ಕೆ.ಆರ್.ಪೇಟೆ ತಾಲ್ಲೂಕಿನ ಅಂಬಿಗರ ಹಳ್ಳಿಯ ತ್ರಿವೇಣಿ ಸಂಗಮವು ಪ್ರಮುಖ ತೀರ್ಥ ಕ್ಷೇತ್ರವಾಗಿ ಗುರುತಿಸಿಕೊಳ್ಳಲಿ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ಕೆ.ಸಿ.ನಾರಾಯಣಗೌಡ ಆಶಿಸಿದರು.
ಅಂಬಿಗರಹಳ್ಳಿಯ ತ್ರಿವೇಣಿ ಸಂಗಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಶ್ರೀ ಮಲೈ ಮಹದೇಶ್ವರ ಸ್ವಾಮಿಯ ಪ್ರತಿಷ್ಠಾಪನ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ದೇವಾಲಯ ಪ್ರವೇಶ ಮಾಡಿ ಅ.14 ರಂದು ಸಂಜೆಯಿಂದ ಅಕ್ಟೋಬರ್ 15, 16 ರಂದು ಬೆಳಿಗ್ಗೆಯವರೆಗೂ ಕುಂಭಮೇಳ ಸಂಬಂಧಪಟ್ಟಂತೆ ಕಳಸ ಪೂಜೆಗಳು ಹಾಗೂ ಇನ್ನಿತರ ಪೂಜಾ ಕಾರ್ಯಕ್ರಮಗಳು ನಡೆಸಿ ಗುರುಗಳಿಂದ ಭಗವಂತನ ಸ್ಥಾಪನೆ ಮಾಡಲಾಗುವುದು ಎಂದು ಅವರು ವಿವರಿಸಿದರು.
ಚಂದ್ರವನಾಶ್ರಮದ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಮಾತನಾಡಿ, ಭಗವಂತನ ಸ್ಥಳದಲ್ಲಿ ಪೂಜೆಯನ್ನು ಮಾಡಿ ಕುಂಭಮೇಳಕ್ಕೆ ಹೆಚ್ಚಿನ ಶಕ್ತಿಯನ್ನು ತುಂಬುವಂತಹ ಕೆಲಸವನ್ನು ಮಾಡಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದರು.
ಇದನ್ನೂ ಓದಿ: ಕುಂಭಮೇಳದಲ್ಲಿ ಆದಿ ಶಂಕರರಿಗಿಲ್ಲ ಪ್ರಾಶಸ್ತ್ಯ !!
2013ರಲ್ಲಿ ಕುಂಭಮೇಳ ಸಣ್ಣ ಪ್ರಮಾಣದಲ್ಲಿ ಆಗಿತ್ತು, ಈ ಬಾರಿ ಬಹಳ ವಿಜೃಂಭಣೆಯಿಂದ ಹಾಗೂ ಬಹಳ ವಿಶೇಷತೆಯಿಂದ ಇಡೀ ಭಾರತಕ್ಕೆ ಹೆಸರುವಾಸಿಯಾಗುವಂತಹ ಮಹಾಕುಂಭ ಮೇಳ ಕಾರ್ಯಕ್ರಮವನ್ನು ಆಚರಣೆ ಮಾಡಲಾಗುವುದು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪೂಜೆಯನ್ನು ಸಲ್ಲಿಸಿ ಪುಣ್ಯ ಸ್ನಾನವನ್ನು ಮಾಡಬೇಕು ಎಂದರು.
ಇದೇ ವೇಳೆ ಜಿಲ್ಲಾಧಿಕಾರಿ ಎಸ್.ಅಶ್ವತಿ, ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಾಂತಾ ಎಲ್.ಹುಲ್ಮನಿ, ಉಪ ವಿಭಾಗಾಧಿಕಾರಿ ಶಿವಾನಂದಮೂರ್ತಿ, ತಹಶೀಲ್ದಾರ್ ಎಂ.ವಿ.ರೂಪ ಉಪಸ್ಥಿತರಿದ್ದರು.