ಕೆರೆಯಲ್ಲಿ ಈಜಲು ಹೋದ ಮೈಸೂರಿನ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಮಂಡ್ಯ ತಾಲೂಕಿನ ಎಲೆಚಾಕನಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಮೈಸೂರಿನ ಶಾಂತಿನಗರದ ನಿವಾಸಿ ಮಕ್ಮುಲ್ ಪಾಷಾ ಅವರ ಪುತ್ರ ಮುಬಾರಕ್ ಪಾಷಾ(30), ಮಂಡ್ಯದ ಬೀಡಿ ಕಾರ್ಮಿಕರ ಕಾಲನಿ ನಿವಾಸಿ ಶಬ್ಬೀರ್ ಅಹಮ್ಮದ್(26) ಮೃತರು. ಗಾರೆ ಕೆಲಸ ಮಾಡುತ್ತಿದ್ದ ಇವರಿಬ್ಬರು ಎಲೆಚಾಕನಹಳ್ಳಿ ಗ್ರಾಮದಲ್ಲಿ ನಾರಾಯಣಸ್ವಾಮಿ ಎಂಬುವರ ಮನೆ ನಿರ್ಮಾಣಕ್ಕೆ ಎಲೆಚಾಕನಹಳ್ಳಿಗೆ ಹೋಗಿದ್ದರು.
ಭಾನುವಾರ ಕೆಲಸಕ್ಕೆ ಬಿಡುವು ನೀಡಿದ ಹಿನ್ನಲೆಯಲ್ಲಿ ಈಜಲೆಂದು ಇಬ್ಬರೂ ಗ್ರಾಮ ಕೆರೆಗೆ ಹೋಗಿದ್ದಾರೆ. ಅಲ್ಲಿ ನೀರಿನಲ್ಲಿ ಮುಳುಗಿ ಕೊನೆಯುಸಿರೆಳೆದಿದ್ದಾರೆ. ಇಬ್ಬರ ಶವಗಳನ್ನು ಮಂಡ್ಯ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಮಂಡ್ಯ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.