ಶಾಲಾ ಮಕ್ಕಳ ಪರೀಕ್ಷೆ ವಿಷಯಕ್ಕೂ ಕೋಮು ಬಣ್ಣ ಬಳಿದ ಚಕ್ರವರ್ತಿ ಸೂಲಿಬೆಲೆ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅವನ್ಯಾರೋ ಚಕ್ರವರ್ತಿ ಸೂಲಿಬೆಲೆ ತಲೆ ಹರಟೆ ಮಾಡ್ತಿದ್ದಾನೆ. ಮಕ್ಕಳ ಪರೀಕ್ಷೆಯ ವಿಷಯಕ್ಕೂ ಕೋಮು ಬಣ್ಣ ಬಳಿದಿದ್ದಾನೆ. ಆತನ ವಿರುದ್ದ ತುಂಬಾ ದೂರುಗಳು ಕೇಳಿ ಬರುತ್ತಿವೆ. ಆತನಿಗೆ ಮಾನ ಮರ್ಯಾದೆ ಇಲ್ವಾ? ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಕಿಡಿಕಾರಿದರು.
ಹಿಂದಿನ ಸರ್ಕಾರ ಸೂಲಿಬೆಲೆಯಂತವನ ಪಾಠವನ್ನು ನಮ್ಮ ಮಕ್ಕಳಿಗೆ ಬೋಧಿಸಲು ಹೊರಟಿತ್ತು. ಅದಕ್ಕೆ ನಮ್ಮ ಸರ್ಕಾರ ಬಂದ ತಕ್ಷಣ ಅದನ್ನು ಕಿತ್ತು ಬಿಸಾಕಿದ್ದೇವೆ. ನಾನು ಅವತ್ತು ಕಿತ್ತು ಬಿಸಾಕಿದ್ದೇವೆ ಎಂದಾಗ ವಿವಾದ ಆಗಿತ್ತು. ಹೊಲಸನ್ನು ಯಾರಾದ್ರೂ ಮನೆಯೊಳಗೆ ಇಟ್ಟುಕೊಳ್ತಾರಾ? ಎಂದು ಪ್ರಶ್ನಿಸಿದರು.
ರಾಜ್ಯದ ಎಸ್ಸೆಸೆಲ್ಸಿ ಪರೀಕ್ಷೆಯ ವೇಳಾಪಟ್ಟಿಯನ್ನು ಎಕ್ಸ್ನಲ್ಲಿ ಹಂಚಿಕೊಂಡಿದ್ದ ಬಲ ಪಂಥೀಯ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ “ಕರ್ನಾಟಕ ರಾಜ್ಯ 10ನೇ ತರಗತಿಯ ಪರೀಕ್ಷಾ ವೇಳಾಪಟ್ಟಿ ಬಿಡುಗಡೆಯಾಗಿದೆ. ಎಲ್ಲಾ ಪರೀಕ್ಷೆಗಳು ಬೆಳಗಿನ ಅವಧಿಯಲ್ಲಿವೆ. ಆದರೆ, ಶುಕ್ರವಾರ ಏಕೆ? ಓಹ್.. ನಮಾಜ್ಗೆ ಸಮಯವೇ?” ಎಂದು ಮುಸ್ಲಿಮರ ವಿರುದ್ದ ಕೋಮುದ್ವೇಷ ಹೊರ ಹಾಕಿದ್ದ. ಬಿಜೆಪಿ ಪಕ್ಷ, ಅದರ ವಕ್ತಾರ ಹರಿಪ್ರಕಾಶ್ ಕೋಣೆಮನೆ ಮತ್ತು ಅವರ ಒಡೆತನದ ಚಾನೆಲ್ ಕೂಡ ಸೂಲಿಬೆಲೆಯಂತೆ ಸುಳ್ಳು ಸುದ್ದಿಯನ್ನು ಹಂಚಿಕೊಂಡು ಕೋಮುದ್ವೇಷ ಕಾರಿದ್ದರು.
ಈ ಕುರಿತು ಸ್ಪಷ್ಟನೆ ನೀಡಿದ್ದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಮಾರ್ಚ್ 1ರಂದು ಬೆಳಗ್ಗೆ ದ್ವಿತೀಯ ಪಿಯುಸಿ ಪರೀಕ್ಷೆ ನಿಗದಿಯಾಗಿದೆ. ಎಸ್ಸೆಸೆಲ್ಸಿ ಪೂರ್ವ ಸಿದ್ದತಾ ಪರೀಕ್ಷೆ ಆಗಿದ್ದರಿಂದ ಮಧ್ಯಾಹ್ನ ಮಾಡ್ತಿದ್ದೇವೆ. ಮಾ.1ರಂದು 3 ಪರೀಕ್ಷೆ ಇರುವುದರಿಂದ ಮುಂದೂಡಿದ್ರೆ ಸಮಸ್ಯೆ ಆಗುತ್ತೆ. ಮಕ್ಕಳಿಗೆ ಅನುಕೂಲವಾಗುವ ರೀತಿ ಆಡಳಿತ ನಡೆಸಲು ನಮಗೆ ಬರುತ್ತದೆ ಎಂದಿದ್ದರು.