ಭಾರತದಲ್ಲಿ ನಿರುದ್ಯೋಗ ದರವು ಡಿಸೆಂಬರ್ನಲ್ಲಿ ಮತ್ತುಷ್ಟು ಹೆಚ್ಚಳವಾಗಿದ್ದು, ಶೇಕಡಾ 8.3 ಕ್ಕೆ ಏರಿಯಾಗಿದೆ. ಇದು 16 ತಿಂಗಳಲ್ಲೇ ಅತ್ಯಧಿಕವಾಗಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (CMIE) ಸಂಸ್ಥೆ ತಿಳಿಸಿದೆ.
ನಗರ ನಿರುದ್ಯೋಗ ದರವು ಕಳೆದ ನವೆಂಬರ್ ನಲ್ಲಿ ಶೇಕಡಾ 8.96 ರಷ್ಟಿತ್ತು. ಅದು ಡಿಸೆಂಬರ್ನಲ್ಲಿ ಶೇಕಡಾ 10.09 ಕ್ಕೆ ಏರಿಕೆಯಾಗಿದೆ. ಗ್ರಾಮೀಣ ನಿರುದ್ಯೋಗ ದರವು ತುಸು ಇಳಿಕೆಯಾಗಿದ್ದು, ಶೇಕಡಾ 7.55 ರಿಂದ ಶೇಕಡಾ 7.44 ಕ್ಕೆ ಇಳಿದಿದೆ ಎಂದು CMIE ವರದಿ ತಿಳಿಸಿದೆ.
ನಿರುದ್ಯೋಗ ದರದ ಏರಿಕೆಯು “ಅದು ತೋರುವಷ್ಟು ಕೆಟ್ಟದ್ದಾಗಿಲ್ಲ, ಏಕೆಂದರೆ ಕಾರ್ಮಿಕ ಭಾಗವಹಿಸುವಿಕೆಯ ದರದಲ್ಲಿ ಆರೋಗ್ಯಕರ ಹೆಚ್ಚಳವಾಗಿದೆ, ಇದು ಡಿಸೆಂಬರ್ನಲ್ಲಿ ಶೇ.40.48ಕ್ಕೆ ಏರಿಕೆಯಾಗಿದೆ, ಇದು ಕಳೆದ 12 ತಿಂಗಳಲ್ಲೇ ಅತಿ ಹೆಚ್ಚು ಎಂದು CMIE ಯ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ವ್ಯಾಸ್ ಹೇಳಿದ್ದಾರೆ. “ಅತ್ಯಂತ ಮುಖ್ಯವಾಗಿ, ಡಿಸೆಂಬರ್ನಲ್ಲಿ ಉದ್ಯೋಗ ದರವು ಶೇಕಡಾ 37.1 ಕ್ಕೆ ಏರಿದೆ, ಇದು ಜನವರಿ 2022ಕ್ಕಿಂತ ಹೆಚ್ಚಾಗಿದೆ ಎಂದು ಅವರು ರಾಯಿಟರ್ಸ್ಗೆ ತಿಳಿಸಿದ್ದಾರೆ.
ಉದ್ಯೋಗ ಸೃಷ್ಟಿಸುವುದು ದೊಡ್ಡ ಸವಾಲು
ಹೆಚ್ಚಿನ ಹಣದುಬ್ಬರವನ್ನು ತಡೆದು, ಉದ್ಯೋಗ ಮಾರುಕಟ್ಟೆಗೆ ಪ್ರವೇಶಿಸುವ ಲಕ್ಷಾಂತರ ಯುವಕರಿಗೆ ಉದ್ಯೋಗಗಳನ್ನು ಸೃಷ್ಟಿಸುವುದು ದೇಶಕ್ಕೆ ದೊಡ್ಡ ಸವಾಲಾಗಿದೆ. 2024 ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತಕ್ಕೆ ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸಿ ಕೊಡುವುದೇ ದೊಡ್ಡ ಸವಾಲಾಗಿ ಪರಿಣಮಿಸಲಿದೆ.
ಹಣದುಬ್ಬರ, ಜೀವನಾವಶ್ಯಕ ವಸ್ತುಗಳ ಬೆಲೆ ಹೆಚ್ಚಳ, ನಿರುದ್ಯೋಗ ಮತ್ತು ಬಿಜೆಪಿಯ “ವಿಭಜನಕಾರಿ ರಾಜಕೀಯ” ದಂತಹ ವಿಷಯಗಳ ಬಗ್ಗೆ ಸಾರ್ವಜನಿಕ ಅಭಿಪ್ರಾಯವನ್ನು ಒಟ್ಟುಗೂಡಿಸಲು ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಪಕ್ಷ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋ ಯಾತ್ರೆ ಕೈಗೊಂಡು ಜನರನ್ನು ಹೆಚ್ಚಿಸುವ ಕೆಲಸದಲ್ಲಿ ತೊಡಗಿದೆ.
ಭಾರತವು ಜಿಡಿಪಿ ಬೆಳವಣಿಗೆಯ ಮೇಲೆ ಮಾತ್ರ ಗಮನ ಹರಿಸಿದರೆ ಸಾಕಾಗುವುದಿಲ್ಲ, ಉದ್ಯೋಗಗಳನ್ನು ಹೆಚ್ಚಿಸಿ ಯುವಜನರಿಗೆ ಕೆಲಸಗಳನ್ನು ಒದಗಿಸಬೇಕಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನಿನ್ನೆಯಷ್ಟೆ ಹೇಳಿದ್ದಾರೆ.