ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿಯವರ ಪಾತ್ರ ಎಷ್ಟಿದೆಯೋ, ಸಂವಿಧಾನವನ್ನು ನಮಗೆ ಕೊಡುಗೆಯಾಗಿ ನೀಡಿದ ಅಂಬೇಡ್ಕರ್ ರವರ ಪಾತ್ರವೂ ಕೂಡ ಅಷ್ಟೇ ಮುಖ್ಯ.ಪ್ರಬುದ್ಧ ರಾಷ್ಟ್ರವನ್ನು ಕಟ್ಟಲು ಸಂವಿಧಾನ ಮತ್ತು ಕಾನೂನುಗಳನ್ನ ಪ್ರತಿಯೊಬ್ಬರೂ ಚಾಚು ತಪ್ಪದೆ ಪಾಲಿಸಬೇಕು ಎಂದು ಶಾಸಕ ಸುರೇಶ್ ಗೌಡ ಹೇಳಿದರು.
ನಾಗಮಂಗಲ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲ್ಲೂಕು ಆಡಳಿತ ವತಿಯಿಂದ ನಡೆದ 74ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದಿಂದ ಇಂದು ಎಲ್ಲಾ ನಾಗರೀಕರು ಹಕ್ಕು, ಸವಲತ್ತುಗಳನ್ನು ಪಡೆದುಕೊಳ್ಳಲು ಸಾಧ್ಯ ಎಂದರು.
ತಹಶೀಲ್ದಾರ್ ಕೆ.ಎಂ.ಸ್ವಾಮಿಗೌಡ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಮಹಾಮಾರಿ ಕೊರೋನ ಎರಡು ವರ್ಷಗಳಿಂದ ವಿಶ್ವದಾದ್ಯಂತ ಹರಡಿತು. ಭಾರತದಲ್ಲಿ ಕರೋನ ಹೋಗಲಾಡಿಸುವ ನಿಟ್ಟಿನಲ್ಲಿ ವಿಜ್ಞಾನಿಗಳು ಶ್ರಮವಹಿಸಿ ಲಸಿಕೆ ಕಂಡು ಹಿಡಿಯುವ ಮೂಲಕ ರೋಗ ಹೋಗಲಾಡಿಸಿದ್ದಾರೆ ಎಂದು ಹೇಳಿದರು.
ನಮ್ಮ ದೇಶಕ್ಕೆ ಗಾಂಧೀಜಿ ಹಾಗೂ ಅಂಬೇಡ್ಕರ್ ರವರ ಕೊಡುಗೆ ಅಪಾರವಾಗಿದ್ದು, ಅವರಿಗೆ ಗೌರವ ಸಲ್ಲಿಸುವುದು ನಮ್ಮೆಲ್ಲೆರ ಜವಾಬ್ದಾರಿ.ದೇಶೀಯ ಸಂಸ್ಥಾನಗಳನ್ನು ವಿಲೀನ ಮಾಡುವಲ್ಲಿ ಸರ್ದಾರ್ ವಲ್ಲಭಾಯಿ ಪಟೇಲ್ ರವರ ಪಾತ್ರ ಹೆಚ್ಚಾಗಿದೆ, ಅಂಥವರನ್ನು ಈ ಸಂದರ್ಭದಲ್ಲಿ ಸ್ಮರಿಸುವ ಮೂಲಕ ಎಲ್ಲರಿಗೂ ಗೌರವ ಸಲ್ಲಿಸೋಣ ಎಂದರು.
ಈ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಗಳಿಸಿದ ವಿಧ್ಯಾರ್ಥಿಗಳಾದ ರಕ್ಷಿತಾ, ನಾಗರತ್ನ,ಸೃಷ್ಟಿ, ವಿಕಾಸ್, ದರ್ಶನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಮೌಳಿ,ಆರಕ್ಷಕ ಅಧಿಕಾರಿ ಲಕ್ಷ್ಮೀ ನಾರಾಯಣ ಪ್ರಸಾದ್,ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್, ಅಧ್ಯಕ್ಷೆ ಆಶಾ ಕುಮಾರ್, ಉಪಾಧ್ಯಕ್ಷ ಜಾಫರ್, ಸ್ಥಾಯಿ ಸಮಿತಿ ಅಧ್ಯಕ್ಷ ಚನ್ನಪ್ಪ ಉಪಸ್ಥಿತರಿದ್ದರು.