ರಾಜಸ್ಥಾನದಲ್ಲಿ ದಲಿತ ಬಾಲಕನನ್ನು ಕೊಂದ ಘಟನೆ ಹಾಗೂ ಬಿಲ್ಕಿಸ್ ಬಾನು ಮೇಲೆ ಅತ್ಯಾಚಾರ ಮಾಡಿದ ಆರೋಪಿಗಳ ಬಿಡುಗಡೆ ಖಂಡಿಸಿ ದಲಿತ ಹಕ್ಕುಗಳ ಸಮಿತಿ-ಕರ್ನಾಟಕ ಸಂಘಟನೆ ವತಿಯಿಂದ ಜಿಲ್ಲಾಧಿಕಾರಿ ಕಛೇರಿ ಮುಂಭಾಗ ತಮಟೆ ಚಳುವಳಿ ನಡೆಸಲಾಯಿತು.
ಸಂಘಟನೆಯ ರಾಜ್ಯ ಸಂಚಾಲಕ ಗೋಪಾಲಕೃಷ್ಣ ಹರಳಹಳ್ಳಿ ಮಾತನಾಡಿ, 75ನೇ ಸ್ಥಾತಂತ್ರ್ಯ ನಂತರವೂ ದಲಿತ ಕವಿ ಸಿದ್ದಲಿಂಗಯ್ಯನವರ ಕವಿವಾಣಿಯಂತೆ ದಲಿತರ ಮನೆಗೆ ಅಲ್ಲ ಎಂಬಂತೆ, ರಾಜಸ್ಥಾನದ ಜಿಲ್ಲೆಯಲ್ಲಿ ಇಂದಿರಾ ಮೇಘವಾಲ್ ಎಂಬ ಸರಿ ಸುಮಾರು 8 ವರ್ಷದ ಬಾಲಕ ಕುಡಿಯುವ ನೀರಿನ ಮಡಿಕೆ ಮುಟ್ಟಿದ ಎಂಬ ಕಾರಣಕ್ಕೆ ಶಿಕ್ಷಕನೇ ಕೊಲೆ ಮಾಡಿದ್ದಾನೆ.
ಇದೆಂತಹ ಸ್ವಾತಂತ್ರ್ಯ ಅಮೃತ ಮಹೋತ್ಸವ. ದಲಿತರಿಗೆ ಈ ಸಂಭ್ರಮವಿಲ್ಲದಂತಾಗಿದೆ. ಇಂತಹ ದೌರ್ಜನ್ಯವನ್ನು ದಲಿತ ಹಕ್ಕುಗಳ ಸಮಿತಿ, ಸಮಿತಿಯಿಂದ (ದಿ.ಹೆಚ್.ಎಸ್.) ತೀವ್ರವಾಗಿ ಖಂಡಿಸುತ್ತದೆ ಎಂದರು.
ರಾಜ್ಯ ಸಮಿತಿಯು ಪ್ರತಿಭಟನೆ ನಡೆಸಲು ರಾಜ್ಯಾದ್ಯಂತ ಕರೆ ನೀಡಿದೆ.ಅದರಂತೆ ಆಗಸ್ಟ್ 19ರಿಂದ 30ರವರೆಗೆ ಹೋರಾಟ ನಡೆಸಲು ನಿರ್ಧರಿಸಿದೆ. ರಾಜಸ್ಥಾನದ ಬಾಲಕನ ಸಾವಿಗೆ ಕಾರಣನಾದ ಶಿಕ್ಷಕನ ವಿರುದ್ಧ ಕ್ರಮ ಕೈಗೊಂಡು ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
75ನೇ ಸ್ವಾತಂತ್ರ್ಯ ಭಾರತ ಅಮೃತ ಮಹೋತ್ಸವದ ಸಂದರ್ಭದಲ್ಲಿ ಈ ಘಟನೆ ನಡೆದಿರುವುದು ನಾಚಿಕೆಗೇಡು ಎಂದರು.
ಇದೇ ಅಮೃತ ಮಹೋತ್ಸವದಂದು ಗುಜರಾತಿನ ಬಿಲ್ಕಿಸ್ ಬಾನು ಎಂಬ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ್ದಲ್ಲದೆ ಆಕೆಯ ಮಗು ಸಮೇತ ಏಳು ಮಂದಿ ಕೊಲೆ ಮಾಡಿದ ಅಪರಾಧಿಗಳನ್ನು ಬಿಡುಗಡೆ ಮಾಡಿದೆ.
ಈ ಅಪರಾಧಿಗಳು ದೇಶ ಭಕ್ತರಲ್ಲ, ನ್ಯಾಯಕ್ಕಾಗಿ ಹೋರಾಟ ಮಾಡಿದವರಲ್ಲ, ಸಣ್ಣ ವಯಸ್ಸಿನ ಮಗುವನ್ನು ಕೊಂದವರನ್ನು ಗುಜರಾತ್ ಸರ್ಕಾರ ಸನ್ನಡತೆ ಕಾರಣದಿಂದ ಬಿಡುಗಡೆ ಮಾಡಲಾಗಿದೆ.ಇದು ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಸಂವಿಧಾನ ಆಶಯಗಳನ್ನು ಬಿಜೆಪಿ ಸರ್ಕಾರ ಮಣ್ಣು ಮಾಡಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಐಟಿಯು ಸಂಘಟನೆಯ ಸಿ.ಕುಮಾರಿ,ದಲಿತ ಹಕ್ಕುಗಳ ಸಮಿತಿಯ ಶಂಕರ್, ಮಂಜು,ಜಯರಾಮ್, ಶ್ರೀನಿವಾಸ್, ಮಲ್ಲಿಕಾರ್ಜುನ ಸ್ವಾಮಿ, ಶಿವಲಿಂಗಯ್ಯ ಸೇರಿದಂತೆ ಹಲವರಿದ್ದರು.