ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಸಿಳಿದರು. ಬಳಿಕ ಅವರ ಮಗನಿಗೆ ಅವಕಾಶ ಕೊಡಬೇಕಿತ್ತು, ಆದರೆ ಕೊಡಲಿಲ್ಲ. ಆದರೆ ಬಿ.ವೈ.ವಿಜಯೇಂದ್ರ ಅವರನ್ನು ಅಳೆದು ತೂಗಿ ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ. ಆದರೆ ಅವರು ಯಶಸ್ವಿಯಾಗುವುದು ಕಷ್ಟ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಭಿಪ್ರಾಯಪಟ್ಟರು.
ಮಂಡ್ಯನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಕಷ್ಟ ನೋಡಿ ಅಯ್ಯೋ ಪಾಪಾ ಅನಿಸುತ್ತಿದೆ. ಆ ಪಕ್ಷಕ್ಕೆ ಯಡಿಯೂರಪ್ಪ ಹಾಗೂ ಅವರ ಮಗ ಅನಿವಾರ್ಯವಾಗಿದ್ದಾರೆ. ಬಿಜೆಪಿಯಲ್ಲಿ ಮನಸ್ಸು ಹೊಡೆದು ಹೋಗಿದೆ. ಸಂಪೂರ್ಣವಾಗಿ ಅವರು ವಿಚಲಿತಗೊಂಡಿದ್ದಾರೆ. ಕಳೆದ 6 ತಿಂಗಳಿಂದ ವಿರೋಧ ಪಕ್ಷದ ನಾಯಕರು ಸಿಕ್ಕಿಲ್ಲ. ರಾಜ್ಯಾಧ್ಯಕ್ಷರನ್ನ ಹುಡುಕಿದರೂ ಸಿಗಲಿಲ್ಲ. ಇದೀಗ ಬಿಎಸ್ವೈ ಅನಿವಾರ್ಯವಾಗಿದ್ದಾರೆ. ಪ್ರೀತಿಯಿಂದ ಮಾಡಿಲ್ಲ ಅನಿವಾರ್ಯವಾಗಿ ಮಾಡಿದ್ದಾರೆ ಅಷ್ಟೆ ಎಂದು ವ್ಯಂಗ್ಯವಾಡಿದರು.
ನಮ್ಮ ಕುಮಾರಸ್ವಾಮಿ ಅವರು ಪ್ರೀತಿಯಿಂದ ಬಿಜೆಪಿಗೆ ಹೋಗಿಲ್ಲ, ಆದರೆ ಅನಿವಾರ್ಯ. ಬಿಜೆಪಿಯಲ್ಲಿ ಮನಸ್ಥಾಪ ದೊಡ್ಡ ಪ್ರಮಾಣದಲ್ಲಿದೆ. ನಮ್ಮದು ರಾಷ್ಟ್ರೀಯ ಪಕ್ಷ, 136 ಗೆದ್ದಿದ್ದೇವೆ ನಾವು. ಪಾಪಾ, ಅವರು ಗೆಲ್ಲುವುದಕ್ಕೆ ಕಷ್ಟ ಪಡುತ್ತಿದ್ದಾರೆ, ಮಾಡಲಿ. ಇನ್ನು ಜೆಡಿಎಸ್ನ ಮಂಜು ಮತ್ತು ಗೌರಿಶಂಕರ್ ಸೇರಿದ್ದಾರೆ. ಅವರಿಗೆ ನಮ್ಮ ಪಕ್ಷಕ್ಕೆ ಸ್ವಾಗತ. ಅನೇಕರು ಕಾಂಗ್ರೆಸ್ಗೆ ಬರಲು ತಯಾರು ಇದ್ದಾರೆ. ನಮ್ಮ ಪಕ್ಷದ ಸಿದ್ದಾಂತಕ್ಕೆ ಬದ್ಧರಾದವರನ್ನ ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದರು.