ಬಿಜೆಪಿ ಪಕ್ಷವು ನನ್ನ ಪತಿಗೆ ಯಾವುದೇ ಸ್ಥಾನಮಾನ ನೀಡದೇ ಅನ್ಯಾಯ ಮಾಡಿತ್ತು ಎಂದು ಇತ್ತೀಚೇಗೆ ಕಿಡಿಕಾರಿದ್ದ ನಿವೃತ್ತ ಐಎಎಸ್ ಅಧಿಕಾರಿ ಹಾಗೂ ನಟ ಕೆ.ಶಿವರಾಂ ಅವರ ಪತ್ನಿ ವಾಣಿ ಕೆ.ಶಿವರಾಂ ಅವರು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಮ್ಮುಖದಲ್ಲಿ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಅವರೊಂದಿಗೆ ಆರ್.ಆರ್ ನಗರ ಮಾಜಿ ಕಾರ್ಪೊರೇಟರ್ ರೂಪ ಲಿಂಗೇಶ್, ಮಡಿವಾಳ ಸಮುದಾಯದ ಮುಖಂಡ ಗೋಪಿ ಕೃಷ್ಣ, ಛಲವಾದಿ ಸಮುದಾಯದ ಅನೇಕ ಮುಖಂಡರು ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ರಾಜ್ಯದಾದ್ಯಂತ ಛಲವಾದಿಗಳ ಸಂಘಟನೆಯಲ್ಲಿ ಕಟ್ಟಿ, ಜನಮಾನಸದಲ್ಲಿ ಹೆಸರಾಗಿದ್ದ ಕೆ.ಶಿವರಾಂ ಅವರು ಇತ್ತೀಚೆಗೆ ನಿಧನರಾಗಿದ್ದರು. ಅವರು ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರೂ ಅವರಿಗೆ ಯಾವುದೇ ಸ್ಥಾನಮಾನಗಳು ಲಭ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರ ಪತ್ನಿ ವಾಣಿ ಶಿವರಾಂ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.