ಮಂಡ್ಯ ನಗರದ ಜಿ.ಪಂ.ಬಳಿ ಇರುವ ಪ್ರೇಮ್ಚಂದ್ ಹಿಂದಿಭವನದಲ್ಲಿ ಚಿರಂತ ಪ್ರಕಾಶನ, ಮಂಡ್ಯ ವತಿಯಿಂದ ಇಂದು ಲೇಖಕಿ ಡಾ.ಸುಮಾರಾಣಿ ಶಂಭುರವರ ಎರಡು ಕೃತಿಗಳ ಲೋಕಾರ್ಪಣೆ ಮಾಡಲಾಯಿತು.
ಕೃತಿ ಬಿಡುಗಡೆಯನ್ನು ಪ್ರೊ.ಜಿ.ಟಿ.ವೀರಪ್ಪ, ಪ್ರೊ.ಎಸ್.ಬಿ.ಶಂಕರಗೌಡ ಹಾಗೂ ಕಸಾಪ ಮಾಜಿ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ ಜಂಟಿಯಾಗಿ ನೆರವೇರಿಸಿದರು.
ಪ್ರೊ.ಜಿ.ಟಿ.ವೀರಪ್ಪ ಮಾತನಾಡಿ, ಲೇಖಕಿ ಡಾ.ಸುಮಾರಾಣಿ ಶಂಭು ರಚಿಸಿರುವ ಆಧುನಿಕ ಮಹಿಳಾಕಾವ್ಯ – ಪುರಾಣ ಸ್ತ್ರೀ ದರ್ಶನ ಉತ್ತಮ ಗ್ರಂಥವಾಗಿದೆ.ಓದುಗರಿಗೆ ಅದರಲ್ಲೂ ಸಾಹಿತ್ಯದ ಅಭ್ಯಾಸಿಗಳಿಗೆ ಉತ್ತಮ ಆಕರ ಗ್ರಂಥವಾಗಿದೆ. ಲೇಖಕಿ ಸುಮಾರಾಣಿ ಅವರು ಸಾಕಷ್ಟು ಅಧ್ಯಯನ ನಡೆಸಿ, ಎಲ್ಲೂ ಕೂಡಾ ಲೋಪವಾಗದಂತೆ ಕೃತಿ ರಚಿಸಿದ್ದಾರೆ. ಕನ್ನಡ ಸಾಹಿತ್ಯ ಲೋಕಕ್ಕೆ ಒಂದು ಉತ್ತಮ ಕೃತಿ ಇಂದು ಸೇರ್ಪಡೆಯಾಗಿದ್ದಕ್ಕೆ,ಅವರನ್ನು ಅಭಿನಂದಿಸುವೆ ಎಂದರು.
ಸುಮಾರವರ ಮತ್ತೊಂದು ಕೃತಿ ಸಿಗ್ನೇಚರ್ – ಲಲಿತ ಪ್ರಬಂಧಗಳ ಸಂಖಲನ ಕುರಿತು ಮಾತನಾಡಿದ ವಿಶ್ರಾಂತ ಪ್ರಾಂಶುಪಾಲರಾದ ಪ್ರೊ. ಎಸ್.ಬಿ.ಶಂಕರಗೌಡರವರು, ಸುಮಾರಾಣಿರವರಿಗೆ ವಿಮರ್ಶೆ, ವಿಡಂಬನಾ ಶೈಲಿ ಚೆನ್ನಾಗಿ ಒಗ್ಗಿದೆ. ಸಮಾಜವನ್ನು ತಿದ್ದುವ ಅವರ ಮೊನಚಾದ ಶೈಲಿ ಗಂಭೀರತೆಯ ಕಡೆ ದೃಷ್ಟಿ ಹಾಯುವಂತೆ ಪ್ರೇರೇಪಿಸುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ಮಾಜಿ ಅಧ್ಯಕ್ಷರಾದ ಮೀರಾ ಶಿವಲಿಂಗಯ್ಯ ಮಾತನಾಡಿ,ಸುಮಾರಾಣಿ ಅವರ ಎರಡೂ ಕೃತಿಗಳು ಮೌಲಿಕವಾದದ್ದು. ಒಮ್ಮೆ ಓದಲು ತೊಡಗಿದರೆ ಮತ್ತೆ ಮತ್ತೆ ಓದುವಂತೆ ಪ್ರೇರೇಪಿಸುತ್ತದೆ. ಸಾಕಷ್ಟು ಪ್ರತಿಭಾವಂತೆಯಾದ ಅವರಿಂದ ಮತ್ತಷ್ಟು ಸದಭಿರುಚಿಯ ಕೃತಿಗಳು ಬರಲಿ ಎಂದು ಆಶಿಸಿದರು.
ವೇದಿಕೆಯಲ್ಲಿ ಲೇಖಕಿ ಡಾ. ಸುಮಾರಾಣಿ ಶಂಭು. ಕಬ್ಬನಹಳ್ಳಿ ಶಂಭು ಉಪಸ್ಥಿತರಿದ್ದರು.