ಮದ್ದೂರು ತಾಲೂಕಿನ ಹೆಮ್ಮನಹಳ್ಳಿ ಗ್ರಾಮದ ದೊಡ್ಡಕೆರೆಯಲ್ಲಿ ಅವೈಜ್ಞಾನಿಕವಾಗಿ ಮಣ್ಣು ತೆಗೆದು ಅಧಿಕ ಬೆಲೆಗೆ ಮಾರಾಟ ಮಾಡುತ್ತಿರುವ ವ್ಯಕ್ತಿಗಳ ವಿರುದ್ಧ ನರೇಗಾ ಯೋಜನೆಯ ಕೂಲಿ ಕಾರ್ಮಿಕರು ಪ್ರತಿಭಟನೆ ನಡೆಸಿದರು.
ಮದ್ದೂರು ತಾಲೂಕಿನ ಹೆಮ್ಮನಹಳ್ಳಿ ಗ್ರಾಮದ ದೊಡ್ಡಕೆರೆ ಬಳಿ ಜಮಾವಣೆಗೊಂಡ 150ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಮಣ್ಣು ಸಾಗಿಸುತ್ತಿದ್ದ ವ್ಯಕ್ತಿಗಳ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರಲ್ಲದೇ ಕೂಡಲೇ ಮಣ್ಣು ಸಾಗಿಸುವುದನ್ನು ತಡೆಗಟ್ಟಬೇಕೆಂದರು.
ಕಾವೇರಿ ನೀರಾವರಿ ನಿಗಮ ಇಲಾಖೆಗೆ ಒಳಪಡುವ ಕೆರೆಯಲ್ಲಿ ಕಳೆದ ಹಲವು ದಿನಗಳಿಂದಲೂ ಕೆಲ ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಮಣ್ಣು ತೆಗೆಯುತ್ತಿದ್ದು ಮತ್ತು ತಮಗಿಷ್ಟ ಬಂದಂತೆ ಅಧಿಕ ಆಳವಾಗಿ ಮಣ್ಣು ತೆಗೆಯುತ್ತಿರುವುರಿಂದ ಹಲವು ಅನಾಹುತಗಳು ಸಂಭವಿಸಬಹುದಾಗಿದ್ದು ಕೂಡಲೇ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಂತಹ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ನರೇಗಾ ಯೋಜನೆಯಡಿ ಕೆರೆ ಹೂಳೆತ್ತುವ ಕಾಮಗಾರಿ 30 ಲಕ್ಷ.ರೂ ಹಣ ಬಿಡುಗಡೆಯಾಗಿದ್ದು ಈ ಸಂಬAಧ ಕಳೆದ 15 ದಿನಗಳಿಂದಲೂ ನೂರಾರು ಕಾರ್ಮಿಕರು ಹೂಳೆತ್ತುವ ಕರ್ತವ್ಯದಲ್ಲಿ ತೊಡಗಿದ್ದು ಕೆಲ ಖಾಸಗಿ ವ್ಯಕ್ತಿಗಳು ಜೆಸಿಬಿ ಮತ್ತು ಟ್ರಾಕ್ಟರ್ ಮೂಲಕ ಆಗಮಿಸಿ ಅವೈಜ್ಞಾನಿಕವಾಗಿ ಮಣ್ಣು ತೆಗೆಯುತ್ತಿದ್ದು ಇದನ್ನು ಪ್ರಶ್ನಿಸಲು ಮುಂದಾದ ಕಾರ್ಮಿಕರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿರುವುದಾಗಿ ದೂರಿದರು.
ಗ್ರಾ.ಪಂ. ಅನುಮತಿ ಪಡೆಯದೆ ಬೇಕಾಬಿಟ್ಟಿ ಮಣ್ಣು ತೆಗೆದು ಅಧಿಕ ಬೆಲೆಗೆ ರೈತರಿಗೆ ಮಾರಾಟ ಮಾಡುತ್ತಿದ್ದು ನರೇಗಾ ಯೋಜನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಮಿಕರ ಕೆಲಸಕ್ಕೂ ಅಡ್ಡಿಪಡಿಸುತ್ತಿದ್ದು ಈ ಸಂಬಂಧ ಪಿಡಿಓ ಲೀಲಾವತಿ ಅವರು ಪ್ರಶ್ನಿಸಲು ಮುಂದಾದ ವೇಳೆ ಬೆದರಿಕೆಯೊಡ್ಡುವ ಪ್ರಕರಣವು ಜರುಗಿರುವುದಾಗಿ ಆರೋಪಿಸಿದರು.
ಈ ಸಂಬಂಧ ಇಲಾಖೆ ಅಧಿಕಾರಿಗಳ ಗಮನಕ್ಕೂ ತಂದರೂ ಯಾವುದೇ ಕ್ರಮಕ್ಕೆ ಮುಂದಾಗದೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದು ಒಂದು ವಾರದೊಳಗಾಗಿ ತಪ್ಪಿತಸ್ಥರ ವಿರುದ್ಧ ಅಧಿಕಾರಿಗಳು ಕ್ರಮವಹಿಸದಿದ್ದಲ್ಲಿ ಬೃಹತ್ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಪಿಡಿಓ ಲೀಲಾವತಿ, ನರೇಗಾ ಯೋಜನೆಯಡಿ ಮೀಸಲಿಟ್ಟಿರುವ 30 ಲಕ್ಷ ರೂ. ವೆಚ್ಚದಲ್ಲಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದು ಕೆಲ ವ್ಯಕ್ತಿಗಳು ಮಣ್ಣು ತೆಗೆದು ಅಧಿಕ ಬೆಲೆಗೆ ಮಾರಾಟ ಮಾಡುವ ಜತೆಗೆ ಕೆರೆ ಅಂಗಳದಲ್ಲಿ ಅಧಿಕ ಹೊಂಡಗಳನ್ನು ಸೃಷ್ಠಿ ಮಾಡುತ್ತಿದ್ದು ಇದನ್ನುಪ್ರಶ್ನಿಸಲು ಮುಂದಾದ ವೇಳೆ ಕಾರ್ಮಿಕರು ಮತ್ತು ತಮಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದು ಈ ಸಂಬಂಧ ಕೆಸ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿರುವುದಾಗಿ ತಿಳಿಸಿದ್ದಾರೆ.
ಪ್ರತಿಭಟನೆ ವೇಳೆ ನರೇಗಾ ಕೂಲಿ ಕಾರ್ಮಿಕರಾದ ಶಿವಣ್ಣ, ಭವಾನಿ, ಶ್ರೀನಿವಾಸ್, ರಾಮಚಂದ್ರು, ಗೌರಮ್ಮ, ಅಪ್ಪೇಗೌಡ, ಶಾಂತಮ್ಮ, ಭಾಗ್ಯ, ಸುಧಾ, ಉಷಾ, ಕುಶಾಲಮ್ಮ, ಕೆಂಪಮ್ಮ, ಬೋರಮ್ಮ ನೇತೃತ್ವ ವಹಿಸಿದ್ದರು.