ಉರಿಗೌಡ ನಂಜೇಗೌಡ ಇದ್ದರೋ ಇಲ್ಲವೋ ಗೊತ್ತಿಲ್ಲ, ಬಿಜೆಪಿಯವರು ಹೇಳೋ ಪ್ರಕಾರ ಇವರಿಬ್ಬರು ಬ್ರೀಟಿಷರ ಬೂಟು ನೆಕ್ಕಿದ ನಾಯಿಗಳು….ಆ ಇಬ್ಬರು ಹೇಡಿಗಳ ಹೆಸರು ಇದ್ದ ಜಾಗಕ್ಕೆ ಒಕ್ಕಲಿಗರ ಕುಲದೇವರು ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಹೆಸರು ಇಡುವ ಮೂಲಕ ಬಿಜೆಪಿ ಇಡೀ ಒಕ್ಕಲಿಗ ಸಮುದಾಯಕ್ಕೆ ಅವಮಾನ ಮಾಡಿದೆ ಎಂದು ಹೆಚ್.ಡಿ.ದರ್ಶನ್ ಗೌಡ ಎಂಬುವವರು ಬರೆದು ಸಾಮಾಜಿಕ ಜಾಲತಾಣದಲ್ಲಿ ಬರೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಸ್ವಾಗತಕ್ಕಾಗಿ ಮಂಡ್ಯನಗರದ ಮೈಷುಗರ್ ವೃತ್ತದ ಬಳಿ ಶನಿವಾರವೇ ವಿವಾದಾತ್ಮಕ ಉರಿಗೌಡ, ನಂಜೇಗೌಡ ಮಹಾದ್ವಾರ ಎಂದು ಬಿಜೆಪಿ ನಾಯಕರು ಪ್ಲೆಕ್ಸ್ ಹಾಕಿದ್ದರು. ಇದಕ್ಕೆ ಮಂಡ್ಯ ಜಿಲ್ಲೆಯ ಪ್ರಗತಿಪರರು ತೀವ್ರ ವಿರೋಧ ವ್ಯಕ್ತಪಡಿಸಿ, ಕೂಡಲೇ ಈ ವಿವಾದಾತ್ಮಕ ಪ್ಲೆಕ್ಸ್ ತೆರವುಗೊಳಿಸಬೇಕು, ಇಲ್ಲವಾದರೆ ಪ್ರಧಾನಿ ಆಗಮಿಸುವ ವೇಳೆಯಲ್ಲೇ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದರು. ಕೊನೆಗೆ ಇದರಿಂದ ಎಚ್ಚೆತ್ತ ಜಿಲ್ಲಾಡಳಿತ ರಾತ್ರೋರಾತ್ರಿ ವಿವಾದಾತ್ಮಕ ಉರಿಗೌಡ, ನಂಜೇಗೌಡ ಪ್ಲೆಕ್ಸ್ ಅನ್ನು ತೆರವುಗೊಳಿಸಿ, ಅದೇ ಜಾಗದಲ್ಲಿ ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಮಹಾದ್ವಾರ ಎಂದು ಪ್ಲೆಕ್ಸ್ ಹಾಕಿಸುವಲ್ಲಿ ಶ್ರಮಿಸಿತ್ತು.
ಆದರೆ ಕಾಲ್ಪನಿಕ ವ್ಯಕ್ತಿಗಳಾದ ಉರಿಗೌಡ ನಂಜೇಗೌಡ ಪ್ಲೆಕ್ಸ್ ತೆರವುಗೊಳಿಸಿದ ಅದೇ ಜಾಗದಲ್ಲಿ 2ನೇ ಆಯ್ಕೆಯಾಗಿ ಶ್ರೀಬಾಲಗಂಗಾಧರನಾಥ ಅವರ ಹೆಸರನ್ನು ಹಾಕಿದ್ದು ಒಕ್ಕಲಿಗ ಸಮುದಾಯವನ್ನು ಕೆರಳಿಸಿದೆ. ಬಿಜೆಪಿ ನಾಯಕರ ಈ ಕ್ರಮಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.