ಮನುಷ್ಯನ ರಕ್ತಕ್ಕೆ ಪರ್ಯಾಯ ರಕ್ತ ಲಭ್ಯವಿಲ್ಲ, ರಕ್ತಕ್ಕೆ ರಕ್ತವೇ ದಿವ್ಯೌಷಧವಾಗಿದೆ ಎಂದು ಭಾರತೀಯ ರೆಡ್ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಸಭಾಧ್ಯಕ್ಷೆ ಡಾ. ಮೀರಾಶಿವಲಿಂಗಯ್ಯ ಹೇಳಿದರು.
ಮಂಡ್ಯ ನಗರದ ಎಸ್.ಬಿ.ಶಿಕ್ಷಣ ಸಂಸ್ಥೆಯ ಮಾಂಡವ್ಯ ಪದವಿ ಕಾಲೇಜಿನಲ್ಲಿ ಭಾರತೀಯ ರೆಡ್ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ, ಮಾಂಡವ್ಯ ಪ್ರಥಮದರ್ಜೆ ಕಾಲೇಜು, ಅಂತರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಜಿಲ್ಲೆ-268 ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅಗತ್ಯಯುಳ್ಳವರಿಗೆ ತಕ್ಷಣವೇ ರಕ್ತ ನೀಡಲು ರಕ್ತದಾನಿಗಳು ನೀಡಿದ ರಕ್ತವನ್ನು ಬಳಸಿಕೊಳ್ಳುತ್ತಾರೆ, ಬೇಡಿಕೆಗೆ ಅನುಗುಣವಾಗಿ ರಕ್ತ ಲಭ್ಯವಾಗುತ್ತಿಲ್ಲ, ಅಪಘಾತಗೊಂಡಾಗ ರಕ್ತದ ಅಗತ್ಯತೆ ಇರುತ್ತದೆ, ಗರ್ಭಿಣಿಯರಿಗೆ ಬೇಕಾಗಿರುತ್ತದೆ, ಇಂತಹ ಸನ್ನಿವೇಶದಲ್ಲಿ ಸಂಗ್ರಹಗೊಂಡ ರಕ್ತ ಉಪಯುಕ್ತವಾಗುತ್ತದೆ ಎಂದು ನುಡಿದರು.
ಪ್ರಸ್ತುತ ದಿನಗಳಲ್ಲಿನ ಸರ್ಕಾರಿ ಆಸ್ಪತ್ರೆಗಳಲ್ಲಿ ರಕ್ತ ತುಂಬ ಅವಶ್ಯವಿದೆ, ನಮ್ಮ ಕಾಲೇಜಿನ ಪದವಿ ಮತ್ತು ಬಿ.ಇಡಿ ವಿಭಾಗದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸ್ವಯಂ ಪೇರಿತರಾಗಿ ರಕ್ತದಾನ ಮಾಡುತ್ತಿರುವುದು ಶ್ಲಾಘನೀಯ, ಯುವಜನತೆ ಮಾನವೀಯ ಮೌಲ್ಯಗಳನ್ನು ಹೆಚ್ಚಿಸಿಕೊಂಡು ಪರೋಪಕಾರವಾಗಿ ನೀಡುವುದು ರಕ್ತವಾಗಿದ್ದು, ಶ್ರೇಷ್ಠಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ರೆಡ್ಕ್ರಾಸ್ ನಿರ್ದೇಶಕ ಕೆ.ಟಿ.ಹನುಮಂತು ಮಾತನಾಡಿ, ರೆಡ್ಕ್ರಾಸ್ ಸಂಸ್ಥೆ ರಕ್ತದಾನಕ್ಕೆ ಬಹಳ ಹೆಸರುವಾಸಿಯಾಗಿದೆ, ಇತ್ತೀಚಿನ ದಿನಗಳಲ್ಲಿ ಬೇಡಿಕೆಗೆ ಅನುಸಾರ ರಕ್ತ ಲಭ್ಯವಾಗುತ್ತಿಲ್ಲ, ರಕ್ತದಾನಿಗಳು ಹೊಸದಾಗಿ ಹುಟ್ಟುಕೊಳ್ಳುತ್ತಿಲ್ಲ, ರಕ್ತಕ್ಕೆ ಕೊರತೆ ಉಂಟಾಗಿದೆ ಎಂದರು.
ಮಿಮ್ಸ್ ರಕ್ತನಿಧಿ ಕೇಂದ್ರಕ್ಕೆ ಪತ್ರಿತಿಂಗಳು 1 ಸಾವಿರ ಯುನಿಟ್ ರಕ್ತ ಬೇಕಾಗಿದೆ, 700ರಿಂದ 800ಯುನಿಟ್ ರಕ್ತ ಮಾತ್ರ ಲಭ್ಯವಾಗುತ್ತಿದೆ, ಇಡೀ ದೇಶದಲ್ಲಿ ನೀರ ಕೊರತೆಯೊಂದಿಗೆ ರಕ್ತದಾನದ ಕೊರತೆಯು ಹೆಚ್ಚಾಗುತ್ತಿದೆ ಎಂದು ನುಡಿದರು.
ಗ್ರಾಮೀಣ ಭಾಗದಲ್ಲಿ ರಕ್ತದಾನಕ್ಕಾಗಿ ಎಷ್ಟೇ ಜಾಗೃತಿ ಮೂಡಿಸಿದರೂ ಪ್ರಯೋಜನವಾಗುತ್ತಿಲ್ಲ, ಗ್ರಾಮೀಣ ಯುವಜನತೆ ರಕ್ತದಾನ ಮಾಡುವುದರಲ್ಲಿ ತೊಡಗಿಸಿಕೊಳ್ಳುತ್ತಿಲ್ಲ, ಆದ್ದರಿಂದ ಶಿಕ್ಷಣ ಸಂಸ್ಥೆಗಳತ್ತ ಹೆಚ್ಚು ಒತ್ತು ನೀಡುತ್ತೇವೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಮಾಡಿದ ಯುವ ರಕ್ತದಾನಿಗಳಿಗೆ ಪ್ರಮಾಣಪತ್ರ ಮತ್ತು ಸಿಹಿ-ತಿನಿಸುಗಳನ್ನು ನೀಡಿದರು. ರಕ್ತದ ಗುಂಪು ಮಾಹಿತಿಯನ್ನು ನೀಡಲಾಯಿತು. 40 ಯುನಿಟ್ ರಕ್ತ ಸಂಗ್ರಹಿಸಿ ಮಿಮ್ಸ್ ರಕ್ತನಿಧಿ ಕೇಂದ್ರಕ್ಕೆ ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಂಡವ್ಯ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಡಾ.ಶಿವಕುಮಾರ್, ಮಾಂಡವ್ಯ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಮಹೇಶ್, ಬಿ.ಇಡಿ ಪ್ರಾಂಶುಪಾಲರಾದ ಡಾ.ಸುಮಾರಾಣಿ, ಮಿಮ್ಸ್ ರಕ್ತನಿಧಿ ಕೇಂದ್ರದ ಸಿಬ್ಬಂದಿಗಳು ಮತ್ತು ಕಾಲೇಜಿನ ಸಿಬ್ಬಂದಿಗಳು ಹಾಜರಿದ್ದರು.