ರಾಜ್ಯದಲ್ಲಿ ಎಲ್ಲಾ ಜಾತಿಗಳಿಗೆ ಸಾಮಾಜಿಕ ನ್ಯಾಯವನ್ನು ಒದಗಿಸುವಂತಹ, ಹೊಸ ಭವಿಷ್ಯವನ್ನು ಬರೆಯುವಂತಹ ಮಣ್ಣಿನ ಮಕ್ಕಳ ಸರ್ಕಾರವನ್ನು ಪ್ರತಿಷ್ಟಾಪಿಸಲು ಎಲ್ಲಾ ಮತದಾರರು ಜೆಡಿಎಸ್ ಪಕ್ಷವನ್ನು ಒಕ್ಕೊರಲಿನಿಂದ ಬೆಂಬಲಿಸುವಂತೆ ಜೆಡಿಎಸ್ ನಾಯಕ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದರು.
ಪಂಚರತ್ನಯಾತ್ರೆ ಅಂಗವಾಗಿ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೊತ್ತತ್ತಿ ಹೋಬಳಿ ಕೇಂದ್ರದಲ್ಲಿ ನಡೆದ ಬಹಿರಂಗ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಈ ಭಾಗದ ಜನತೆ, ಮತ್ತೆ ರವೀಂದ್ರ ಶ್ರೀಕಂಠಯ್ಯ ಅವರನ್ನು ಗೆಲ್ಲಿಸಬೇಕು. ಕಳೆದ ಭಾರಿ 43 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಿದ್ದೀರಾ ಈ ಭಾರಿ ಅದರ ಅಂತರ 60 ಸಾವಿರದಿಂದ 80 ಸಾವಿರಕ್ಕಿಂತ ಹೆಚ್ಚಾಗಿರಬೇಕು.
ಪ್ರತಿ ಎಕರೆಗೆ 10 ಸಾವಿರ ಸಹಾಯಧನ
ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದೆ ಆದರೆ, ಪ್ರತಿ ಹಂಗಾಮಿನಲ್ಲಿ ರೈತರು ಭಿತ್ತನೆ ಕಾರ್ಯ ಪ್ರಾರಂಭಿಸುವ ಮುನ್ನವೇ, ಪ್ರತಿ ಎಕರೆಗೆ 10 ಸಾವಿರ ರೂ. ಸಹಾಯಧನ ನೀಡುವ ಯೋಜನೆಯನ್ನು ಜಾರಿಗೆ ತರಲಾಗುವುದು. ಈ ಸಹಾಯಧನವು ಪ್ರತಿ ಹಂಗಾಮು ಪ್ರಾರಂಭವಾಗುವ ಮೊದಲೇ ರೈತರ ಕೈಗೆ ಸಿಗುವಂತೆ ಮಾಡಲಾಗುವುದು. ಇದರಿಂದಾಗಿ ರೈತರು ಯಾವುದೇ ಸಾಲ ಮಾಡದೇ ಕೃಷಿ ಕಾರ್ಯದಲ್ಲಿ ತೊಡಗಲು ಅನುಕೂಲ ಮಾಡಲಾಗುವುದು ಎಂದರು.
ಈ ಮಾಹಿತಿಯನ್ನೊಳಗೊಂಡ ಕಿರು ಹೊತ್ತಿಗೆಯನ್ನು ಪ್ರತಿ ಮನೆ ಮನೆಗೆ ತಲುಪಿಸಲಾಗುವುದು. ಅಲ್ಲದೇ ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ ಮಾಡಲಾಗುವುದು. ವಿಲಕಚೇತನರು ಹಾಗೂ ಹಿರಿಯ ನಾಗರೀಕರಿಗೆ ತಲಾ 5 ಸಾವಿರ ರೂ. ಪಿಂಚಣಿ ನೀಡಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಪೈಲ್ವಾನ್ ಮುಕುಂದ, ಮುಖಂಡ ಎಂ.ಸಂತೋಷ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.