ಮಾನಸಿಕ ರೋಗಿಗಳಿಗೆ ಮನೋಚೈತನ್ಯ ತುಂಬಿ ಸಮಾಜಮುಖಿಯಾಗಲು ರೋಗಿಗೆ ಉತ್ತಮ ಚಿಕಿತ್ಸೆಯ ಜೊತೆ ಸಮುದಾಯದ, ಕುಟುಂಬದ ಪ್ರೀತಿ, ವಿಶ್ವಾಸ, ಆರೈಕೆ ಬೆಂಬಲ ಅತ್ಯಾವಶ್ಯಕವೆಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರ್ ಹೇಳಿದರು.
ಶ್ರೀರಂಗಪಟ್ಟಣ ಟೌನ್ ವ್ಯಾಪ್ತಿಯ ಭೋವಿ ಕಾಲೋನಿಯ ಮುತ್ತು ಮಾರಮ್ಮನ ದೇವಸ್ಥಾನದ ಆವರಣದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ಆಯೋಜಿಸಿದ್ದ “ವಿಶ್ವ ಸ್ಕಿಜೋಫ್ರೀನಿಯಾ ಸಪ್ತಾಹ” ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಸ್ಕಿಜೋಫ್ರೀನಿಯಾ ಒಂದು ಮಾನಸಿಕ ಅಸ್ವಸ್ಥತೆಯಾಗಿದ್ದು ಇದು ವ್ಯಕ್ತಿಯ ಯೋಚನೆ,ವರ್ತನೆ ಹಾಗೂ ನಡವಳಿಕೆಯ ಮೇಲೆ ಗಂಭೀರ ಪರಿಣಾಮ ಬೀರಿ ಮಾನಸಿಕ ಅಸ್ವಸ್ಥತೆ ಉಂಟುಮಾಡುತ್ತದೆ ಇತ್ತೀಚೆಗೆ ಆಧುನಿಕ ಜೀವನ ಶೈಲಿಯಿಂದಾಗಿ ಕೆಲಸದ ಒತ್ತಡದಿಂದ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದು ಹೀಗಾಗಿ ಉತ್ತಮವಾದ ನಿದ್ರೆ, ನಿಯಮಿತ ವ್ಯಾಯಾಮ, ಧ್ಯಾನ ಮಾಡುವುದರ ಮೂಲಕ, ಹೊಸ ಕೌಶಲ್ಯಗಳನ್ನು ಕಲಿಯುವ ಮುಲಕ,ಆರೋಗ್ಯಕರ ಆಹಾರ ಸೇವಿಸುವ ಮೂಲಕ, ಪ್ರಕೃತಿಯೊಂದಿಗೆ ಬೆರೆಯುವ ಮೂಲಕ ಜೆತೆಗೆ ಸಮಯ ಪಾಲನೆ ಮತ್ತು ಮಾನಸಿಕ ಒತ್ತಡವನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಬಿ.ಮಂಗಳ ಮಾತನಾಡಿ, ಯಾವುದೇ ಮಾನಸಿಕ ಕಾಯಿಲೆಗೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಮನೋಚೈತನ್ಯ ಕಾರ್ಯಕ್ರಮದಡಿಯಲ್ಲಿ ಉಚಿತ ಚಿಕಿತ್ಸೆ, ಸಲಹೆ ನೀಡಲಾಗುತ್ತಿದೆ. ಸ್ಕೀಜೋಫ್ರೀನಿಯಾ ಕಾಯಿಲೆ ಬಗ್ಗೆ ಆತಂಕ ಬೇಡ ಸೂಕ್ತ ಚಿಕಿತ್ಸೆಯಿಂದ ಸಹಜ ಜೀವನ ಪಡೆಯಬಹುದಾಗಿದ್ದು ಜೆತೆಗೆ ಶುಲ್ಕ ರಹಿತ ಸಂಖ್ಯೆ14416 ಟೆಲಿ ಮನಸ್ ಗೆ ಕರೆ ಮಾಡಿ ಸೂಕ್ತ ,ಆಪ್ತ ಸಮಾಲೋಚನೆ ಪಡೆಯಬಹುದಾಗಿದೆ ಎಂದರು.
ಈ ವೇಳೆ ಅಂಗನವಾಡಿ ಕಾರ್ಯಕರ್ತೆ ಅಕ್ಷತಾ, ಆಶಾ ಕಾರ್ಯಕರ್ತೆ ಅಶ್ವಿನಿ ಹಾಗೂ ಗರ್ಭಿಣಿಯರು, ಮಕ್ಕಳ ತಾಯಂದಿರು ಹಾಜರಿದ್ದರು.