ಕಬ್ಬು ಬೆಳೆಯನ್ನು ರಾಜ್ಯ ಮತ್ತು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಗೆ ಸೇರ್ಪಡೆ ಮಾಡಿ ಬೆಳೆಗಾರರ ಹಿತ ಕಾಪಾಡಬೇಕು ಎಂದು ಒತ್ತಾಯಿಸಿ ಮೈಷುಗರ್ ಕಬ್ಬು ಬೆಳೆಗಾರರ ಒಕ್ಕೂಟವು ಬುಧವಾರ ಮಂಡ್ಯದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು.
ಕಾಡು ಪ್ರಾಣಿ ಹಾವಳಿ, ಅತಿವೃಷ್ಟಿ ಹಾಗೂ ಅಗ್ನಿ, ವಿದ್ಯುತ್ ಅವಘಡ ದಿಂದ ಬೆಳೆ ಹಾಳಾಗಿ ಕಬ್ಬು ಬೆಳೆಗಾರರು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಕಬ್ಬು ದೀರ್ಘಾವಧಿ ಬೆಳೆಯಾಗಿದ್ದು, ವರ್ಷಗಳ ಕಾಲ ಕಟಾವಿಗೆ ಕಾಯಬೇಕಾಗಿದೆ. ಅತಿವೃಷ್ಟಿ, ಆಕಸ್ಮಿಕ ಬೆಂಕಿ, ವಿದ್ಯುತ್ ಆವಘಡ ಹಾಗೂ ಕಾಡು ಪ್ರಾಣಿಗಳ ಹಾವಳಿಯಿಂದ ನಾಶವಾಗಿ ರೈತರಿಗೆ ನಷ್ಟವಾಗುತ್ತಿದೆ, ಕಬ್ಬು ಬೆಳೆಯ ಕೃಷಿ ವೆಚ್ಚ ಅಧಿಕವಾಗಿದ್ದು, ಇಂತಹ ಅವಘಡಗಳ ನಷ್ಟದಿಂದ ಕಬ್ಬು ಬೆಳೆಗಾರರು ಆರ್ಥಿಕವಾಗಿ ತತ್ತರಿಸಿ ಹೋಗುತ್ತಿದ್ದು, ಆದ್ದರಿಂದ ಕಬ್ಬಿನ ಬೆಳೆಯನ್ನು ರಾಜ್ಯ ವಿಪತ್ತು ಪರಿಹಾರ ನಿಧಿ ಮತ್ತು ರಾಷ್ಟ್ರೀಯ ವಿಪ್ಪತ್ತು ಪರಿಹಾರ ನಿಧಿಗೆ ಸೇರಿಸುವ ಮೂಲಕ ಕಬ್ಬು ಬೆಳೆಗಾರರ ಹಿತ ಕಾಪಾಡಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ಪ್ರಸಕ್ತ ಬಜೆಟ್ನಲ್ಲಿ ಕಬ್ಬು ಬೆಳೆಯನ್ನು ವಿಪ್ಪತ್ತು ಪರಿಹಾರ ನಿಧಿಗೆ ಸೇರಿಸುವ ಮೂಲಕ ಐತಿಹಾಸಿಕ ನಿರ್ಣಯಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ.
ಸಂಘದ ಗೌರವಾಧ್ಯಕ್ಷ ಎಸ್.ಕೃಷ್ಣ, ಅಧ್ಯಕ್ಷ ಎಸ್.ಎಂ ವೇಣು ಗೋಪಾಲ್,ಕಾರ್ಯದರ್ಶಿ ಎಂ. ನಾಗರಾಜ್, ಹೆಮ್ಮಿಗೆ ಚಂದ್ರಶೇಖರ್, ಕೆ.ಎಂ ರುದ್ರೇಶ್ ಉಪಸ್ಥಿತರಿದ್ದರು.