ತಂಬಾಕು ನಿಯಂತ್ರಣ ಕಾಯ್ದೆಗಳನ್ನು ಪರಿಣಾಮಕಾರಿಯಾದ ರೀತಿಯಲ್ಲಿ ಅನುಷ್ಠಾನಗೊಳಿಸಲು ಹಾಗೂ ಎಲ್ಲ ಶಿಕ್ಷಣ ಸಂಸ್ಥೆಗಳನ್ನು ಶೇ 100ರಷ್ಟು ತಂಬಾಕು ಮುಕ್ತಗೊಳಿಸಲು, ಹಾಗೆಯೇ ಜಿಲ್ಲೆಯ ಎಲ್ಲ ಸಾರ್ವಜನಿಕ ಸ್ಥಳಗಳನ್ನು ಶೇ 100ರಷ್ಟು ತಂಬಾಕು ಹೊಗೆ ಮುಕ್ತಗೊಳಿಸಲು ಆರೋಗ್ಯ ಹಾಗೂ ಇನ್ನಿತರ ಇಲಾಖೆಗಳೊಡನೆ ಆರಕ್ಷಕ ಇಲಾಖೆಯು ನಿರಂತರ ಪರಿಣಾಮಕಾರಿಯಾಗಿ ಶ್ರಮಿಸಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಟಿ.ಎನ್.ಧನಂಜಯ ತಿಳಿಸಿದರು.
ಮಂಡ್ಯ ಜಿಲ್ಲಾ ಸರ್ವೆಕ್ಷಣಾ ಘಟಕದ ತರಬೇತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ 2022-23ನೇ ಸಾಲಿನ ಐದನೇ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ತರಬೇತಿಯಲ್ಲಿ ತಂಬಾಕು ಉತ್ಪನ್ನಗಳ ಬಳಕೆಯಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಸಮಗ್ರವಾಗಿ ಆರಕ್ಷಕ ಅಧಿಕಾರಿಗಳಿಗೆ ಮಾಹಿತಿ ನೀಡಿ ಜಿಲ್ಲೆಯಲ್ಲಿ ತಂಬಾಕು ನಿಯಂತ್ರಣ ಸಂಬಂಧದ ಕೋಟ್ಪಾ ಕಾಯಿದೆಯನ್ನು ಪರಿಣಾಮಕಾರಿಯಾದ ರೀತಿಯಲ್ಲಿ ಅನುಷ್ಠಾನ ಗೊಳಿಸುವ ಅಗತ್ಯತೆ ಬಗ್ಗೆ ತಿಳಿಸಲಾಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಂ.ಡಿ.ಸಂಜಯ್, ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಸಮುದಾಯ ವೈದ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ.ಸುಭಾಷ್ ಬಾಬು, ಜಿಲ್ಲಾ ದಂತ ಅಧಿಕಾರಿ ಡಾ.ಅರುಣಾನಂದ, ಹಿರಿಯ ದಂತ ವೈದ್ಯಾಧಿಕಾರಿ ಡಾ.ಸ್ಮಿತಾ,ಜಿಲ್ಲಾ ಸಲಹೆಗಾರ ತಿಮ್ಮರಾಜು, ಸಮಾಜ ಕಾರ್ಯಕರ್ತ ಮೋಹನ್ ಕುಮಾರ್ ಶಿಬಿರಾರ್ಥಿಗಳಿಗೆ ವಿವಿಧ ವಿಷಯಗಳ ಬಗೆಗೆ ತರಬೇತಿ ನೀಡಿದರು. ಆರೋಗ್ಯ ಮೇಲ್ವೀಚಾರಕ ಶಿವಸ್ವಾಮಿ ನಿರೂಪಿಸಿದರೆ, ದತ್ತಾಂಶ ಸಹಾಯಕ ರಾಕೇಶ್ ತಾಂತ್ರಿಕ ಸಹಕಾರ ನೀಡಿದರು.