ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಲು ಸಿದ್ಧತೆ ನಡೆಸಿದ್ದ ವಿಧಾನ ಪರಿಷತ್ ಮಾಜಿ ಸದಸ್ಯಕೆ.ಟಿ. ಶ್ರೀಕಂಠೇಗೌಡರಿಗೆ ಜೆಡಿಎಸ್ ವರಿಷ್ಠರು ಟಿಕೆಟ್ ನಿರಾಕರಿಸುವ ಮೂಲಕ ನಡು ನೀರಲ್ಲಿ ಕೈ ಬಿಟ್ಟಿದ್ದಾರೆ.
ದಕ್ಷಿಣ ಶಿಕ್ಷಕರ ಕ್ಷೇತ್ರದ ಜೆಡಿಎಸ್-ಬಿಜೆಪಿ ಅಭ್ಯರ್ಥಿಯಾಗಿ ರಿಯಲ್ ಎಸ್ಟೇಟ್ ಉದ್ಯಮಿ ವಿವೇಕಾನಂದ ಅವರಿಗೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಬುಧವಾರ ಬಿ.ಫಾರಂ ವಿತರಿಸಿದ್ದರು.
ಸಾ.ರಾ.ಮಹೇಶ್ ಅವರು ತನ್ನ ಬೆಂಬಲಿಗ ವಿವೇಕಾನಂದ ಅವರಿಗೆ ಟಿಕೆಟ್ ಕೊಡುವಂತೆ ಎಚ್.ಡಿ.ದೇವೇಗೌಡ ಹಾಗೂ ಕುಮಾರಸ್ವಾಮಿ ಅವರನ್ನು ಒಪ್ಪಿಸಿದ್ದರು. ಇದಕ್ಕೆ ಜಿ.ಟಿ.ದೇವೇಗೌಡರ ಕೃಪಾಕಟಾಕ್ಷವಿತ್ತು. ಇಬ್ಬರೂ ಸೇರಿ ಕೆ.ಟಿ.ಶ್ರೀಕಂಠೇಗೌಡರಿಗೆ ಟಿಕೆಟ್ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದರು.
ಬುಧವಾರ ಜೆಡಿಎಸ್ ವರಿಷ್ಠರು ವಿವೇಕಾನಂದ ಅವರಿಗೆ ಬಿ.ಫಾರಂ ನೀಡಿದ್ದರಿಂದ ಸಿಟ್ಟಿಗೆದ್ದ ಎರಡು ಬಾರಿಯ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾಧ್ಯಮಗಳ ಎದುರು ಜೆಡಿಎಸ್ ವರಿಷ್ಠರ ವಿರುದ್ಧ ಹಾಗೂ ಟಿಕೆಟ್ ಕೈ ತಪ್ಪಲು ಕಾರಣರಾದ ಸಾ.ರಾ.ಮಹೇಶ್ ಮತ್ತು ಜಿ.ಟಿ.ದೇವೇಗೌಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಜೆಡಿಎಸ್ ವರಿಷ್ಠರು ಈ ಕೆಟ್ಟ ನಿರ್ಧಾರಗಳಿಂದ ಜೆಡಿಎಸ್ 58 ರಿಂದ 39 ಕ್ಕೆ ಈಗ 19 ಕ್ಕೆ ಇಳಿದಿರೋದು.ಚಿಂತಕರ ಚಾವಡಿಯಾದ ವಿಧಾನ ಪರಿಷತ್ತಿಗೆ ವಿಚಾರವಂತರು ಬರಬೇಕು. ಆದರೆ ಜೆಡಿಎಸ್ ವರಿಷ್ಠರು ವಿದಾನ ಪರಿಷತ್ ಚುನಾವಣೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಗೆ ಟಿಕೆಟ್ ನೀಡಿರುವುದು ಕೆಟ್ಟ ಬೆಳವಣಿಗೆ. ಈ ಬಾರಿ ಕೂಡ ಕ್ಷೇತ್ರವನ್ನು ಚುನಾವಣೆಗೂ ಮುನ್ನವೇ ಬಿಟ್ಟುಕೊಟ್ಟಿದೆ ಎಂದು ವಾಗ್ದಾಳಿ ನಡೆಸಿದ್ದರು.
ಅಲ್ಲದೆ ಗುರುವಾರ ಬೆಂಬಲಿಗರ ಸಭೆ ಕರೆದು ಅಲ್ಲಿ ಅವರೆಲ್ಲ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎಂದರೆ ಸ್ಪರ್ಧಿಸುವೆ ಎಂದು ಹೇಳಿದ್ದರು.
ಅದರಂತೆ ಇಂದು ಗುರುವಾರ ಕೆ.ಟಿ.ಶ್ರೀಕಂಠೇಗೌಡ
ಅವರು ಮೈಸೂರು ನಗರದ ಆಲಮ್ಮ ಕಲ್ಯಾಣ ಮಂಟಪದಲ್ಲಿ ತಮ್ಮ ಬೆಂಬಲಿಗರೊಂದಿಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಜೆಡಿಎಸ್ನ ಕೆಲವು ಕಾರ್ಯಕರ್ತರು ಬಂದು ಕೆ.ಟಿ.ಶ್ರೀಕಂಠೇಗೌಡ ಅವರನ್ನು ಚುನಾವಣೆಯಲ್ಲಿ ಸ್ಪರ್ಧೆ ಮಾಡದಂತೆ ಗದ್ದಲ ಎಬ್ಬಿಸಿದರು. ಪಕ್ಷೇತರ ಅಭ್ಯರ್ಥಿಯಾಗಿ
ನಾಮಪತ್ರ ಸಲ್ಲಿಸದಂತೆ ಒತ್ತಾಯಿಸಿ ಶ್ರೀಕಂಠೇಗೌಡರನ್ನು ಎಳೆದಾಡಿದರು. ಇದರಿಂದ ಅವರು ಗಾಯಗೊಂಡು ಆಸ್ಪತ್ರೆ ಸೇರಿದ್ದರಿಂದ ನಾಮಪತ್ರ ಸಲ್ಲಿಸಲು ಆಗಲಿಲ್ಲ. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಇಂದು ನಾಮಪತ್ರ ಸಲ್ಲಿಸದೆ ಆಸ್ಪತ್ರೆ ಸೇರಿದ ಕೆ.ಟಿ.ಶ್ರೀಕಂಠೇಗೌಡ ಅವರ ಸ್ಥಿತಿ ನೆನೆದು ಅವರ ಬೆಂಬಲಿಗರು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹಾಗೂ ಕುಮಾರಸ್ವಾಮಿ ಅವರ ವಿರುದ್ಧ ಕೆಂಡಕಾರಿದ್ದು, ಹಣಕ್ಕಾಗಿ ಬಿ.ಫಾರಂ ಮಾರಿಕೊಂಡಿದ್ದಾರೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್ ಪಕ್ಷದಲ್ಲಿ ನಿಷ್ಠಾವಂತರಿಗೆ ಬೆಲೆಯಿಲ್ಲ. ಕೆ.ಟಿ.ಶ್ರೀಕಂಠೇಗೌಡ ಅವರು ಈ ಬಾರಿ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದರು. ಮಂಡ್ಯ,ಹಾಸನ,ಚಾಮರಾಜ ನಗರ,ಮೈಸೂರು ವ್ಯಾಪ್ತಿಯಲ್ಲಿ ಓಡಾಟ ನಡೆಸಿ ಶಿಕ್ಷಕರ ಬಳಿ ಒಂದು ಸುತ್ತಿನ ಪ್ರಚಾರ ನಡೆಸಿದ್ದರು.ಅವರಿಗೆ ಟಿಕೆಟ್ ಎಂದು ಹೇಳಿ ಕೊನೆ ಗಳಿಗೆಯಲ್ಲಿ ಸಾ.ರಾ.ಮಹೇಶ್ ಹಾಗೂ ಜಿ.ಟಿ.ದೇವೇಗೌಡರ ಮಾತು ಕೇಳಿ ಶ್ರೀಕಂಠೇಗೌಡ ಅವರಿಗೆ ಟಿಕೆಟ್ ನೀಡದೆ ಜೆಡಿಎಸ್ ವರಿಷ್ಠರು ಮೋಸ ಮಾಡಿದ್ದಾರೆ. ಹಣಕ್ಕೆ ಟಿಕೆಟ್ ಮಾರಿಕೊಂಡ ಈ ಪಕ್ಷ ಇನ್ನೆಂದಿಗೂ ಉದ್ಧಾರ ಆಗಲ್ಲ ಎಂದು ಸಿಟ್ಟಿನಿಂದ ಆಕ್ರೋಶ ಹೊರಹಾಕಿದರು.
ಅತ್ತ ಬಿಜೆಪಿ ಕೂಡ ಡಾ.ಈ.ಸಿ. ನಿಂಗರಾಜ್ ಗೌಡರನ್ನು ಅಭ್ಯರ್ಥಿ ಎಂದು ಆಯ್ಕೆ ಮಾಡಿ ಕೊನೆ ಗಳಿಗೆಯಲ್ಲಿ ಬಿ.ಫಾರಂ ನೀಡದಿರುವುದು ಕೂಡ ಅವರ ಬೆಂಬಲಿಗರಲ್ಲಿ ಬಿಜೆಪಿ ನಾಯಕರು ಬಗ್ಗೆ ಆಕ್ರೋಶ ಗೊಳ್ಳುವಂತೆ ಮಾಡಿದೆ.
ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಲ್ಲಿ ನಡೆದಿರುವ ಈ ಕುತಂತ್ರ ರಾಜಕೀಯ ಬೆಳವಣಿಗೆಗಳೆಲ್ಲ ಸೇರಿ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡರಿಗೆ ವರವಾಗಲಿದೆ ಎಂಬ ಮಾತು ಕೇಳಿ ಬರುತ್ತಿದೆ.