ನಾಗಮಂಗಲ ತಾಲೂಕಿನ ಸರ್ಕಾರಿ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡು ಸಕ್ರಮ ಮಾಡಿಕೊಂಡ ಫಲಾನುಭವಿಗಳಿಗೆ ಶಾಸಕ ಸುರೇಶ್ ಗೌಡ ಸೋಮವಾರ ಹಕ್ಕುಪತ್ರಗಳನ್ನು ವಿತರಿಸಿದರು.
ನಾಗಮಂಗಲ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾದ ಹಕ್ಕು ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಹಕ್ಕು ಪತ್ರ ವಿತರಿಸಿ ನಂತರ ಮಾತನಾಡಿದ ಅವರು, ‘ಇಂದಿನಿಂದ ಈ ಜಮೀನು ಸರ್ಕಾರದಲ್ಲ, ಇದು ನಿಮ್ಮ ಸ್ವತ್ತು. ನೆಮ್ಮದಿಯಿಂದ ವಾಸ ಮಾಡಬಹುದು’ ಎಂದರು.
ನೂರಾರು ವರ್ಷಗಳಿಂದ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡು ವಾಸಮಾಡುತ್ತಾ ಜೀವನ ಸಾಗಿಸುತ್ತಾ ಬಂದಿರುವ ಹಿಂದುಳಿದ ವರ್ಗದವರು, ದಲಿತ ಜನಾಂಗದವರಿಗೆ ಇಂದು ಹಕ್ಕು ಪತ್ರ ವಿತರಣೆ ಮಾಡುತ್ತಿದ್ದೇವೆ. ಹಕ್ಕು ಪತ್ರ ಪಡೆಯುವುದು ಎಷ್ಟು ಮುಖ್ಯವೋ ಪಂಚಾಯಿತಿಗೆ ಹೋಗಿ ಇ ಸ್ವತ್ತು ಮಾಡಿಸಿಕೊಳ್ಳುವುದು ಅಷ್ಟೇ ಮುಖ್ಯ ಇ ಸ್ವತ್ತು ಮಾಡಿಸಿಕೊಂಡು ಖಾತೆ ಮಾಡಿಸಿಕೊಳ್ಳಬೇಕು ಎಂದರು.
ಕಂದಾಯ ಗ್ರಾಮಗಳಾದ ಬಿಂಡಿಗನವಿಲೆ ಹೋಬಳಿಯ ವಡ್ಡರಹಟ್ಟಿ, ತುರುಬನಹಳ್ಳಿ ಗ್ರಾಮದ 67ಜನರಿಗೆ, ಕಸಬಾ ಹೋಬಳಿಯ ಬಾಳನಕೊಪ್ಪಲು, ಬೆಟ್ಟದ ಮಲ್ಲೇನಹಳ್ಳಿ ಗ್ರಾಮದ 62 ಜನರಿಗೆ, ಬೆಳ್ಳೂರು ಹೋಬಳಿಯ ರಮಾನಂದನಗರ, ಚುಂಚನಹಳ್ಳಿ ಗ್ರಾಮದ 70 ಜನರಿಗೆ ಹಾಗೂ ಪಂಚಾಯತಿ ಗ್ರಾಮಗಳಾದ ಹರದನಹಳ್ಳಿ ಗ್ರಾಮ ಪಂಚಾಯಿತಿಯ ದೇವಲಾಪುರದ 21ಜನರಿಗೆ ಹಾಗೂ ಕಾಂತಪುರ ಪಂಚಾಯಿತಿಯ 37 ಜನರಿಗೆ ಹಕ್ಕು ಪತ್ರ ಹಂಚಿಕೆ ಮಾಡಲಾಯಿತು. ನಾಗಮಂಗಲ ತಾಲೂಕಿನಲ್ಲಿ ಒಟ್ಟು 257ಜನರಿಗೆ ಹಕ್ಕುಪತ್ರ ಹಂಚಿಕೆ ಮಾಡಲಾಯಿತು.
ಪಂಚಾಯಿತಿ ಕಾರ್ಯ ನಿರ್ವಹಣಾ ಅಧಿಕಾರಿ ಚಂದ್ರಮೌಳಿ, ರಾಜಸ್ವ ನಿರೀಕ್ಷಕ ಗೋವಿಂದರಾಜು, ಕಾಂತಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ್, ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮ ಲೆಕ್ಕಧಿಕಾರಿಗಳು ಇದ್ದರು.