ಮಂಡ್ಯ ತಾಲ್ಲೂಕಿನ ತಹಶೀಲ್ದಾರ್ ಮಹಮದ್ ಕುಂಞ ಅವರು ದಕ್ಷ ಹಾಗೂ ಪ್ರಾಮಾಣಿಕವಾಗಿ, ಗ್ರಾಮೀಣ ರೈತರ ಪರವಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಅವರ ವಿರುದ್ದ ಕೆಲವರು 3 ಗುಂಟೆ ಜಮೀನಿನ ಅಕ್ರಮ ಖಾತೆ ಮಾಡಿದ ಆರೋಪ ಮಾಡಿರುವುದು ಸತ್ಯಕ್ಕೆ ದೂರವಾಗಿದೆ ಎಂದು ಮಂಡ್ಯ ತಾಲ್ಲೂಕು ಸಾರ್ವಜನಿಕ ಹಿತಾಸಕ್ತಿ ವೇದಿಕೆ ಸ್ಪಷ್ಟನೆ ನೀಡಿದೆ.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರಸಭೆ ಸದಸ್ಯ ಜಾಕೀರ್ ಪಾಷ ಮಾತನಾಡಿ, ತಹಶೀಲ್ಧಾರ್ ಮಹಮ್ಮದ್ ಕುಂಞ ಅವರು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ, ಹಲವಾರು ಜಟಿಲ ಸಮಸ್ಯೆಗಳನ್ನು ಎರಡು ಕಡೆಯವರಿಗೂ ಒಪ್ಪಿಗೆಯಾಗುವ ರೀತಿಯಲ್ಲಿ ಬಗೆಹರಿಸಿದ್ದಾರೆ. ಆದರೆ ಕೆಲವರು ಉದ್ದೇಶ ಪೂರ್ವಕವಾಗಿ ಅಕ್ರಮ ಖಾತೆ ಆರೋಪ ಮಾಡುತ್ತಿದ್ದಾರೆ, ಆದರೆ ಹೈಕೋರ್ಟ್ ನ ಆದೇಶದಂತೆ ಕಾನೂನು ಪ್ರಕಾರವೇ ಅವರು ಖಾತೆ ಮಾಡಿಕೊಟ್ಟಿದ್ದು, ಅದರಲ್ಲಿ ಅವರ ಯಾವುದೇ ಪಾತ್ರವಿಲ್ಲ. ಹೀಗಿರುವವಾಗ ಅವರ ಮೇಲೆ ಮಾಡುತ್ತಿರುವ ಆರೋಪದಲ್ಲಿ ಯಾವುದೆ ಉರುಳಿಲ್ಲ ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಅತಿವೃಷ್ಟಿಯಿಂದ ನೊಂದ ರೈತರಿಗೆ ಸಾಂತ್ವನ ಹೇಳುವುದರ ಜೊತೆಗೆ ಅಗತ್ಯ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಮಂಡ್ಯ ತಾಲ್ಲೂಕು ಕಚೇರಿಗೆ ಕರ್ತವ್ಯಕ್ಕೆ ಬಂದ ದಿನದಿಂದ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಾಲ್ಲೂಕು ಕಚೇರಿಯಲ್ಲಿ ಮಧ್ಯವರ್ತಿಗಳ ಕೆಲಸಕ್ಕೆ ಕಡಿವಾಣ ಹಾಕಿ ಸಾಮಾನ್ಯರಿಗೆ ನೇರವಾಗಿ ಸ್ಪಂದಿಸುತ್ತಿದ್ದಾರೆ, ಅವರ ನ್ಯಾಯ, ನಿಷ್ಠುರತೆಯನ್ನು ಸಹಿಸದೇ ಕೆಲವರು ಆರೋಪ ಮಾಡಿರುವುದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದರು.
ಮಂಡ್ಯ ತಾಲ್ಲೂಕಿನಲ್ಲಿ ಬಾಕಿ ಉಳಿದಿರುವ ಕಂದಾಯ ಇಲಾಖೆಯ ಕೆಲಸಗಳನ್ನು ತ್ವರಿತಗತಿಯಲ್ಲಿ ನಿರ್ವಹಿಸಿ ಬಡವರು, ನಿರ್ಗತಿಕರು ಹಾಗೂ ನೊಂದ ಸಾರ್ವಜನಿಕರಿಗೆ ನ್ಯಾಯ ದೊರಕಿಸಿಕೊಡುವುದರ ಜೊತೆಗೆ, ಸರ್ಕಾರಕ್ಕೆ ಉಂಟಾಗುತ್ತಿದ್ದ ನಷ್ಟವನ್ನು ತಪ್ಪಿಸಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಯಾವುದೇ ಪ್ರಭಾವಿಗಳ ಒತ್ತಾಯಕ್ಕೆ ಮಣಿಯದೇ ಸಾರ್ವಜನಿಕವಾಗಿ ದಕ್ಷ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವುದು ಮೆಚ್ಚುವಂತಹದ್ದಾಗಿರುತ್ತದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಸಮಿತಿಯ ಮುಖಂಡರಾದ ಜಬೀವುಲ್ಲಾ, ಸಜ್ಜದ್ ಪಾಷ, ಸೆಬಾಸ್ಟಿನ್ ಪ್ರಮೋದ್ ಉಪಸ್ಥಿತರಿದ್ದರು.