ರೈತ ಸಮುದಾಯವನ್ನು ಅವಮಾನಿಸುವ ಹೇಳಿಕೆ ನೀಡಿರುವ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ವಿರುದ್ಧ ಮಂಡ್ಯದಲ್ಲಿ ಮೈಷುಗರ್ ಕಬ್ಬು ಬೆಳೆಗಾರರ ಒಕ್ಕೂಟ ಶುಕ್ರವಾರ ಪ್ರತಿಭಟನೆ ನಡೆಸಿತು.
ಮಂಡ್ಯ ನಗರದ ಸಂಜಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಬ್ಬು ಬೆಳೆಗಾರರು, ಸಚಿವರ ವಿರುದ್ಧ ದಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸಚಿವ ಶಿವಾನಂದ ಪಾಟೀಲ್ ರೈತರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದು, ಹಲವು ಬಾರಿ ಅವಮಾನಿಸಿದ್ದಾರೆ, ರೈತ ಸಮುದಾಯವನ್ನ ಕ್ಷಮೆಯಾಚಿಸಿ ಮಾತು ಹಿಂಪಡೆಯಬೇಕು, ಅನ್ನದಾತರು ಇಲ್ಲದಿದ್ದರೆ ಜನಸಮೂಹಕ್ಕೆ ಅನ್ನ ಸಿಗದು, ಗಂಜಿ ಇಲ್ಲದ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಅವರು ತಿಳಿದು ಕೊಳ್ಳಬೇಕೆಂದು ಎಚ್ಚರಿಸಿದರು.
ಬರಗಾಲದ ಸಂಕಷ್ಟದಲ್ಲಿ ರೈತರ ನೆರವಿಗೆ ನಿಲ್ಲಬೇಕಾದ ರಾಜ್ಯ ಸರ್ಕಾರದ ಸಚಿವರು, ಕೀಳು ಮನೋಭಾವ ಪ್ರದರ್ಶಿಸುತ್ತಿದ್ದಾರೆ, ಅಧಿಕಾರದ ಮದದಿಂದ ಅವರಿಗೆ ತಲೆ ನಿಲ್ಲುತ್ತಿಲ್ಲ, ರಾಜ್ಯ ಕಾಂಗ್ರೆಸ್ ಸರ್ಕಾರ ರೈತಪರ ಯೋಜನೆಗಳನ್ನು ಸ್ಥಗಿತಗೊಳಿಸಿದೆ. ಕೃಷಿ ಸಮ್ಮಾನ್ ಯೋಜನೆ ಹಣ ನೀಡುತ್ತಿಲ್ಲ, ರೈತರ ಮಕ್ಕಳ ವಿದ್ಯಾನಿಧಿ ಸ್ಥಗಿತ ಮಾಡಿದೆ. ಕೂಡಲೇ ರೈತಪರ ಯೋಜನೆಗಳನ್ನ ತುರ್ತು ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಒಕ್ಕೂಟದ ಅಧ್ಯಕ್ಷ ಸಾತನೂರು ವೇಣುಗೋಪಾಲ್, ವಡ್ಡರಹಳ್ಳಿ ಕೊಪ್ಪಲು ಚಂದ್ರಶೇಖರ್, ಮಾದರಹಳ್ಳಿ ನಾಗರಾಜ್, ಹೆಮ್ಮಿಗೆ ಚಂದ್ರಶೇಖರ್, ಕೊತ್ತತ್ತಿ ಬ್ಯಾಂಕ್ ಸಿದ್ದೇಗೌಡ, ಮಾರಗೌಡನಹಳ್ಳಿ ಪಾಪಣ್ಣ, ಸಂಪಳ್ಳಿ ಶಿವಶಂಕರ್, ಕನ್ನಲಿ ಜಗದೀಶ್, ಕೃಷ್ಣೆಗೌಡ ನೇತೃತ್ವ ವಹಿಸಿದ್ದರು