”ವಂದೇ ಭಾರತ್” ಎಕ್ಸ್ಪ್ರೆಸ್ಗೆ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡುತ್ತಿದ್ದು, ಈ ಅವಧಿಯಲ್ಲಿ 27 ರೈಲುಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ರೈಲುಗಳಿಗೆ ಚಾಲನೆ ನೀಡುವ ಕಾರ್ಯಕ್ರಮ ಶುಕ್ರವಾರ (ನ.11)ರಂದು ನಡೆಯಲಿದ್ದು. ಬೆಂಗಳೂರಿನ ಕೆಎಸ್ಆರ್ ನಿಲ್ದಾಣದ 8ನೇ ಪ್ಲಾಟ್ಫಾರ್ಮ್ನಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿದೆ, ಈ ಹಿನ್ನೆಲೆಯಲ್ಲಿ ಪ್ಲಾಟ್ಫಾರ್ಮ್ಗಳಿಗೆ ರೈಲುಗಳ ಆಗಮನ ಮತ್ತು ನಿರ್ಗಮನವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ನ.11ರ ಬೆಳಗ್ಗೆ 8 ರಿಂದ 11 ಗಂಟೆಗೆ ಬೆಂಗಳೂರಿನಿಂದ ಹೊರಡಬೇಕಿದ್ದ ರೈಲುಗಳನ್ನು ಮಧ್ಯಾಹ್ನ 12 ಗಂಟೆ ನಂತರಕ್ಕೆ ಹೊರಡುವಂತೆ ಶೆಡ್ಯೂಲ್ ಮಾಡಲಾಗಿದೆ. ಇಂದು ಬೆಳಗ್ಗೆ ಕೆಎಸ್ಆರ್ ರೈಲ್ವೇ ನಿಲ್ದಾಣ ಪ್ರವೇಶಿಸಬೇಕಾದ್ದ ಎಲ್ಲ ರೈಲುಗಳನ್ನು ಯಶವಂತಪುರ ಮತ್ತು ಬೈಯಪ್ಪನಹಳ್ಳಿ ಮಾರ್ಗಕ್ಕೆ ಬದಲಾಯಿಸಲಾಗಿದೆ.
ರೈಲುಗಳ ವ್ಯತ್ಯಯದಿಂದಾಗಿ ಮಂಡ್ಯ, ಮೈಸೂರು, ಮದ್ದೂರು, ಚನ್ನಪಟ್ಟಣ, ರಾಮನಗರ ಮಾರ್ಗವಾಗಿ ದಿನನಿತ್ಯ ಸಂಚರಿಸುತ್ತಿದ್ದ ಸಾವಿರಾರು ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.