ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ತೆಗೆದು ಹೆಂಡತಿಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆಗೈದ ವ್ಯಕ್ತಿಗೆ ಮಂಡ್ಯದ 2ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆಯೊಂದಿಗೆ 20 ಸಾವಿರ ರೂ. ದಂಡ ವಿಧಿಸಿ ಸೋಮವಾರ ತೀರ್ಪು ನೀಡಿದೆ.
ಮಳವಳ್ಳಿ ತಾಲ್ಲೂಕಿನ ಬೆಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರ ಮಹದೇವಸ್ವಾಮಿ ಶಿಕ್ಷೆಗೆ ಗುರಿಯಾದ ವ್ಯಕ್ತಿ
ಘಟನೆಯ ವಿವರ
ಮಹದೇವಸ್ವಾಮಿ ಎಂಬ ವ್ಯಕ್ತಿ ಗೀತಾ ಅವರನ್ನು ಜೂ.19, 2006ರಂದು ಶಾಸ್ರೋಕ್ತವಾಗಿ ಮದುವೆಯಾಗಿದ್ದ. ನಂತರ ಪತ್ನಿಯ ಜೊತೆ ಸಂಸಾರದ ವಿಚಾರದಲ್ಲಿ ಸಣ್ಣ-ಪುಟ್ಟ ಮಾತಿಗೂ ಆಗಾಗ್ಗೆ ಜಗಳ ಮಾಡುತ್ತಾ ಗೀತಾ ಅವರಿಗೆ ಬಾಯಿಗೆ ಬಂದಂತೆ ಬೈಯುತ್ತಾ, ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ಮತ್ತು ಕಿರುಕುಳವನ್ನು ನೀಡುತ್ತಿದ್ದ.
ಫೆ.21, 2020 ರಂದು ರಾತ್ರಿ 9 ಗಂಟೆಯ ಸಮಯದಲ್ಲಿ ತನ್ನ ಬಾಡಿಗೆಗೆ ವಾಸವಾಗಿದ್ದ ಔಟ್ ಹೌಸ್ನ ಒಳಭಾಗದ ಸ್ನಾನದ ಮನೆಗೆ ಗೀತಾ ಹೋದಾಗ, ಆರೋಪಿಯು ತನ್ನ ಗೀತಾಳನ್ನು ಕೊಲೆ ಮಾಡುವ ಉದ್ದೇಶದಿಂದ ಈ ದಿನ ನಿನ್ನನ್ನು ಸಾಯಿಸುತ್ತೇನೆಂದು ಅಲ್ಲೇ ಕ್ಯಾನ್ನಲ್ಲಿದ್ದ ಸೀಮೆಎಣ್ಣೆಯನ್ನು ತೆಗೆದುಕೊಂಡು ಗೀತಾಳ ತಲೆ ಮತ್ತು ಮೈ ಮೇಲೆ ಸುರಿದು ಬೆಂಕಿ ಕಡ್ಡಿಯಿಂದ ಗೀತಾಳಿಗೆ ಬೆಂಕಿಯನ್ನು ಹಚ್ಚಿದ್ದು, ಇದರಿಂದ ಗೀತಾಳಿಗೆ ಮೈ ಮೇಲೆ ಸುಟ್ಟಗಾಯಗಳಾಗಿದ್ದು, ಗೀತಾಳನ್ನು ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ, ಮಾ.17,2020 ರಂದು ರಾತ್ರಿ 8-17 ಗಂಟೆಯ ಸಮಯದಲ್ಲಿ ಗೀತಾ ಮೃತಪಟ್ಟಿದ್ದರು.
ಈ ಪ್ರಕರಣದ ಬಗ್ಗೆ ತನಿಖಾಧಿಕಾರಿ ಧನರಾಜ್ ಡಿ.ಪಿ. (ಸಿ.ಪಿ.ಐ) ತನಿಖೆ ಕೈಗೊಂಡು, ಭಾದಂಸಂ ಕಲಂ.498(ಎ), 302 ಅಡಿ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.
ಈ ಪ್ರಕರಣವು ಮಂಡ್ಯದ 2ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸಯ್ಯುದುನಿಶಾ ಅವರ ಮುಂದೆ ವಿಚಾರಣೆ ನಡೆದು, ಆರೋಪಿ ಮಹದೇವಸ್ವಾಮಿಗೆ ಭಾದಂಸಂ ಕಲಂ.302 ರ ಅಡಿಯಲ್ಲಿನ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಮತ್ತು 2,00.000 ರೂ. ದಂಡವನ್ನು ವಿಧಿಸಿ, ದಂಡವನ್ನು ಪಾವತಿಸಲು ತಪ್ಪಿದಲ್ಲಿ ಒಂದು ವರ್ಷ ಸಾದಾ ಶಿಕ್ಷೆಯನ್ನು ಹಾಗೂ ಭಾದಂಸಂ ಕಲಂ.498(ಎ) ರ ಅಡಿಯಲ್ಲಿನ ಅಪರಾಧಕ್ಕೆ ಎರಡು ವರ್ಷಗಳ ಕಠಿಣ ಕಾರಾಗೃಹ ವಾಸ ಹಾಗೂ 50,000 ರೂ.ದಂಡವನ್ನು, ದಂಡ ಪಾವತಿಸಲು ತಪ್ಪಿದಲ್ಲಿ 6 ತಿಂಗಳ ಸಾದಾ ಶಿಕ್ಷೆಯನ್ನು ಅನುಭವಿಸತಕ್ಕದ್ದು ಎಂದು ತೀರ್ಪು ನೀಡಿದ್ದಾರೆ.
ಅಭಿಯೋಜನೆಯ ಪರವಾಗಿ ಸರ್ಕಾರಿ ಅಭಿಯೋಜಕರಾದ ಎನ್.ಟಿ.ವಿಜಯಲಕ್ಷ್ಮಿ ವಾದ ಮಂಡಿಸಿದ್ದರು.