ತಂಬಾಕು ಹರಾಜು ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಅಕ್ರಮಗಳ ಕುರಿತು ಪ್ರಶ್ನೆ ಮಾಡಿದ್ದಕ್ಕೆ ರೈತನ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಚಿಲ್ಕುಂದದಲ್ಲಿ ನಡೆದಿದೆ.
ಹುಣಸೂರು ತಾಲೂಕಿನ ಕೊತ್ತೆಗಾಲ ಗ್ರಾಮದ ಕೃಷ್ಣಕುಮಾರ್ ಅವರು ತಂಬಾಕು ಹರಾಜು ಮಾರುಕಟ್ಟೆಯ ಸೂಪರಿಂಟೆಂಡೆಂಟ್ ಬ್ರಿಜ್ ಭೂಷಣ್ ಅವರಿಗೆ ಕರೆ ಮಾಡಿ, “ನಮ್ಮ ಕುಟುಂಬಕ್ಕೆ ಸೇರಿದ ಬ್ಯಾರನ್ ಅನ್ಫಿಟ್ ಇದ್ದು, ಅದನ್ನು ಮೂರು ವರ್ಷಗಳಿಂದ ಹೇಗೆ ರಿನೀವಲ್ ಮಾಡುತ್ತಿದ್ದೀರಿ. ಕ್ಷೇತ್ರ ಸಹಾಯಕ ಪ್ರಮೋದ್ ಸರಿಯಾಗಿ ಪರಿಶೀಲನೆ ಮಾಡದೆ ಹಣ ಪಡೆದು ಪ್ರತಿ ವರ್ಷ ರಿನೀವಲ್ ಮಾಡುತ್ತಿದ್ದಾರೆ. ಈ ಕುರಿತು ನಿಮ್ಮ ಗಮನಕ್ಕೆ ಇಲ್ಲವೇ” ಎಂದು ಪ್ರಶ್ನಿಸಿದ್ದಾರೆ.
ರೈತನ ಪ್ರಶ್ನೆಗೆ ಕುಪಿತಗೊಂಡ ಬ್ರಿಜ್ ಭೂಷಣ್, ಶನಿವಾರ ಬೆಳಿಗ್ಗೆ ಕೊತ್ತೆಗಾಲದ ಕೃಷ್ಣಕುಮಾರ್ ಮನೆ ಬಳಿ ಕ್ಷೇತ್ರ ಸಹಾಯಕ ಪ್ರಮೋದ್ ಎಂಬುವವರನ್ನು ಕಳುಹಿಸಿ ರೈತನನ್ನು ಅಡ್ಡಗಟ್ಟಿಸಿದ್ದು, ಬ್ರಿಜ್ ಭೂಷಣ್ ಸೇರಿದಂತೆ ಫೀಲ್ಡ್ ಅಸಿಸ್ಟೆಂಟ್ ಸಮೇತರಾಗಿ ಬಂದು ಅವಾಚ್ಯವಾಗಿ ನಿಂದಿಸಿದ್ದಾರೆ. ಅಲ್ಲದೆ, ಅದನ್ನು ಕೇಳಲು ನೀನು ಯಾರು? ನಿನ್ನನ್ನು ಸುಮ್ಮನೆ ಬಿಡುವುದಿಲ್ಲವೆಂದು ಧಮ್ಕಿ ಹಾಕಿ ಕಾಲಿನ ಬೂಟು ಕಳಚಿಕೊಂಡು ಹೊಡೆಯಲು ಮುಂದಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬ್ರಿಜ್ ಭೂಷಣ್ ಒಬ್ಬ ಅಧಿಕಾರಿಯಾಗಿ ಕರ್ತವ್ಯಲೋಪ ಎಸಗಿದ್ದಾರೆ; ತಪ್ಪನ್ನು ಪ್ರಶ್ನಿಸಿದ ರೈತನ ಮೇಲೆ ಹಲ್ಲೆಗೆ ಮುಂದಾಗಿರುವುದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.