ಮಂಡ್ಯ ಜಿಲ್ಲೆಯಲ್ಲಿ ಒಟ್ಟು 23 ಸಾವಿರ ಸಾಕು ನಾಯಿ, 56 ಸಾವಿರ ಬೀದಿ ನಾಯಿಗಳಿವೆ, ಮುಖ್ಯವಾಗಿ ಬೀದಿ ನಾಯಿಗಳ ಹಾವಳಿಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ದೂರುಗಳು ಕೇಳಿಬರುತ್ತಿದ್ದು, ಬೀದಿನಾಯಿಗಳ ಹಾವಳಿ ನಿಯಂತ್ರಿಸಬೇಕೆಂದು ಜಿಲ್ಲಾಧಿಕಾರಿ ಡಾ.ಕುಮಾರ ಅಧಿಕಾರಿಗಳಿಗೆ ಸೂಚಿಸಿದರು.
ಮಂಡ್ಯ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಇಂದು ಬೀದಿನಾಯಿಗಳ ಸಂತಾನ ನಿಯಂತ್ರಣ ಕುರಿತು ಸಭೆ ನಡೆಸಿ ಅವರು ಮಾತನಾಡಿದರು.
ಬೀದಿ ನಾಯಿಗಳಿಂದ ಸಾರ್ವಜನಿಕರಿಗೆ ತೊಂದರೆಯಾಗಬಾರದು ಎನ್ನುವ ದೃಷ್ಟಿಯಿಂದ ಸ್ಥಳೀಯ ಸಂಸ್ಥೆಗಳು ಮುತುವರ್ಜಿ ವಹಿಸಿ, ಮಾನವೀಯತೆ ರೀತಿಯಲ್ಲಿ ನಡೆದುಕೊಂಡು ಬೀದಿ ನಾಯಿಗಳನ್ನು ಹಿಡಿದು ಸಂತಾನ ನಿಯಂತ್ರಣ ಶಸ್ತ್ರ ಚಿಕಿತ್ಸೆ ಮಾಡಬೇಕು. ಬೀದಿ ನಾಯಿಗಳ ಸಂತಾನ ನಿಯಂತ್ರಣ (ಎಬಿಸಿ) ಮಾಡುವುದಕ್ಕೆ ಗ್ರಾಮ ಪಂಚಾಯತಿ ಹಾಗೂ ಸ್ಥಳೀಯ ಸಂಸ್ಥೆಗಳು ಕ್ರಮಕೈಗೊಳ್ಳಬೇಕು ಎಂದರು.
ಬೀದಿ ನಾಯಿಗಳ ಸಂತಾನ ನಿಯಂತ್ರಣ ಶಸ್ತ್ರ ಚಿಕಿತ್ಸೆ ಮಾಡುವುದಕ್ಕೆ ಒಂದು ನಾಯಿಗೆ 1,500 ವೆಚ್ಚ ತಗಲುತ್ತದೆ. ಗ್ರಾಮ ಪಂಚಾಯತಿ, ನಗರ ಸ್ಥಳೀಯ ಸಂಸ್ಥೆಗಳು ಇದಕ್ಕಾಗಿ ಅನುದಾನವನ್ನು ಕ್ರೂಢೀಕರಣ ಮಾಡಿಕೊಳ್ಳಬೇಕು ಮತ್ತು ಸಂತಾನ ನಿಯಂತ್ರಣ ಅನುಷ್ಠಾನ ಮಾಡುವ ಜೊತೆ ಜೊತೆಗೆ ಮುಖ್ಯವಾಗಿ anti-Rabies Vaccination ಕೂಡ ಮಾಡಬೇಕು ಎಂದು ಸೂಚಿಸಿದರು.
ಪಶುಪಾಲನೆ ಇಲಾಖೆ, ಸ್ಥಳೀಯ ಸಂಸ್ಥೆಯವರು ಸಮನ್ವಯದಿಂದ ಕಾರ್ಯನಿರ್ವಹಿಸಿ ಬೀದಿ ನಾಯಿ ಸಂತಾನ ನಿಯಂತ್ರಣ ಮಾಡಬೇಕು. ಸಂತಾನ ನಿಯಂತ್ರಣ ಶಸ್ತ್ರ ಚಿಕಿತ್ಸೆಯ ಸಂದರ್ಭದಲ್ಲಿ ಚಿಕಿತ್ಸೆಗಾಗಿ ಕೇಂದ್ರದ ಅವಶ್ಯಕತೆ ಇದೆ, ಹಾಗಾಗಿ ಮಂಡ್ಯ ಜಿಲ್ಲಾ ಸುತ್ತಮುತ್ತ ಅರ್ಧ ಎಕರೆ ಸ್ಥಳವನ್ನು ಗುರಿತಿಸಿ ಕೇಂದ್ರ ಸ್ಥಾಪಿಸುವುದಕ್ಕೆ ಚಿಂತಿಸಲಾಗುತ್ತಿದೆ. ಸಂತಾನ ನಿಯಂತ್ರಣ ಮಾಡುವಾಗ ಮಾನವೀಯ ರೀತಿಯಲ್ಲಿ ನಾಯಿಯನ್ನು ಹಿಡಿದು ಸಂತಾನ ನಿಯಂತ್ರಣ ಮಾಡಬೇಕು ಎಂದರು.
ಸಾರ್ವಜನಿಕರು ಸ್ವಚ್ಚತೆ ಕಾಪಡಿಕೊಳ್ಳಬೇಕು, ಎಲ್ಲೇಲ್ಲಿ ಹೆಚ್ಚು ಬೀದಿ ನಾಯಿಗಳ ಹಾವಳಿ ಇದೆ. ಅಂತಹ ಪ್ರದೇಶಗಳನ್ನ ಗುರುತಿಸಿ, ಆಧ್ಯತೆ ಮೇರೆಗೆ ಅಲ್ಲಿ ಸಂತಾನ ನಿಯಂತ್ರಣ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಲ್ಲಿ 23,721 ಮಂದಿಗೆ ನಾಯಿ ಕಚ್ಚಿದೆ. ಅವರಿಗೆಲ್ಲ ಚಿಕಿತ್ಸೆ ನೀಡಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮೋಹನ್ ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಶೇಕ್ ತನ್ವೀರ್ ಆಸಿಫ್, ಪಶುಪಾಲನಾ ವೈಧ್ಯಾಧಿಕಾರಿ ಡಾ.ಸುರೇಶ್, ನಗರಸಭೆ ಆಯುಕ್ತ ಮಂಜುನಾಥ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಜರಿದ್ದರು.