ಪಾಂಡವಪುರ ಪುಟ್ಟಣದಲ್ಲಿ ಹೊಸದಾಗಿ ನಿರ್ಮಿಸಿದ ರಸ್ತೆಗಳನ್ನು ಜೀಯೊ ಕೇಬಲ್ ಅಳವಡಿಸಲು ಅಗೆದು ಹಾಳು ಮಾಡಲಾಗಿದೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಕೆಂಡಮಂಡಲರಾದ ಶಾಸಕ ಸಿ.ಎಸ್.ಪುಟ್ಟರಾಜು ಸಾರ್ವಜನಿಕ ಸಮಾರಂಭವೊಂದರಲ್ಲೇ ಮಹಿಳಾ ಮುಖ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು ಕಿಡಿಕಾರಿದ ಘಟನೆ ಪಾಂಡವಪುರ ಪಟ್ಟಣದಲ್ಲಿ ನಡೆದಿದೆ.
ಪಾಂಡವಪುರ ಪಟ್ಟಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ತಾಲ್ಲೂಕು ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಶಾಸಕ ಸಿ.ಎಸ್.ಪುಟ್ಟರಾಜು ಅವರು, ವೇದಿಕೆಯಲ್ಲಿ ಕುಳಿತಿದ್ದ ಪುರಸಭೆಯ ಮಹಿಳಾ ಮುಖ್ಯಾಧಿಕಾರಿ ವೀಣಾ ಅವರನ್ನು ತರಾಟೆಗೆ ತೆಗೆದುಕೊಂಡು, ”ಬಹಳ ಅತಿಯಾಗೋಯ್ತು ನಿಂದು, ಗೌರವ ಕೊಟ್ಟು ಗೌರವ ತಗೋಬೇಕು. ಯಾರ್ನ ಹೇಳಿ ಗುಂಡಿ ಹೊಡೆಯೋಕೆ ಪರ್ಮಿಷನ್ ಕೊಟ್ಟಮ್ಮ ನೀನು” ಎಂದು ಕಿಡಿಕಾರಿದರು.
ಇದರಿಂದ ವಿಚಲಿತರಾದ ಮುಖ್ಯಾಧಿಕಾರಿ ಇಂಜಿನಿಯರ್ ಚೌಡಪ್ಪ ಎಂಬುವರಿಗೆ ಕರೆ ಮಾಡಿ, ಮೊಬೈಲ್ನನ್ನು ಶಾಸಕರಿಗೆ ಕೊಟ್ಟರು, ನಂತರ ಇಂಜಿನಿಯರ್ ಅವರನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ”ಜಿಯೋ ಕೇಬಲ್ ಗೆ ಗುಂಡಿ ಹೊಡಿಯೋಕೆ ಯಾರ್ ಹೇಳಿದ್ದು ನಿನ್ಗೆ.. ಬಾ ನಿನ್ಗೆ ಜನ್ರು ಕೈಲಿ ಶಾಸ್ತಿ ಮಾಡಿಸ್ತೀನಿ. ಯಾವನಯ್ಯ ನಿನ್ಗೆ ಗುಂಡಿ ಹೊಡೆಯೋಕೆ ಹೇಳ್ದೋರು, ಹೇಯ್ ಬಾ ಇಲ್ಲಿ ನಿನಗೆ ಪೂಜೆ ಮಾಡಿಸ್ತೀನಿ” ಎಂದು ಕೆಂಡಮಂಡಲರಾದರು.
ನಂತರ ಸಮಾರಂಭದಲ್ಲಿ ಮಾತನಾಡಿದ ಶಾಸಕ ಪುಟ್ಟರಾಜು ಅವರು, ಇವತ್ತು ಹಣ ಬಿಡುಗಡೆ ಮಾಡಿಸ್ಕೊಂಡು ಬಂದು ರಸ್ತೆ ಮಾಡೋದು ಎಷ್ಟು ಕಷ್ಟ ಇದೆ ಗೊತ್ತಾ… ಅಂತದ್ರಲ್ಲಿ ಹಣ ತಂದು ರಸ್ತೆ ಮಾಡಿದ್ರೆ, ಸುಮಾರು 9 ಕೋಟಿ ರೂ. ವೆಚ್ಚದ ರಸ್ತೇನಾ ಹಾಳುವೆಡವಿದ್ದೀರಿ, ಇನ್ನೂ ಮೂರು ದಿನದಲ್ಲಿ ರಸ್ತೆನಾ ಸರಿ ಮಾಡ್ಬೇಕು, ಇಲ್ಲಂದ್ರೆ ಎಲ್ಲಿ ಎನ್ ಮಾಡ್ಬೇಕು ನನಗೆ ಗೊತ್ತಿದೆ ಎಂದು ಮುಖ್ಯಾಧಿಕಾರಿಗೆ ಎಚ್ಚರಿಕೆ ನೀಡಿದರು.