ಪ್ರತಿದಿನ ಬೆಳಗಿನ ಜಾವದ ನಡಿಗೆ ವಾಕ್, ವ್ಯಾಯಾಮ ಮಾಡುವುದರಿಂದ ಹೃದಯ ಸಂಬಂಧಿ ಕಾಯಿಲೆ ತಡೆಯಬಹುದು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ತಿಳಿಸಿದರು.
ನಾಗಮಂಗಲದಲ್ಲಿ ನಡೆದ ಬಿ.ಜಿ.ಎಸ್ ವಾಕಾಥಾನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೊದಲು 60 ವರ್ಷ ಮೇಲ್ಪಟ್ಟವರಲ್ಲಿ ಹೃದಯ ಸಂಬಂಧಿ ಕಾಯಿಲೆ ಕಾಣಿಸಿಕೊಳ್ಳುತ್ತಿತ್ತು, ಇಂದಿನ ಜನರ ಜೀವನ ಶೈಲಿ ಬದಲಾಗಿದ್ದು, ಚಿಕ್ಕ ಮಕ್ಕಳಲ್ಲೂ ಹೃದಯ ಸಂಬಂಧಿ ಕಾಯಿಲೆ ಕಾಣುತ್ತಿದೆ. ಇದನ್ನು ತಡೆಯಲೂ ಚಿಕ್ಕ ವಯಸ್ಸಿನಿಂದಲೇ ನಡಿಗೆಯನ್ನು ರೂಢಿಸಿಕೊಳ್ಳಬೇಕು. ಮಕ್ಕಳು ತಮ್ಮ ಮನೆಯಲ್ಲಿರುವ ಪೋಷಕರಿಗೂ ಬೆಳಗಿನ ಸಮಯ ನಡಿಗೆಯ ಅಭ್ಯಾಸ ಮಾಡಿಸಬೇಕು ಎಂದರು.
ನಿತ್ಯ ಜೀವನದಲ್ಲಿ ನಡಿಗೆ ಇರಲಿ. ಪ್ರತಿದಿನ ಸಮಯ ಸಿಕ್ಕಾಗೆಲ್ಲಾ ನಡಿಗೆಯಲ್ಲಿ ನಿಮ್ಮ ದಿನ ಆರಂಭಿಸಿ. ಇದರಿಂದ ಹೃದಯ ಸಂಬಂಧಿ ಕಾಯಿಲೆ ಹಾಗೂ ಆರೋಗ್ಯ ಪೂರ್ಣ ಜೀವನ ನಿಮ್ಮದಾಗುತ್ತದೆ. ಹಣ, ಅಧಿಕಾರ, ಆಸ್ತಿಯಿಂದ ಮನುಷ್ಯ ಆರೋಗ್ಯವಾಗಿರಲು ಸಾಧ್ಯವಿಲ್ಲ. ಪ್ರತಿದಿನ ನೀವು ನಡೆಯುವ ನಡಿಗೆ ಆರೋಗ್ಯದ ಜೊತೆಗೆ ಎಲ್ಲವನ್ನೂ ತಂದುಕೊಡುತ್ತದೆ ಎಂದರು.
ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಶ್ರೀನಿರ್ಮಲಾನಂದ ಸ್ವಾಮೀಜಿ ಮಾತನಾಡಿ, ನಾವು ಮಾಡುವ ತಪ್ಪುಗಳನ್ನು ದೇವರು ಕ್ಷಮಿಸಬಹುದು. ವ್ಯಾಯಮ, ಯೋಗ, ನಡಿಗೆ ಮಾಡದಿದ್ದರೆ ದೇಹದ ಜೀವಕೋಶ ಕ್ಷಮಿಸುವುದಿಲ್ಲ. ಉತ್ತಮ ಆರೋಗ್ಯಕ್ಕಾಗಿ ವಾಕ್ ಮಾಡಿ ಎಂದರು.
ನಾವು ವಿವಿಧ ರೀತಿಯ ಕ್ರೀಡೆಗಳಿಗೆ ಪ್ರೋತ್ಸಾಹ ನೀಡಿ ನೋಡಿ ಸಂತೋಷ ಪಡುತ್ತೇವೆ. ಪಾಲ್ಗೊಳ್ಳಲು ಸೋಮರಿತಾನದಿಂದ ಹಿಂದೇಟು ಹಾಕುತ್ತೇವೆ. ಈ ಮನಸ್ಥಿತಿಯನ್ನು ದೂರಮಾಡಿಕೊಳ್ಳಬೇಕು ಎಂದರು. ವಾಕಾಥಾನ್ ನಲ್ಲಿವ 12 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. 6 ಕಿ.ಮೀ ಕ್ಕೂ ಹೆಚ್ಚು ಕಿ.ಮೀ ನಡಿಗೆ ನಡೆಸಿದರು.
ಇದೇ ಸಂದರ್ಭದಲ್ಲಿ ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಂದನಾಥ ಸ್ವಾಮೀಜಿ, ಶಂಭುನಾಥನಂದ ಸ್ವಾಮೀಜಿ, ಮಂಗಳನಾಥನಂದ ಸ್ವಾಮೀಜಿ, ಚಂದ್ರಶೇಖರನಾಥ ಸ್ವಾಮೀಜಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮೋಹನ್, ಚಲನಚಿತ್ರ ನಟ ಧನ್ವೀರ್ ಸೇರಿದಂತೆ ಇನ್ನಿತರ ಗಣ್ಯರು ಹಾಜರಿದ್ದರು.