡು ಅವರನ್ನು ಸ್ಮರಿಸುವ ಕಾರ್ಯವನ್ನು ಮಾಡಬೇಕು. ಕೃಷಿ ಜಿಲ್ಲೆಯಾಗಿರುವ ಮಂಡ್ಯದಲ್ಲಿ ಅವರ ಹೆಸರು ಚಿರಸ್ಥಾಯಿಯಾಗಿ ಉಳಿದಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಈ ಸಂದರ್ಭದಲ್ಲಿ ಬ್ರಾಹ್ಮಣ ಸಭಾದ ಜಿಲ್ಲಾಧ್ಯಕ್ಷ ಸದಾಶಿವಭಟ್, ಉಪಾಧ್ಯಕ್ಷ ಗೋಪಾಲ್, ಕಾರ್ಯದರ್ಶಿ ಶಂಕರನಾರಾಯಣಶಾಸ್ತ್ರಿ, ಸಹ ಕಾರ್ಯದರ್ಶಿ ಬಿ.ಜಿ. ಉಮಾ, ವಿಜಯಲಕ್ಷ್ಮಿ ಎಂ.ಆರ್. ಯೋಗಾನಂದ ಮತ್ತಿತರರಿದ್ದರು.