ಪ್ರಸ್ತುತ ಸನ್ನಿವೇಶದಲ್ಲಿ ಕೌಶಲ್ಯತೆ ಶಿಕ್ಷಣ ಅವಶ್ಯಕವಾಗಿದ್ದು, ಕೈಗಳಲ್ಲಿ ಕೆಲಸವಿದ್ದರೆ ಎಲ್ಲಿ ಬೇಕಾದರೂ ಜೀವನ ರೂಪಿಸಿಕೊಳ್ಳಬಹುದು ಆದ್ದರಿಂದ ಕೌಶಲ್ಯತೆ ಶಿಕ್ಷಣದ ಕಡೆ ವಿದ್ಯಾರ್ಥಿಗಳು ಗಮನಹರಿಸಬೇಕು ಎಂದು ಹಿರಿಯ ಸಾಹಿತಿ ತೈಲೂರು ವೆಂಕಟಕೃಷ್ಣ ಹೇಳಿದರು.
ಮಂಡ್ಯನಗರದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಮಂಡ್ಯ ಘಟಕದ ಸಭಾಂಗಣದಲ್ಲಿ ಜಿ.ವಿ.ಕೆ. ಪ್ರತಿಷ್ಠಾನದ 9ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿವಿಕೆ ಪ್ರತಿಷ್ಠಾನ ಕಳೆದ 9 ವರ್ಷಗಳಿಂದ ನಾನಾ ಸರ್ಕಾರಿ ಶಾಲೆಗಳಿಗೆ ಕುರ್ಚಿ,ಟೇಬಲ್, ಮಕ್ಕಳು ಆಟ ಆಡುವ ರೌಂಡ್ ಟೇಬಲ್,ಧ್ವನಿವರ್ಧಕ ಬ್ಯಾಂಡ್ ಸೆಟ್ ಸೇರಿದಂತೆ ಅಗತ್ಯವುಳ್ಳ ಪರಿಕರಗಳನ್ನು ವಿತರಿಸಿ ಬರುತ್ತಿದೆ. ಸರ್ಕಾರಿ ಶಾಲೆಗಳು ಉಳಿಯಬೇಕು ಎಂದು ಜಿವಿಕೆ ಪ್ರತಿಷ್ಠಾನ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಕೋಟ್ಯಾಂತರ ಆಸ್ತಿ ಇದ್ದವರು ಸಮಾಜ ಸೇವೆ ಮಾಡುವಲ್ಲಿ ಹಿಂದು ಮುಂದೆ ನೋಡುತ್ತಾರೆ, ಆದರೆ ವಾಸು ಅವರು ಸಾಮಾನ್ಯರಲ್ಲಿ ಸಾಮಾನ್ಯರ ಕಾಯಕ ಜೀವಿಯಾಗಿ ಸಮಾಜ ಸೇವೆ ಮಾಡುತ್ತಿದ್ದಾರೆ ಇಂತಹ ಮನಸ್ಸು ಎಲ್ಲರಿಗೂ ಬರಲ್ಲ, ಪೂರ್ವಿಕರ ಸಂಸ್ಕಾರ ಇದ್ದರೆ ಮಾತ್ರ ಇಂತಹ ಸಮಾಜಮುಖಿ ಸೇವೆ ಮಾಡಲು ಸಾಧ್ಯ ಎಂದು ಹೇಳಿದರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕೆ.ಎಸ್. ರಾಜಣ್ಣ ಮಾತನಾಡಿ ದೇಶದ ಪ್ರತಿಷ್ಠಿತ ನಾಗರಿಕ ಪ್ರಶಸ್ತಿ ಪದ್ಮಶ್ರೀ ಪ್ರಶಸ್ತಿ ನನಗೆ ಸಿಕ್ಕಿರುವುದು ಮಂಡ್ಯ ಜಿಲ್ಲೆಗೆ ಸಂದ ಗೌರವ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕೃಷಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿರುವ ಶಿವರಾಮ್ ಯರಹಳ್ಳಿಯವರಿಗೆ ಜಿವಿಕೆ ಉತ್ತಮ ರೈತ ಪ್ರಶಸ್ತಿ, ಸಮಾಜ ಸೇವೆಗಾಗಿ ಎಸ್ ಬಿ ಸಂಸ್ಥೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ರಂಗಸ್ವಾಮಿ ಅವರಿಗೆ ಸಮಾಜ ಸೇವೆ ಪ್ರಶಸ್ತಿ,ಜಾನಪದ ಕ್ಷೇತ್ರದಲ್ಲಿ ಕೆ.ಎಸ್.ಚರಣ್ ಶೇಖರ್ ಅವರಿಗೆ ಉತ್ತಮ ಕಲಾವಿದ ಪ್ರಶಸ್ತಿ, ಶಿಕ್ಷಣ ಕ್ಷೇತ್ರದಲ್ಲಿ ಚಾಮರಾಜನಗರದ ಶ್ವೇತಾ ಬಿ.ಎನ್. ಅವರಿಗೆ ಜಿವಿಕೆ ಉತ್ತಮ ಶಿಕ್ಷಕಿ,ಸಹಕಾರ ಕ್ಷೇತ್ರದಲ್ಲಿ ಎಚ್.ಎಮ್.ನಾಗರಾಜು, ಕುಲಕಸುಬಿಗಾಗಿ ತೈಲೂರು ಆನಂದಚಾರಿ ಅವರಿಗೆ ಕಾಯಕಯೋಗಿ ಪ್ರಶಸ್ತಿ,ಆರೋಗ್ಯ ಕ್ಷೇತ್ರದಲ್ಲಿ ಮಂಡ್ಯ ಜಿಲ್ಲಾ ಆಸ್ಪತ್ರೆಯ ರಘು ಟಿ.ಅವರಿಗೆ ಉತ್ತಮ ಸೇವಾ ಪ್ರಶಸ್ತಿ ನೀಡಿ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕೋಶಾಧ್ಯಕ್ಷ ಬಿ.ಎಂ.ಅಪ್ಪಾಜಪ್ಪ, ಜಿವಿಕೆ ಪ್ರತಿಷ್ಠಾನದ ಅಧ್ಯಕ್ಷ ಆರ್.ವಾಸು, ಸುನೀತಮಣಿ, ವಿಕಸನ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಮಹೇಶ್ ಚಂದ್ರಗುರು, ಅಖಿಲ ಕರ್ನಾಟಕ ವಿಶ್ವಕರ್ಮ ಸಮಾಜದ ಮಳವಳ್ಳಿ ಶ್ರೀನಿವಾಸ ಸೇರಿದಂತೆ ಇತರರು ಹಾಜರಿದ್ದರು