ಮಳವಳ್ಳಿ ತಾಲ್ಲೂಕಿನ ಮಾರೇಹಳ್ಳಿ ಶ್ರೀ ಲಕ್ಷ್ಮಿನರಸಿಂಹಸ್ವಾಮಿಯ ಬ್ರಹ್ಮರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಬಣೆಯಿಂದ ಭಕ್ತಿ ಪ್ರಧಾನವಾಗಿ ಜರುಗಿತು.
ದಿವ್ಯ ಬ್ರಹ್ಮ ರಥೋತ್ಸವದ ಅಂಗವಾಗಿ ಮಾರೇಹಳ್ಳಿಯಲ್ಲಿ ವಿರಾಜಮಾನರಾಗಿ ಗಜಾರಣ್ಯ ಕ್ಷೇತ್ರದಲ್ಲಿ ಶ್ರೀಯಃಪತಿಯಾಗಿ ಕಲ್ಯಾಣಗುಣ ಪರಿಪೂರ್ಣನಾಗಿ, ಭಕ್ತಾನುಗ್ರಾಹಕನಾಗಿಯೂ ಅವತರಿಸಿ ವೀರಾಜಿಸುತ್ತಿರುವ ಶ್ರೀ ಲಕ್ಷ್ಮಿನರಸಿಂಹಸ್ವಾಮಿಯವರಿಗೆ ಹೋಮ ಹವನ ಅಭಿಷೇಕ ನಡೆದ ಬಳಿಕ ವಿವಿಧ ಹೂಗಳಿಂದ ಆಲಂಕರಿಸಿ ವಿಶೇಷ ಪೂಜಾ ಕೈಂಕರ್ಯಗಳು ವಿಧಿ ವಿಧಾನಗಳಿಂದ ನೆರೆವೇರಿಸಲಾಯಿತು.
ಸ್ವಾಮಿಯ ಬ್ರಹ್ಮ ರಥೋತ್ಸವಕ್ಕೆ ವಿವಿಧ ಬಣ್ಣದ ಬಟ್ಟೆ ಹಾಗೂ ಹೂಗಳಿಂದ ಆಲಂಕರಿಸಲಾಗಿತ್ತು. ಶ್ರೀಲಕ್ಷ್ಮಿನರಸಿಂಹಸ್ವಾಮಿಯ ಉತ್ಸವ ಮೂರ್ತಿಯನ್ನು ಮಂಗಳ ವಾದ್ಯದೊಂದಿಗೆ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ಉತ್ಸವ ಮೂರ್ತಿಯನ್ನು ರಥದ ಸಮೀಪ ಕರೆತರಲಾಯಿತು.
ಶಾಸಕ ಪಿ.ಎಂ ನರೇಂದ್ರಸ್ವಾಮಿ ಅವರು ಕುಟುಂಬ ಸಮೇತ ದೇವಸ್ಥಾನಕ್ಕೆ ಆಗಮಿಸಿ ಶ್ರೀ ಲಕ್ಷ್ಮಿನರಸಿಂಹಸ್ವಾಮಿ ಉತ್ಸವಮೂರ್ತಿಗೆ ಪೂಜೆ ಸಲ್ಲಿಸಿ ಪುಷ್ಪನಮನ ಸಲ್ಲಿಸಿದರು. ನಂತರ ಸ್ವಾಮಿಯ ಉತ್ಸವ ಮೂರ್ತಿಯನ್ನು ಬ್ರಹ್ಮರಥಕ್ಕೆ ಪ್ರತಿಷ್ಠಾಪಿಸಿದ ನಂತರ ರಥೋತ್ಸವಕ್ಕೆ ಪಿ.ಎಂ ನರೇಂದ್ರಸ್ವಾಮಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಶಾಸಕ ಪಿ.ಎಂ ನರೇಂದ್ರಸ್ವಾಮಿ ಮಾತನಾಡಿ, ಶ್ರೀ ಲಕ್ಷ್ಮಿನರಸಿಂಹಸ್ವಾಮಿಯ ಸರ್ವರಿಗೂ ಸನ್ಮಂಗಳ ಉಂಟು ಮಾಡಲಿ, ನಾಡಿಗೆ ಮಳೆ ಬೆಳೆ ಸಮೃಂದ್ದಿಯಾಗಿ ಜನರು ನೆಮ್ಮದಿಯಿಂದ ಬದುಕುವಂತಾಗಲಿ ಎಂದು ಆಶೀಸಿದರು.
ಚಾಮರಾಜನಗರ, ಬೆಂಗಳೂರು, ಮೈಸೂರು, ಕೆ.ಆರ್ ನಗರ, ಮಂಡ್ಯ, ಹಾಸನ, ಬೈರಾಪಟ್ಟಣ, ತಮಿಳುನಾಡು, ತೆಲಂಗಣ, ಅಂದ್ರಪ್ರದೇಶ ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ ಸಾವಿರಾರು ಭಕ್ತರು ರಥೋತ್ಸವಕ್ಕೆ ಹಣ್ಣು ಜವನ ಎಸೆದು ದೇವರಿಗೆ ಪೂಜೆ ಸಲ್ಲಿಸುವುದರ ಮೂಲಕ ಧನ್ಯತೆ ಮೆರೆದರು. ವಿಶೇಷವಾಗಿ ಹೊಸದಾಗಿ ಮದುವೆಯಾದ ದಂಪತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಾತ್ರೆಗೆ ಆಗಮಿಸಿ ರಥಕ್ಕೆ ಹಣ್ಣು ಜವನ ಎಸೆದರು.
ದೇವಸ್ಥಾನಕ್ಕೆ ಆಗಮಿಸಿದ್ದ ಎಲ್ಲಾ ಭಕ್ತರಿಗೂ ಹರಕೆವೊತ್ತ ಭಕ್ತರು ಪ್ರಸಾಧ ವಿತರಿಸಿದರು. ಸೇವಾರ್ಥಗಾರರಿಂದ ಪುಷ್ಪಲಂಕಾರ,ಯತ್ರಾದಾನ ಮಂಟಪೋತ್ಸವ, ನಿವೇದನ ಕಾರ್ಯಕ್ರಮಗಳು ನಡೆದರು.
ಮಾವು, ತಿಂಡಿ ತಿಸಿಸು, ಮಕ್ಕಳ ಆಟದ ವಸ್ತುಗಳು, ಪೂಜಾ ಸಾಮಾಗ್ರಿಗಳ ವ್ಯಾಪಾರ ಭರ್ಜರಿಯಾಗಿಯೇ ನಡೆಯುವುದರ ಜೊತೆಗೆ ಜಾತ್ರೆಗೆ ಅಂಗಡಿ ಮುಗ್ಗಟ್ಟುಗಳು ಕಲೆ ಕಟ್ಟಿದ್ದವು, ಯಾವುದೇ ಅಹಿತರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಇದೇ ಸಂದರ್ಭದಲ್ಲಿ ಗ್ರೇಡ್೨ ತಹಶೀಲ್ದಾರ್ ಕುಮಾರ್ ಸೇರಿದಂತೆ ವಿವಿಧ ಪಕ್ಷಗಳ ರಾಜಕೀಯ ಮುಖಂಡರು ಇದ್ದರು.