ಕನ್ನಂಬಾಡಿ ಅಣೆಕಟ್ಟೆ ಬಿರುಕು ಬಿಟ್ಟಿದೆ ಎಂದು ಅಪಪ್ರಚಾರ ಮಾಡಿ, ಪ್ರಚಾರ ಗಿಟ್ಟಿಸಿದ್ದ ಸಂಸದೆ ಸುಮಲತಾ ಅವರು, ಕಾವೇರಿ ಭಾಗದ ರೈತರು ಸಂಕಷ್ಟದಲ್ಲಿರುವ ಸಮಯದಲ್ಲಿ ಅವರ ನಿಂತು ಕಾವೇರಿ ಹೋರಾಟಕ್ಕೆ ಮುಂದಾಳತ್ವ ವಹಿಸಿಕೊಳ್ಳಬೇಕಿತ್ತು. ಆದರೆ ಅವರು ಫೈವ್ ಸ್ಟಾರ್ ಹೋಟೆಲ್ನಲ್ಲಿ ಬರ್ತಡೇ ಪಾರ್ಟಿ ಆಚರಿಸಿಕೊಳ್ಳುತ್ತಿದ್ದಾರೆ ಎಂದು ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ವ್ಯಂಗ್ಯವಾಡಿದರು.
ಮಂಡ್ಯ ನಗರದ ಬಂದೀಗೌಡ ಬಡಾವಣೆಯಲ್ಲಿರುವ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯ ಜನರು,ರೈತರು ಸಂಕಷ್ಟದಲ್ಲಿರುವಾಗ ಅವರ ಪರ ಮುಂದಾಳತ್ವ ವಹಿಸಬೇಕಾದ ಸಂಸದೆ ಸುಮಲತಾ ಪಂಚತಾರಾ ಹೋಟೆಲ್ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡು ಕಾಲಕಳೆಯುತ್ತಿದ್ದಾರೆ ಎಂದು ಎಂದು ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ವ್ಯಂಗ್ಯವಾಡಿದರು.
ಮಂಡ್ಯ ಜಿಲ್ಲೆಯ ಸಚಿವ, ಶಾಸಕರುಗಳು ನಾಟಕವಾಡುತ್ತಿದ್ದಾರೆ. ಗಣಿಗಾರಿಕೆ ಬಗ್ಗೆ ಹೆಚ್ಚು ಆಸಕ್ತಿ ತೋರುತ್ತಿದ್ದ ಸಂಸದರು ಜಿಲ್ಲೆಯ ಜೀವನಾಡಿಯಾಗಿರುವ ಕಾವೇರಿ ನೀರಿನ ಉಳಿವಿಗೆ ಏಕೆ ಚಕಾರವೆತ್ತುತ್ತಿಲ್ಲ, ಅದೇ ರೀತಿ ರಾಜ್ಯದಲ್ಲಿರುವ ಬಿಜೆಪಿಯ ಸಂಸದರ ಮೌನಕ್ಕೆ ಏನನ್ನಬೇಕೆಂದು ಪ್ರಶ್ನಿಸಿದರು.
ಶಾಸಕ ಹೆಚ್.ಟಿ.ಮಂಜು ಮಾತನಾಡಿ, ರೈತರಿಗೆ ನೀರು ಹರಿಸಲು ನೂರೆಂಟು ಮಾನದಂಡಗಳನ್ನು ಮುಂದೆ ಮಾಡುವ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸಲು ಯಾವುದೇ ಸಭೆ ಅಥವಾ ಮಾನದಂಡ ಬಳಸಿಲ್ಲ. ಸುಪ್ರೀಂ ಕೋರ್ಟ್ ನಿಂದ ಬೈಯಿಸಿಕೊಳ್ಳಲೇ ಎನ್ನುವ ಜಲ ಸಂಪನ್ಮೂಲರ ಮಾತು ಸರಿಯಲ್ಲ, ಹೇಮಾವತಿ ನದಿ ಪಾತ್ರದಲ್ಲಿ ಈಗಾಗಲೇ ನೀರಿನ ಹಾಹಾಕಾರ ಆರಂಭವಾಗಿದ್ದು, ಜಿಲ್ಲೆಯ ಮದ್ದೂರು,ಮಳವಳ್ಳಿ ತಾಲ್ಲೂಕು ಬರ ಪೀಡಿತ ಎಂದು ಘೋಷಿಸಿದ್ದು, ಉಳಿದು ಐದು ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಬೇಕೆಂದು ಒತ್ತಾಯಿಸಿದರು.
ಕದ್ದು ಮುಚ್ಚಿ ನೀರು
ಮಾಜಿ ಶಾಸಕ ಕೆ.ಸುರೇಶ್ ಗೌಡ ಮಾತನಾಡಿ, ಕಾವೇರಿ ಭಾಗದ ರೈತರ ಸಂಕಷ್ಟ ಲೆಕ್ಕಿಸದೇ ತಮ್ಮ ಬೇಜವಾಬ್ದಾರಿತನದಿಂದ ನೀರು ಹರಿಸಲು ಮುಂದಾಗಿರುವ ಸರ್ಕಾರ ಕಾವೇರಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ವಾಸ್ತವಾಂಶವನ್ನು ಪ್ರಾಧಿಕಾರಕ್ಕೆ ಮನವರಿಕೆ ಮಾಡಿಕೊಡುವಲ್ಲಿ ವಿಫಲವಾಗಿದೆ.ತಮಿಳು ನಾಡಿಗೆ ನೀರು ಹರಿಸುವುದೇ ರಾಜ್ಯ ಸರ್ಕಾರದ ಒಂದಂಶದ ಕಾರ್ಯಕ್ರಮ.ಬೆಳಿಗ್ಗೆ ಐದು ಸಾವಿರ ಕ್ಯೂಸೆಕ್ ನೀರು ಹರಿಸುತ್ತಾ,ರಾತ್ರಿ ಹತ್ತು ಸಾವಿರ ಕ್ಯೂಸೆಕ್ ನೀರನ್ನು ಕದ್ದು ಮುಚ್ಚಿ ಹರಿಸುತ್ತಿದೆ ಎಂದರು.
ಮೇದಾಟು-ಮೇದಾಟ
ಮೇಕೆದಾಟು ಅಣೆಕಟ್ಟು ಕಟ್ಟುತ್ತೇವೆ ಎಂದು ರಾಜಕೀಯ ಬೇಳೆ ಬೇಯಿಸಿಕೊಂಡ ಕಾಂಗ್ರೆಸ್ ನಾಯಕರು, ಈಗ ಇದರ ಬಗ್ಗೆ ಮಾತನಾಡುತ್ತಿಲ್ಲ. ಮೇಕೆದಾಟು ವಿಷಯ ಇಟ್ಟು ಕೊಂಡು ಚುನಾವಣೆ ನಡೆದ ಮೇ ತಿಂಗಳು ದಾಟಿದರು. ಈಗ ಅಧಿಕಾರ ಹಿಡಿದು ಮೇದಾಟ ನಡೆಸುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಒಂದು ಟಿಎಂಸಿಗೆ ಎಷ್ಟು ಕ್ಯೂಸೆಕ್ ನೀರು ಎಂಬುದು ಗೊತ್ತಿಲ್ಲ. ಆದರೆ ಅಧಿಕಾರಿಗಳಿಂದ ಎಷ್ಟು ಬರುತ್ತೆ ಎಂಬುದು ಮಾತ್ರ ಗೊತ್ತಿದೆ ಎಂದು ವ್ಯಂಗ್ಯವಾಡಿದರು.
ಗೋಷ್ಠಿಯಲ್ಲಿ ಶಾಸಕ ಎಚ್.ಟಿ.ಮಂಜು,ಮಾಜಿ ಶಾಸಕರಾದ ಅನ್ನದಾನಿ, ಕೆ.ಟಿ.ಶ್ರೀ ಕಂಠೇಗೌಡ, ಜಿಲ್ಲಾಧ್ಯಕ್ಷ ಡಿ.ರಮೇಶ್, ಜಿ.ಪಂ.ಮಾಜಿ ಸದಸ್ಯ ಮರೀಗೌಡ,ಮುಖಂಡ ಬಿ.ಆರ್.ರಾಮಚಂದ್ರು, ಉಪಸ್ಥಿತರಿದ್ದರು.