ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮೀಷನ್ ಆರೋಪ ಮಾಡಿದ್ದ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಹೃದಯಾಘಾತ ದಿಂದ ಸಾವನ್ನಪ್ಪಿದ್ದು, ಅವರ ನಿಧನಕ್ಕೆ ಮಂಡ್ಯ ಜಿಲ್ಲಾ ಗುತ್ತಿಗೆದಾರ ಸಂಘದ ವತಿಯಿಂದ ನಗರದ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ಕಚೇರಿಯಲ್ಲಿರುವ ಜಿಲ್ಲಾ ಗುತ್ತಿಗೆದಾರರ ಸಂಘದ ಕಚೇರಿಯಲ್ಲಿ ಗುತ್ತಿಗೆದಾರರು ನುಡಿ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಂಡ್ಯ ಜಿಲ್ಲಾ ಗುತ್ತಿಗೆದಾರ ಸಂಘದ ಅಧ್ಯಕ್ಷ ಎಂ.ಎಚ್.ಯತಿರಾಜ್ ಮಾತನಾಡಿ ಡಿ.ಕೆಂಪಣ್ಣನವರು ಹಿಂದಿನ ಸರ್ಕಾರದ ಅವಧಿಯಲ್ಲಿ ದೇಶಾದ್ಯಂತ ಸುದ್ದಿ ಮಾಡಿದ್ದ 40% ಕಮಿಷನ್ ಹಗರಣವನ್ನು ಹೊರತಂದು, ಗುತ್ತಿಗೆ ಕಾಮಗಾರಿ ಗಳಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರದ ವಿರುದ್ಧ ಅವರು ಸೆಟೆದು ನಿಂತಿದ್ದರು. ಅವರನ್ನು ಕಳೆದುಕೊಂಡಿರುವುದು ಗುತ್ತಿಗೆದಾರರಿಗೆ ತುಂಬಲಾರದ ನಷ್ಟವಾಗಿದೆ. ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬ ವರ್ಗಕ್ಕೆ ಈ ನೋವು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದರು.
ಡಿ.ಕೆಂಪಣ್ಣ ಅವರು ಮಂಡ್ಯ ಜಿಲ್ಲೆಯಲ್ಲಿ ಗುತ್ತಿಗೆದಾರರ ಸಂಘವನ್ನು ಜಿಲ್ಲೆಯಲ್ಲಿ ಸಂಘಟನೆ ಮಾಡಲು ಸಹಾಯ ಮಾಡಿದ್ದಾರೆ. ಜಿಲ್ಲೆಯಲ್ಲಿ ನಡೆಯುವ ಕಾರ್ಯ ಕ್ರಮಗಳಿಗೆ ಫೋನ್ ಮಾಡಿದರೆ ಸಾಕು ಅವರು ಬರುತ್ತಿದ್ದರು ಎಂದು ತಿಳಿಸಿದರು.
ಮಂಡ್ಯ ಜಿಲ್ಲಾ ಗುತ್ತಿಗೆದಾರರ ಸಂಘದ ಕಾರ್ಯದರ್ಶಿ ಕೆ.ರವೀಂದ್ರ ಮಾತನಾಡಿ, ಕೆಂಪಣ್ಣ ಅವರು ಗುತ್ತಿಗೆದಾರರಿಗೋಸ್ಕರ ತಮ್ಮ ಜೀವನವನ್ನು ಮೀಸಲಿಟ್ಟು ಶೇಕಡ 40% ಕಮಿಷನ್ ಆರೋಪದ ಸಂಚಲನ ಮೂಡಿಸಿದರು ಎಂದು ಹೇಳಿದರು.
ಡಿ.ಕೆಂಪಣ್ಣ ಅವರು ತಮ್ಮ ಕೊನೆ ಉಸಿರಿರುವವರೆಗೂ ಗುತ್ತಿಗೆದಾರರಿಗೋಸ್ಕರ ಹೋರಾಟ ಮಾಡಿದರು. ಗುತ್ತಿಗೆದಾರರ ನಡೆ-ನುಡಿಗಳ ಬಗ್ಗೆ ಉತ್ಸುಕತೆಯಿಂದ ಕೆಲಸ ಮಾಡುತ್ತಿದ್ದರು ಎಂದು ಹೇಳಿದರು.
ಪ್ರಥಮ ದರ್ಜೆ ಗುತ್ತಿಗೆದಾರ ಜಿ.ಬಿ.ಭೈರವ ಮಾತನಾಡಿ ಡಿ.ಕೆಂಪಣ್ಣ ಅವರು ಗುತ್ತಿಗೆದಾರರ ಸಮಸ್ಯೆಗಳ ಪರವಾಗಿ ಹೋರಾಟ ಮಾಡಿದವರು ಎಂದು ಹೇಳಿದರು.
ರಾಜ್ಯದಲ್ಲಿ ಯಾರೇ ಗುತ್ತಿಗೆದಾರರು ನಿಧನ ಹೊಂದಿದ್ದರೆ ಅವರ ಕುಟುಂಬಕ್ಕೆ 10 ಲಕ್ಷ ರೂ. ಸಿಗುವ ರೀತಿ ಹೋರಾಟ ಮಾಡಿದವರು ಎಂದು ಹೇಳಿದ ಅವರು ಗುತ್ತಿಗೆದಾರರ ಸಂಘದ ಅಧ್ಯಕ್ಷ ಹುದ್ದೆಗೆ ಘನತೆ ಗೌರವ ತರುವ ರೀತಿ ನಡೆದುಕೊಂಡು ಕೆಲಸ ಮಾಡಿದ್ದಾರೆ. ಗುತ್ತಿಗೆದಾರರಿಗೆ ತಂದೆ ಸಮಾನರಾಗಿ ಇದ್ದ ಕೆಂಪಣ್ಣ ಅವರನ್ನು ಕಳೆದು ಕೊಂಡಿರುವುದು ರಾಜ್ಯ ಹಾಗೂ ಜಿಲ್ಲೆಯ ಗುತ್ತಿಗೆದಾರರಿಗೆ ತುಂಬಲಾರದ ದುಃಖ ಆಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗುತ್ತಿಗೆದಾರರಾದ ಸಿದ್ದೇಗೌಡ, ಶ್ರೀನಿಧಿ, ಹನುಮಂತೇಗೌಡ, ದೇವರಾಜು, ವೆಂಕಟೇಶ್, ಜಿ.ಬಿ.ನವೀನ್ ಕುಮಾರ್, ತೂಬಿನಕೆರೆ ಚನ್ನೇಗೌಡ, ನಾಗರಾಜು ಸೇರಿದಂತೆ ಹಲವು ಜನ ಗುತ್ತಿಗೆದಾರರು ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.