ಬಿಜೆಪಿಯ ಹಿರಿಯ ಮುಖಂಡ ಎಲ್ ಕೆ ಅಡ್ವಾಣಿಯವರು ಇತ್ತೀಚೆಗೆಯಷ್ಟೇ ಅನಾರೋಗ್ಯಕ್ಕೀಡಾಗಿದ್ದರು. ಆ ಬಳಿಕ ಚಿಕಿತ್ಸೆ ಪಡೆದು ಸದ್ಯ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಆದರೆ ಕೇಂದ್ರ ಸಚಿವ ವಿ.ಸೋಮಣ್ಣ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಎಡವಟ್ಟು ಮಾಡಿಕೊಂಡಿದ್ದು, ಬದುಕಿರುವ ಅಡ್ವಾಣಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಪ್ರಸಂಗ ಶನಿವಾರ ತುಮಕೂರಿನಲ್ಲಿ ನಡೆದಿದೆ.
ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದ ಹೊರವಲಯದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಕಾರ್ಯಕರ್ತರ ಸಭೆಯನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ವಿ ಸೋಮಣ್ಣ ಅತಿಥಿಯಾಗಿ ಭಾಗವಹಿಸಿದ್ದರು.
ಕೇಂದ್ರ ಸಚಿವ ವಿ.ಸೋಮಣ್ಣ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಎಡವಟ್ಟು ಮಾಡಿಕೊಂಡಿದ್ದು, ಬದುಕಿರುವ ಅಡ್ವಾಣಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಪ್ರಸಂಗ ಶನಿವಾರ ತುಮಕೂರಿನ ಗುಬ್ಬಿಯಲ್ಲಿ ನಡೆದಿದೆ. “ಅಡ್ವಾಣಿ ನಿಧನರಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಎಲ್ಲರೂ ಎದ್ದು ನಿಂತು ಮೌನಾಚರಣೆ ಮಾಡಿ” ಎಂದ ಸೋಮಣ್ಣ. ಸತ್ಯ ತಿಳಿದ ಬಳಿಕ ಕ್ಷಮೆಯಾಚನೆ. pic.twitter.com/DfDIp4nLWd
— eedina.com ಈ ದಿನ.ಕಾಮ್ (@eedinanews) July 6, 2024
“>
ಈ ವೇಳೆ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಿರುವ ನಡುವೆಯೇ, “ಇದೀಗ ತಾನೇ ಮಾಹಿತಿ ಬಂದಿದೆ. ಅಡ್ವಾಣಿಯವರು ಸಾವನ್ನಪ್ಪಿದ್ದಾರೆ. ನಾನು ದೆಹಲಿಗೆ ಹೋಗಬೇಕಿದೆ. ಈ ವಿಚಾರಕ್ಕೆ ದೆಹಲಿಗೆ ತೆರಳಬೇಕಾಗಿರುವ ಕಾರಣ ಕಾರ್ಯಕ್ರಮ ಮತ್ತೊಮ್ಮೆ ಮಾಡೋಣ. ಎಲ್ಲರೂ ಎದ್ದು ನಿಂತು ಮೌನಾಚರಣೆ ಮಾಡಿ” ಎಂದು ಬಹಿರಂಗ ಸಭೆಯಲ್ಲಿ ಸೋಮಣ್ಣ ಮನವಿ ಮಾಡಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಅಲ್ಲಿ ನೆರೆದಿದ್ದ ಜನಸಮೂಹ ಮಾತ್ರವಲ್ಲದೆ, ಗುಬ್ಬಿಯ ಬಿಜೆಪಿ-ಜೆಡಿಎಸ್ ಮುಖಂಡರು ಮೌನಾಚರಣೆ ಮಾಡಿದ್ದಾರೆ.
ಒಂದು ನಿಮಿಷದ ಮೌನಾಚರಣೆ ಆಚರಿಸಿ ಮೊಟಕುಗೊಳಿಸಿದ ಬಳಿಕ, “ಇನ್ನೂ ಅಧಿಕೃತ ಮಾಹಿತಿ ಸಿಕ್ಕಿಲ್ಲ” ಎಂದು ಹೇಳಿದ್ದಾರೆ. ನಿಧನ ಸುದ್ದಿ ಸುಳ್ಳು ಎಂಬ ವಿಚಾರ ತಿಳಿದು, ಕೂಡಲೇ ನೆರೆದಿದ್ದವರಲ್ಲಿ ಕ್ಷಮೆ ಕೇಳಿದ್ದಾರೆ. ಆ ಬಳಿಕ ತಮ್ಮ ಕಾರ್ಯಕ್ರಮವನ್ನು ಮುಂದುವರಿಸಿದ್ದಾರೆ.
ಕೇಂದ್ರ ಸಚಿವರ ಈ ನಡೆಯಿಂದ ಇಡೀ ಕಾರ್ಯಕ್ರಮದಲ್ಲಿ ಒಮ್ಮೆಲೆ ಗೊಂದಲವುಂಟಾಗಿ, ನೆರೆದಿದ್ದವರಲ್ಲಿ ಕಸಿವಿಸಿಗೆ ಕಾರಣವಾಯಿತು. ಸಚಿವ ಸೋಮಣ್ಣನವರ ಹೇಳಿಕೆಯು ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದೆ.