ಮಂಡ್ಯ ನಗರ ಹಾಗೂ ಪಟ್ಟಣಗಳ ಹೃದಯ ಭಾಗದಲ್ಲಿ ವಿಷ್ಣುವರ್ಧನ್ ಪುತ್ಥಳಿ ಸ್ಥಾಪನೆ ಮಾಡಿ, ರಸ್ತೆಯೊಂದಕ್ಕೆ ವಿಷ್ಣುವರ್ಧನ್ ಹೆಸರು ಇಡಬೇಕು ವಿಷ್ಣುವರ್ಧನ್ ಅಭಿಮಾನಿಗಳು ಆಗ್ರಹಿಸಿದರು.
ಮಂಡ್ಯದಲ್ಲಿ ವಿಷ್ಣು ಸೇನಾ ಸಮಿತಿ ಜಿಲ್ಲಾಧ್ಯಕ್ಷ ವಿಷ್ಣು ವಿಠಲ್ ಮಾತನಾಡಿ, 13 ವರ್ಷದ ಹೋರಾಟದ ಫಲ ಇವತ್ತು ವಿಷ್ಣು ಸ್ಮಾರಕ ಮೈಸೂರಿನ ಬಳಿ ಅನಾವರಣವಾಗ್ತಿದೆ. ಅಭಿಮಾನಿಗಳ ಕನಸು ನನಸಾಗಿದೆ. ಸರ್ಕಾರ ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಮಾಡ್ತಿರೋದನ್ನ ಬಿಡಬೇಕು ಎಂದರು.
ಮಂಡ್ಯದಿಂದ ಹೊರಟ ನೂರಾರು ವಿಷ್ಣುವರ್ಧನ್ ಅಭಿಮಾನಿಗಳು
ಸಾಹಸಸಿಂಹ, ಅಭಿನವ ಭಾರ್ಗವ ಹಾಗೂ ಅಭಿಮಾನಿಗಳ ಹೃದಯ ಡಾ.ವಿಷ್ಣುವರ್ಧನ್ ಅವರ ಸ್ಮಾರಕ ಲೋಕಾರ್ಪಣೆ ಕಾರ್ಯಕ್ರಮವು ಮೈಸೂರಿನಲ್ಲಿ ನಡೆಯಲಿದ್ದು, ನೂರಾರು ಅಭಿಮಾನಿಗಳು ಗ್ರಾಮ, ಪಟ್ಟಣ ಹಾಗೂ ನಗರದಿಂದ ಪ್ರಯಾಣ ಬೆಳೆಸಿದರು.
ಮಂಡ್ಯ ನಗರದ ಜೆಸಿ ವೃತ್ತದ ಬಳಿ ಜಮಾಯಿಸಿದ ಅಭಿಮಾನಿಗಳು ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳ್ಳಿ ಸಾರೋಟಿನಲ್ಲಿ ವಿಷ್ಣುವರ್ಧನ್ ಅವರ ಆಳೆತ್ತರದ ಭಾವಚಿತ್ರ ಇರಿಸಿ ಘೋಷಣೆಗಳನ್ನು ಕೂಗುತ್ತಾ ಸಾಗಿದರು.
ವಿಷ್ಣು ಅಭಿಮಾನಿಗಳ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು, ಮಂಡ್ಯ ವಿಷ್ಣು ಸೇನಾ ಸಮಿತಿಯು ಈ ಸಾರಥ್ಯ ವಹಿಸಿದ್ದು, ಇದಕ್ಕೆ ನೂರಾರು ಅಭಿಮಾನಿಗಳು ಆಟೋ, ಕಾರ್ ಹಾಗೂ ಕ್ಯಾಬ್ ಗಳಲ್ಲಿ ಸಾಗಿ ಸಾಥ್ ನೀಡಿದರು.
ಈ ನಡುವೆ ಪಟಾಕಿ ಸಿಡಿಸಿ ವಿಷ್ಣುವರ್ಧನ್ ಅಭಿಮಾನಿಗಳ ಸಂಭ್ರಮಿಸಿದರೆ, ಕೆಲವು ಅಭಿಮಾನಿಗಳು ಬಸ್ ನಲ್ಲಿಯೂ ತೆರಳಿದರು.
ಸತೀಶ್, ಮಾಚಹಳ್ಳಿ ಶಶಾಂಕ್, ಶಿವಶಂಕರ್, ಮಾರ್ಕೇಟ್ ಕೃಷ್ಣ, ಮೋಹನ್, ಮಹದೇವ, ಜಗದೀಶ್, ಕಿರಣ, ಸ್ವಾಮಿ ಸೇರಿದಂತೆ ನೂರಾರು ಅಭಿಮಾನಿಗಳು ಭಾಗವಹಿಸಿದ್ದರು.