Tuesday, September 17, 2024

ಪ್ರಾಯೋಗಿಕ ಆವೃತ್ತಿ

ಆ ಹತ್ಯೆ ಹಂತಕರ ಯೋಜನೆಯಷ್ಟೆ ಅಲ್ಲ; ತಾಯಿ ಗೌರಿಯ ಆಯ್ಕೆಯೂ ಹೌದು!

ಗಿರೀಶ್ ತಾಳಿಕಟ್ಟೆ

ಎಂದಿನಂತೆ ಕಾರ್ ಬಂದು ಪೋರ್ಟಿಕೊದಲ್ಲಿ ನಿಂತಿತು. ಬೆಳಗಿನ ಸುಮಾರು ಹತ್ತರ ಸಮಯ. ಪೋರ್ಟಿಕೊದ ಎದುರಿಗಿರುವ ತಳ ಮಹಡಿಯ ಚೇಂಬರ್ ನನ್ನದು. ಕಾರ್ ಬಂದದ್ದು ಮತ್ತು ಅದು ಗೌರಿ ಮೇಡಂ ಕಾರು ಅನ್ನೋದು ಗೊತ್ತಾಯ್ತು. ಆದರೂ ನನ್ನ ಪಾಡಿಗೆ ನಾನು ಕಂಪ್ಯೂಟರ್ ನಲ್ಲಿ ಮುಳುಗಿದ್ದೆ. ಅದು ಹೊಸ ಸಂಗತಿಯಲ್ಲ. ತಾನು ಬಂದದ್ದನ್ನು ಗುರುತಿಸಿ ನೌಕರರು ವಿಶೇಷ ಗೌರವ ತೋರಬೇಕು; ಗುಡ್ ಮಾರ್ನಿಂಗ್ ಹೇಳಬೇಕು; ತಮ್ಮ ಲಗೇಜುಗಳನ್ನು ಎತ್ತೊಯ್ದು ಅವರ ರೂಮು ತಲುಪಿಸಬೇಕು; ಕಡೇ ಪಕ್ಷ ಒಂದು ನಗು ಚೆಲ್ಲಿ ಕಣ್ಣಲ್ಲೇ ವಿನಯ ಪ್ರದರ್ಶಿಸಬೇಕು… ಇಂಥಾ ಯಾವ ನಿರೀಕ್ಷೆಗಳೂ ಅವರಿಗಿರಲಿಲ್ಲ. ಆ ಸಂಸ್ಥೆಯ ಯಜಮಾನಿಯಾಗಿದ್ದರೂ, ಎಲ್ಲರ ಜೊತೆ ತಾನೂ ಒಬ್ಬ ನೌಕರಳಾಗಿ ಇದ್ದುಬಿಡುತ್ತಿದ್ದರು. ಸೀದಾ ತನ್ನ ಚೇಂಬರು ಹೊಕ್ಕು ಕೆಲಸದಲ್ಲಿ ತಲ್ಲೀನರಾದರೆ, ಅಗತ್ಯವಿದ್ದಾಗಷ್ಟೆ ನಮ್ಮನ್ನು ಕರೆದು ಮಾತಾಡಿಸುತ್ತಿದ್ದದು. ಇಲ್ಲವೆಂದರೆ ಮಧ್ಯಾಹ್ನದ ಊಟದ ಸಮಯದಲ್ಲಿ ಮಾತ್ರ ಅವರ ಜೊತೆ ಒಂದಷ್ಟು ಹರಟೆಗೆ ಅವಕಾಶ. ಹಾಗಾಗಿ, 2015 ಆಗಸ್ಟ್‌ 30ರ ಆ ದಿನ ಗೌರಿ ಮೇಡಂ ಕಾರ್ ಬಂದಿದ್ದನ್ನು ನಾನು ನಿರ್ಲಕ್ಷಿಸಿ ಕೆಲಸದಲ್ಲಿ ತಲ್ಲೀನನಾಗಿದ್ದೆ.

ಕಾರಿನ ಡೋರ್ ಮುಚ್ಚಿದ ಸದ್ದು ಯಾಕೋ ಸಹಜ ಅನ್ನಿಸಲಿಲ್ಲ. ಯಾಕೆಂದರೆ, ಪಾದರಸದಂತೆ ತುಸು ಲವಲವಿಕೆಯ ಗುಣದವರಾದರೂ ಗೌರಿ ಮೇಡಂ ಯಾವತ್ತೂ, ಯಾವ ವಸ್ತುವನ್ನೂ ರಫ್‌ ಆಗಿ ಹ್ಯಾಂಡಲ್ ಮಾಡಿದ್ದನ್ನು ನಾನು ನೋಡಿಲ್ಲ. ಆದರೆ ಅವತ್ತು, ಕಾರಿನ ಬಾಗಿಲನ್ನು ಸ್ವಲ್ಪ ಬಿರುಸಾಗಿಯೆ ತಳ್ಳಿದ್ದರು. ದಢ್‌ ಎಂದ ಆ ಸದ್ದು ನನಗೆ ಅಸಹಜವೆನಿಸಿತು. ಕತ್ತು ಹೊರಳಿಸಿ ನೋಡಬೇಕೆನ್ನುವಷ್ಟರಲ್ಲಿ, ಎಂದಿನಂತೆ ಮೆಟ್ಟಿಲುಗಳನ್ನೇರಿ ಮೊದಲ ಮಹಡಿಗೆ ಹೋಗುವ ಬದಲು ಸೀದಾ ನನ್ನ ಚೇಂಬರಿನೊಳಕ್ಕೆ ಧಾವಿಸಿ ಬರುತ್ತಿದ್ದರು. ಅವರ ನಡಿಗೆಯಲ್ಲಿ ಅಸಹಜತೆ ಇತ್ತು. ದೇಹ ಕಂಪಿಸುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಕಾಲುಗಳು ಹೆಜ್ಜೆ ತಪ್ಪುತ್ತಿದ್ದವು. ಮುಖದ ತುಂಬಾ ಗಾಬರಿ-ಗೊಂದಲ. ಕೈಯಲ್ಲಿದ್ದ ತಮ್ಮ ಬ್ಯಾಗನ್ನು ನನ್ನ ಟೇಬಲ್ಲಿನ ಮೇಲೆ ದೊಪ್ಪನೆ ಎಸೆದವರೆ, ಎದುರಿಗಿದ್ದ ಪ್ಲಾಸ್ಟಿಕ್ ಚೇರಿನ ಮೇಲೆ ಕುಸಿದು ಕೂತರು.

“ಹೊಡ್ದುಬಿಟ್ರ…. ರಾಕ್ಷಸರು! ಕೊಂದ್‌ ಬಿಟ್ರು. ಹಣೆ.. ಹಣೆ….ಹಣೆಗೆ ಹೊಡ್ದಿದಾರೆ” ಕೂರುವ ಸಮಯದಲ್ಲಿ ಅವರ ಬಾಯಿಂದ ಹೊರಬಿದ್ದ ಮಾತುಗಳು ಅಸ್ಖಲಿತವಾಗಿದ್ದವು. ನಾನೀಗ ಅವರಿಗಿಂತ ದುಪ್ಪಟ್ಟು ಗಾಬರಿಗೀಡಾದೆ. ವಿಷಯ ಏನು ಅಂತ ತಿಳಿದು ಗಾಬರಿಯಾಗುವುದಕ್ಕೂ, ವಿಷಯ ಏನು ಅನ್ನೋದು ತಿಳಿಯದೇ ಬರೀ ಸನ್ನಿವೇಶ ನೋಡಿ ಗಾಬರಿಯಾಗುವುದಕ್ಕೂ ಬಹಳ ವ್ಯತ್ಯಾಸವಿರುತ್ತೆ. ಏನೇನೋ ಕಲ್ಪನೆಗಳು. ನನ್ನ ಅಂಗೈ ಮತ್ತು ಪಾದಗಳು ಅಕ್ಷರಶಃ ತಣ್ಣಗಾಗಿ ಹೋದವು. ನಾನು ಯಾವತ್ತೂ ಗೌರಿ ಮೇಡಂ ಅವರನ್ನು ಆ ರೀತಿ ನೋಡಿದವನಲ್ಲ. ಮುಂದೆ, ದಾವಣಗೆರೆಯಲ್ಲಿ ನಾವು ಲಂಕೇಶ್‌ ಕಾರ್ಯಕ್ರಮ ಆಯೋಜಿಸಿದಾಗ, ಬರಹಗಾರ ಯೋಗೇಶ್ ಮಾಸ್ಟರ್ ಮೇಲೆ ಕೆಲವು ಕೋಮುವಾದಿಗಳು ಮಸಿ ಎರಚಿದ ಸಂದರ್ಭದಲ್ಲಿ ಗೌರಿ ಮೇಡಂ ಇಷ್ಟೇ ಪ್ರಕ್ಷುಬ್ಧಗೊಂಡದ್ದನ್ನು ಇನ್ನೊಮ್ಮೆ ನೋಡಿದೆ. ಆದರೆ ಅವತ್ತು ನಾನು ಅವರನ್ನು ಆ ರೀತಿ ನೋಡುತ್ತಿದ್ದುದು ಅದೇ ಮೊದಲು. ಗಾಬರಿಯಾದೆ.

ಏನು ಮಾಡುವುದೆಂದು ತೋಚಲಿಲ್ಲ. ನನ್ನ ಕೈಗಳು ನನ್ನ ಆಣತಿಗೂ ಕಾಯದೆ, ಪಕ್ಕದಲ್ಲಿದ್ದ ನೀರಿನ ಬಾಟಲಿಯನ್ನು ಎತ್ತಿ ಗೌರಿ ಮೇಡಂರತ್ತ ಚಾಚಿದವು. “ಮೇಡಂ ನೀರು ಕುಡೀರಿ… ಸ್ವಲ್ಪ ಸಮಾಧಾನ ಮಾಡ್ಕೊಳಿ.. ಏನಾಯ್ತು ಅಂತ ಹೇಳಿ ಮೇಡಂ” ನನ್ನೊಳಗೆ ಉಳಿದಿದ್ದ ಅಷ್ಟೂ ಧೈರ್ಯ ಒಟ್ಟುಗೂಡಿಸಿದ ತರುವಾಯ ನನಗೆ ಪ್ರತಿಕ್ರಿಯಿಸಲು ಸಾಧ್ಯವಾದದ್ದು ಇಷ್ಟೆ.

ಕುಡಿಯುವ ಪ್ರಯತ್ನ ಮಾಡಿದರಾದರೂ, ನೀರು ಗಂಟಲೊಳಗೆ ಇಳಿಯಲಿಲ್ಲ ಅನ್ನಿಸುತ್ತೆ. ವಾಪಾಸು ಟೇಬಲ್‌ ಮೇಲಿಟ್ಟು, ತಮ್ಮನ್ನು ತಾವು ನಿಯಂತ್ರಣಕ್ಕೆ ತಂದುಕೊಳ್ಳುವ ಕಸರತ್ತು ಮುಂದುವರೆಸಿದರು. ಕೂತ ಚೇರಿನಲ್ಲೆ ಅವರು ಕಂಪಿಸುತ್ತಿದ್ದರು. ಅದು ಭಯದ ಕಂಪನವಲ್ಲ; ಸಿಟ್ಟಿನ ಕಂಪನ ಅನ್ನೋದು ಅರ್ಥವಾಯ್ತು.

ತುಸು ಸಾವರಿಸಿಕೊಂಡು, “ಎಂ ಎಂ ಕಲ್ಬುರ್ಗಿಯವರನ್ನ ಕಿರಾತಕರು ಕೊಂದು ಹಾಕ್ಬಿಟ್ಟಿದಾರೆ ಗಿರೀಶ್. ಹಾಡುಹಗಲೇ! ಅವರ ಮನೆಯ ಬಳಿಯೇ! ತೋರಿಸಿಬಿಟ್ಟ್ರು ತಮ್ಮ ನೀಚತನನ!!” ಎಂದು ಹೇಳುವಾಗಲು ಅವರ ದನಿ ಕಂಪಿಸುತ್ತಲೇ ಇತ್ತು. ಮೇಡಂ ಗಾಬರಿಯನ್ನು ಕಂಡು ಮೊದಲೇ ಕಂಗಾಲಾಗಿದ್ದ ನಾನು, ಈಗ ಈ ವಿಷಯ ತಿಳಿದು ಇನ್ನಷ್ಟು ಆಘಾತಕ್ಕೀಡಾದೆ. ಆ ಆಘಾತದ ಸುದ್ದಿಯನ್ನ ಅರಗಿಸಿಕೊಳ್ಳಲು ನನಗೆ ಸ್ವಲ್ಪ ಸಮಯ ಬೇಕಾಯ್ತು. ಅದರಾಚೆಗೆ ಮಾತಾಡುವ ಸ್ಥೈರ್ಯ ನನ್ನಲ್ಲಿರಲಿಲ್ಲ. ಒಂದೆರಡು ನಿಮಿಷ ನಮ್ಮಿಬ್ಬರ ನಡುವೆ ಮಾತಿಲ್ಲ. ಕೂರುವಷ್ಟು ತಾಳ್ಮೆಯೂ ಇಲ್ಲದೆ, ಚಡಪಡಿಸುತ್ತಿದ್ದರು.

ಸಟ್ಟನೆ ಮೇಲೆದ್ದವರು, “ಕೆಟ್ಟ ಘಳಿಗೆಗೆ ನಾವೀಗ ತಯಾರಾಗ್ಲೇಬೇಕು! ಉತ್ರ ಕೊಡೋಣ… ರಿಲ್ಯಾಕ್ಸ್‌ ಮಾಡ್ಕೊಳಿ. ಆಮೇಲೆ ಚೇಂಬರಿಗೆ ಬನ್ನಿ” ಎಂದು ಹೇಳಿ, ಬಂದಷ್ಟೇ ವೇಗವಾಗಿ ನಿರ್ಗಮಿಸಿದರು. ಹೆಚ್ಚೆಂದರೆ ನಾಲ್ಕೈದು ನಿಮಿಷಗಳ ಅಂತರದಲ್ಲಿ ನಡೆದ ಇಷ್ಟೂ ಘಟನೆಗೆ ನಾನು ಹೆಪ್ಪುಗಟ್ಟಿಹೋಗಿದ್ದೆ. ರಿಲ್ಯಾಕ್ಸ್‌ ಮಾಡಿಕೊಳ್ಳುವುದು ಎಲ್ಲಿಂದ?

ಮೇಲೆ ಹೋದ ಸ್ವಲ್ಪ ಹೊತ್ತಿನಲ್ಲೆ ಕೆಳಗೆ ಇಳಿದುಬಂದ ಗೌರಿ ಮೇಡಂ, ಕಾರನ್ನೇರಿ ಹೊರಟುಹೋದರು. ಅಷ್ಟರಲ್ಲಾಗಲೇ, ಕಲ್ಬುರ್ಗಿಯವರ ಹತ್ಯೆ ಖಂಡಿಸಿ ಒಂದು ಪ್ರತಿಭಟನೆಯನ್ನು ಯೋಜಿಸಿ, ಅದರ ಮುಂದಾಳತ್ವ ವಹಿಸಲು ಟೌನ್‌ಹಾಲ್‌ನತ್ತ ಸಾಗಿದ್ದರು.

ಕಲ್ಬುರ್ಗಿಯವರ ಹತ್ಯೆಯ ಆ ದಿನದ ಘಟನೆಯನ್ನು ಇಲ್ಲಿ ನೆನಪು ಮಾಡಿಕೊಳ್ಳಲು ಒಂದು ಕಾರಣವಿದೆ. ಗೌರಿ ಮೇಡಂ ಅವರನ್ನು ಕಳೆದುಕೊಂಡು ಇವತ್ತಿಗೆ ಏಳು ವರ್ಷ. ಅವರದು ಕೇವಲ ಒಂದು ಸಾವಲ್ಲ. ಮೇಲ್ನೋಟಕ್ಕೆ ಕಾಣುವ ಹತ್ಯೆಯೂ ಅಲ್ಲ. ಅದು ಬಲಿದಾನ! ಸುಳ್ಳು ಮತ್ತು ಸತ್ಯದ ನಡುವಿನ ನಿರಂತರ ಸಂಘರ್ಷದಲ್ಲಿ ಸತ್ಯದ ಪರವಾಗಿ ನಿಂತ ಕಾರಣಕ್ಕೆ ಕೊಲ್ಲಲ್ಪಡುವ ಪ್ರತಿಯೊಬ್ಬರದು ಬಲಿದಾನವೇ ಸರಿ. ಯಾಕೆಂದರೆ, ತಿಳಿದೂತಿಳಿದು ಅದನ್ನವರು ತಮ್ಮ ಆಯ್ಕೆಯಾಗಿ ಆರಿಸಿಕೊಂಡಿರುತ್ತಾರೆ. ಆದರೆ ಗೌರಿ ಮೇಡಂ ಅವರ ಬಲಿದಾನವನ್ನು ಒಂದು ಕ್ಷುಲ್ಲಕ ಹತ್ಯೆಗೆ ಸಂಕುಚಿತಗೊಳಿಸಿ, ಆ ಹತ್ಯೆಯಿಂದ ಗೌರಿ ತನ್ನನ್ನು ತಾನು ಹೇಗೆಲ್ಲ ಬಚಾವು ಮಾಡಿಕೊಳ್ಳಬಹುದಿತ್ತು ಎಂದು ಕೆಲವರು ಮಾತನಾಡುವಾಗ ಬೇಸರವೆನಿಸುತ್ತದೆ. ತಾನು ಪ್ರಕಟಿಸುತ್ತಿದ್ದ ಸುದ್ದಿಗಳ ಆಯ್ಕೆ ಮತ್ತು ನಿರೂಪಣೆಯ ಶೈಲಿಯಲ್ಲಿ ಇನ್ನಷ್ಟು ಜಾಣತನ ತೋರಿದ್ದರೆ; ತನ್ನ ಆಕ್ಟಿವಿಸಮ್‌ನಲ್ಲಿ ಒಂದಷ್ಟು ನಾಜೂಕುತನ ಪ್ರದರ್ಶಿಸಿದ್ದರೆ; ಮಾತುಗಳ ತೀಕ್ಷ್ಣತೆಯನ್ನು ಕೊಂಚ ತಗ್ಗಿಸಿಕೊಂಡಿದ್ದರೆ; ಸ್ವಲ್ಪ ಎಚ್ಚರ ವಹಿಸಿದ್ದಿದ್ದರೆ; ಹೀಗಿದ್ದಿದ್ದರೆ, ಹಾಗಿದ್ದಿದ್ದರೆ ಗೌರಿ ಇನ್ನಷ್ಟು ದಿನ ಬದುಕಬಹುದಿತ್ತು ಎಂಬ ಸಲಹೆಗಳು ಕೇಳಿಬರುತ್ತಿವೆ. ಈ ಸಲಹೆಗಳನ್ನು ಕೇಳಿದಾಗ, ಗೌರಿ ಮೇಡಂ ತಮ್ಮ ಸೈದ್ಧಾಂತಿಕ ಬದ್ಧತೆಯಲ್ಲಿ ಅತಿಯೆನಿಸುವಷ್ಟು ಹುಂಬತನಕ್ಕೆ ಜಾರಿದ್ದರೇ? ಎಂಬ ಪ್ರಶ್ನೆ ಕಾಡುತ್ತದೆ.

ಹೌದು… ಆ ಸಲಹೆಗಳನ್ನು ಪಾಲಿಸಿದ್ದಿದ್ದರೆ ಗೌರಿ ಇನ್ನಷ್ಟು ದಿನ ಬದುಕಬಹುದಿತ್ತು. ಅದು ಗೌರಿ ಮೇಡಂಗೂ ಗೊತ್ತಿತ್ತು. ಆದರೆ ಹಾಗೆ ಬದುಕಿ ಪ್ರಯೋಜನವೇನು? ಎಂಬ ಗೌರಿ ಮೇಡಂ ಪ್ರಶ್ನೆಗೆ ನಮ್ಮ ಬಳಿ ಉತ್ತರವಿದೆಯೇ? ಬದುಕುವ ಆಸೆ ಹೊತ್ತವರನ್ನು ನಾವು ಎಚ್ಚರಿಸಬಹುದು, ಇನ್ನಷ್ಟು ದಿನ ಅವರಿಂದ ಉಸಿರಾಡಿಸಬಹುದು. ಆದರೆ ಬದುಕುವುದಕ್ಕಿಂತ ನನ್ನ ಬಲಿದಾನವೇ ನಾ ನಂಬಿದ ತತ್ವ ಸಿದ್ದಾಂತಕ್ಕೆ ನಾನು ಕೊಡುವ ಅತಿದೊಡ್ಡ ಕೊಡುಗೆ ಎಂದು ಸಿದ್ದವಾದವರನ್ನು ಎಚ್ಚರಿಸಲು ಸಾಧ್ಯವೇ? ಬಸವಣ್ಣ, ಗಾಂಧಿಗೂ ಈ ಎಚ್ಚರದ ಕೊರತೆಯಿತ್ತೆ?

ಹತ್ಯೆಯಿಂದ ತನ್ನನ್ನು ತಾನು ಬಚಾವು ಮಾಡಿಕೊಂಡು ಬದುಕಲಾಗದ ಗೌರಿ ಮೇಡಂರದ್ದು ಹುಂಬತನ ಎನ್ನುವವರು ಬಸವಣ್ಣ, ಗಾಂಧಿ, ಕಲ್ಬುರ್ಗಿಯವರಿಗೂ ಇದೇ ಮಾತು ಹೇಳುವರೇ? ನಾನಿಲ್ಲಿ ಯಾವ ವ್ಯಕ್ತಿಯನ್ನೂ, ಮತ್ತ್ಯಾವ ವ್ಯಕ್ತಿಯೊಂದಿಗೂ ಹೋಲಿಸುತ್ತಿಲ್ಲ. ಸತ್ಯ ಮತ್ತು ಸುಳ್ಳುಗಳ ನಡುವೆ ಕಾಲಕಾಲಕ್ಕೆ ನಡೆಯುತ್ತಲೇ ಬಂದ ಸಂಘರ್ಷದ ಪುಟದಿಂದ ಒಂದೆರಡು ಸಾಮ್ಯತೆಗಳನ್ನು ಹೆಕ್ಕಿ ತೆಗೆದು ಪ್ರಶ್ನಿಸುತ್ತಿದ್ದೇನಷ್ಟೆ.

ಎಚ್ಚರದ ಕೊರತೆಯ ಕಾರಣಕ್ಕೆ ಗೌರಿ ಹತ್ಯೆಯಾದರು ಎನ್ನುವವರು, ಗೌರಿ ಎಚ್ಚರಗೊಳ್ಳಲು ಕಲ್ಬುರ್ಗಿಯವರ ಹತ್ಯೆಗಿಂತ ಪಾಠ ಬೇಕಾಗಿತ್ತೆ? ಎಂಬ ಪ್ರಶ್ನೆ ಕೇಳಿಕೊಳ್ಳಬೇಕು. ಇನ್ನಷ್ಟು ದಿನ ಬದುಕುವ ಆಸೆ ಗೌರಿ ಮೇಡಂಗೆ ಇದ್ದಿದ್ದರೆ ಕಲ್ಬುರ್ಗಿಯವರ ಹತ್ಯೆಯೇ ಅವರನ್ನು ಎಚ್ಚರಿಸಬೇಕಿತ್ತು. ಬದಲಿಗೆ, ಆ ಹತ್ಯೆ ಅವರ ಹಾದಿಯನ್ನು ಇನ್ನಷ್ಟು ಸ್ಪಷ್ಟವಾಗಿಸಿತು. ಉರಿವ ದೀಪಕ್ಕೆ ಬತ್ತಿಯಾಗುವ ಸಲುವಾಗಿ ತನ್ನನ್ನೇ ತಾನು ಹೊಸೆದುಕೊಳ್ಳಲು ಅವರನ್ನು ಅಣಿಯಾಗಿಸಿತ್ತು. ನಾವು ಏನೆಲ್ಲ ಎಚ್ಚರಗಳನ್ನು ಉಲ್ಲೇಖಿಸಿ, ಹೀಗೆ ಮಾಡಿದ್ದರೆ ಗೌರಿ ಬದುಕಬಹುದಿತ್ತೋ ಎನ್ನುತೇವೆಯೋ, ಅವುಗಳನ್ನು ರೂಢಿಸಿಕೊಳ್ಳಲು ಗೌರಿ ಮೇಡಂಗೆ ಕಷ್ಟವಿರಲಿಲ್ಲ. ಅಥವಾ ಅವುಗಳು ತಿಳಿಯದಷ್ಟು ಅವರು ದಡ್ಡಿಯಾಗಿರಲಿಲ್ಲ. ಆದರೆ ಹಾಗೆ ಬದುಕಿ, ನಾನು ಸಾಧಿಸುವುದೇನು? ಒಂದುವೇಳೆ ಬದುಕಿದರೂ, ಇನ್ನೆಷ್ಟು ಕಾಲ ಬದುಕಬಲ್ಲೆ? ರಾಜಿಯಾಗಿ ಬದುಕಬಲ್ಲ, ಆ ಅವಧಿಯಲ್ಲಿ ಎಂಥಾ ಸಂತೃಪ್ತಿ ಹೊಂದಬಲ್ಲೆ? ಈ ಪ್ರಶ್ನೆಗಳನ್ನು ಅವರು ತಮ್ಮ ಮುಂದಿರಿಸಿಕೊಂಡಿದ್ದರು. ಹಾಗಾಗಿ ನಮ್ಮಂತಹ ಬುದ್ದಿವಂತರ ಕಣ್ಣಿಗೆ `ಹುಂಬತನ’ದಂತೆ ಕಾಣುವ ತ್ಯಾಗದ ಹಾದಿಗೆ ಅವರು ಸಿದ್ದವಾಗಿದ್ದರು.

ಬದುಕುವ ಆಸೆ ಅವರಿಗಿದ್ದಿದ್ದರೆ, ಸರ್ಕಾರದಿಂದ ಪೊಲೀಸ್ ರಕ್ಷಣೆ ಪಡೆಯಬಹುದಿತ್ತು. ಅವರು ಕೇಳಿದ್ದರೆ, ಸರ್ಕಾರ ಇಲ್ಲ ಅನ್ನುತ್ತಿರಲಿಲ್ಲ. ಇವತ್ತಿನ ಸಿದ್ದರಾಮಯ್ಯನವರೆ ಅಂದು ಸಹಾ ಮುಖ್ಯಮಂತ್ರಿಗಳಾಗಿದ್ದರು ಮಾತ್ರವಲ್ಲ, ಗೌರಿ ಮೇಡಂ ಬಗ್ಗೆ ಪ್ರೀತಿ ಕಾಳಜಿ ಇರುವ ಆಪ್ತರು ಸರ್ಕಾರದ ಪ್ರಭಾವಿ ಹುದ್ದೆಗಳಲ್ಲಿ ಇದ್ದರು. ಮೇಡಂ ಮನವಿಯನ್ನು ಅವರ್‍ಯಾರೂ ನಿರ್ಲಕ್ಷಿಸದೆ ಸೂಕ್ತ ವ್ಯವಸ್ಥೆ ಮಾಡುತ್ತಿದ್ದರು. ಆದರೆ ಅಂತಹ ಮನವಿಗಳು ಅವರ ಆಯ್ಕೆಯಾಗಲಿಲ್ಲ. ಬದುಕಿನ ಆಸೆ ಅಷ್ಟೊಂದಿದ್ದರೆ ಕಾಡಿನಂತಹ ಆ ಒಂಟಿ ಮನೆಯಲ್ಲಿ ಸಿಸಿ ಕ್ಯಾಮೆರಾವೇ ಇಲ್ಲದೆ ಅವರು ಬದುಕುತ್ತಿರಲಿಲ್ಲ. ಅವರ ಹತ್ಯೆಗೆ ಕೆಲ ದಿನಗಳ ಹಿಂದಷ್ಟೇ ನಮ್ಮ ಮ್ಯಾನೇಜರ್ ರಾಜು ಅವರು ಗೌರಿ ಮೇಡಂ ಇಚ್ಛೆಗೆ ವಿರುದ್ಧ ಹಠ ಹಿಡಿದು, ಮನೆಗೆ ಸಿಸಿ ಕ್ಯಾಮೆರಾ ಹಾಕಿಸದೆ ಹೋಗಿದ್ದರೆ ಹಂತಕರ ಪತ್ತೆಯೂ ಕಷ್ಟವಾಗುತ್ತಿತ್ತೇನೊ. ನಮ್ಮ ಕಚೇರಿಗಂತೂ ಸಿಸಿ ಕ್ಯಾಮೆರಾವೇ ಇರಲಿಲ್ಲ.

ಹಾಗಂತ, ಹಂತಕರು ಬಂದು ನನ್ನನ್ನು ಕೊಂದುಹಾಕಲಿ ಎಂದು ಅವರು ಕಾದು ಕುಳಿತಿದ್ದರು ಅಂತ ನಾನು ಹೇಳುತ್ತಿಲ್ಲ. ಆದರೆ ಹಂತಕರ ಭಯ ಕೂಡಾ, ನಾನು ಮಾಡಬೇಕಾದ ಕೆಲಸದಿಂದ ನನ್ನನ್ನು ವಿಮುಖವಾಗಿಸಲು ಸಾಧ್ಯವಿಲ್ಲ ಎಂದು ಅವರು ನಿಶ್ಚಯಗೊಂಡಿದ್ದರು. ಆ ನಿಶ್ಚಯವೇ ಅವರಲ್ಲಿ ನಿರ್ಭೀತಿ ತಂದಿತ್ತು. ಆ ನಿರ್ಭೀತಿಯನ್ನು ನಾವು ಎಚ್ಚರದ ಕೊರತೆ ಎಂದು ಕರೆದು ಅವರ ಬಲಿದಾನವನ್ನು ಅವಮಾನಿಸಬಹುದೇ?

ಕೃಪೆ: ವಾರ್ತಾಭಾರತಿ. 05 ಸೆಪ್ಟೆಂಬರ್ 2024

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!